
ಬೆಂಗಳೂರು: ಇತ್ತೀಚಿಗೆ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಮೂಡುಬಿದಿರೆಯ ಇನ್ಸ್ಪೆಕ್ಟರ್ ಲೈಂಗಿಕ ಆರೋಪ ಎದುರಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಪ್ರತಿಕ್ರಿಯಿಸಿದ್ದು “ಒಬ್ಬ ನಿವೃತ್ತ ಐಪಿಎಸ್ ಅಧಿಕಾರಿಯಾಗಿ ಈ ವರದಿಯನ್ನು ನೋಡಿ ನನಗೆ ಅತ್ಯಂತ ಆಘಾತ ಮತ್ತು ಅಸಹ್ಯವಾಗಿದೆ. ರಕ್ಷಕನೇ ಭಕ್ಷಕನಾದಾಗ ಇಲಾಖೆಯ ಘನತೆ ಮಣ್ಣು ಪಾಲಾಗುತ್ತದೆ. ಇನ್ಸ್ಪೆಕ್ಟರ್ ನ ಕೃತ್ಯ ಮತ್ತು ಭ್ರಷ್ಟ ವ್ಯವಸ್ಥೆಗೆ ಧಿಕ್ಕಾರ” ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಗಂಡನನ್ನು ಬಿಡಿಸಲು ಹೆಂಡತಿಯ ಬಳಿ 25 ಲಕ್ಷ ಲಂಚ ಅಥವಾ ಲೈಂಗಿಕ ಬೇಡಿಕೆ ಇಟ್ಟಿರುವುದು ಖಾಕಿ ಸಮವಸ್ತ್ರಕ್ಕೆ ಅಂಟಿದ ಘೋರ ಕಳಂಕ. ಅಲ್ಲದೆ ನೊಂದ ಮಹಿಳೆಯರಿಗೆ ಸಹಾಯ ಮಾಡಲು ಹೋದ ಸಾಮಾಜಿಕ ಕಾರ್ಯಕರ್ತನ ಮೇಲೆ ಸುಳ್ಳು ಕೇಸ್ ತೆರೆಯುವ ಬೆದರಿಕೆ ಹಾಕಿರುವುದು ಇಲಾಖೆಯ ಅಧಿಕಾರದ ದುರುಪಯೋಗದ ಪರಾಕಾಷ್ಠೆಯಾಗಿದೆ. ಇಷ್ಟೇ ಅಲ್ಲದೆ ಆರೋಪಿ ಇನ್ಸ್ಪೆಕ್ಟರ್ ಸಂದೇಶ ನಾನು ಗ್ರಹದ ಚಿವರಿಗೆ 50 ಲಕ್ಷ ಕೊಟ್ಟು ಈ ಪೋಸ್ಟಿಂಗ್ ತಂದಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ವರ್ಗಾವಣೆ ದಂದೆಯ ಕರಾಳ ಮುಖವನ್ನು ಸ್ಪಷ್ಟವಾಗಿ ಬಯಲು ಮಾಡಿದೆ. ಈ ಕುರಿತು ಮೊದಲೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವ್ಯವಸ್ಥೆಯ ಗಂಭೀರ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಈ ಕುರಿತು ಸೂಕ್ತ ಕ್ರಮ ಶೀಘ್ರವೇ ಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ @Dgpkarnataka ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರಾದ @complolmr ಗೆ ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ.
















































