30.6 C
Udupi
Saturday, January 31, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 423

ಭರತೇಶ ಶೆಟ್ಟಿ, ಎಕ್ಕಾರ್

“ಅರ್ಜುನಾ! ಖಾಂಡವವನ ದಹನ ಕಾಲದಲ್ಲಿ ಬಾಲ ಕತ್ತರಿಸಲ್ಪಟ್ಟು ಹಾರಿ ಹೋಗಿದ್ದ ಅಶ್ವಸೇನ ಎಂಬ ಪ್ರತಾಪಿ ನಾಗ ಈತ. ಅಂದು ಆತನ ತಾಯಿ ಈತನ ಬಾಲವನ್ನಾಶ್ರಯಿಸಿ ಇಬ್ಬರೂ ಹೊರ ಹೋಗಲು ನಿರ್ಧರಿಸಿ ಖಾಂಡವ ವನದಿಂದ ಹಾರುವ ಯತ್ನದಲ್ಲಿದ್ದಾಗ ನಿನ್ನಿಂದ ಮಧ್ಯ ಭಾಗವನ್ನು ಗುರಿಯಾಗಿಸಿ ಶರ ಪ್ರಯೋಗದಿಂದ ಛೇದಿಸಲ್ಪಟ್ಟಿರುವುದರಿಂದ ಅಶ್ವಸೇನನ ತಾಯಿ ಮತ್ತು ಬಾಲ ಅಗ್ನಿಗಾಹುತಿಯಾಗಿತ್ತು. ಆ ಹಗೆಯನ್ನು ದ್ವೇಷವಾಗಿರಿಸಿಕೊಂಡ ನಾಗ ಅಶ್ವಸೇನ ಪಾತಾಳದಲ್ಲಿ ಅಡಗಿ ಆಶ್ರಿತನಾಗಿ ಬದುಕಿದ್ದನು. ಈಗ ತನ್ನ ಹಗೆ ಪೂರೈಕೆಗಾಗಿ ಕರ್ಣನ ಸರ್ಪಾಸ್ತ್ರವನ್ನಾಂತು ಬಂದಿದ್ದಾನೆ. ಆ ಪ್ರಯತ್ನ ವ್ಯರ್ಥವಾದ ಕಾರಣ, ಮರಳಿ ಕರ್ಣನ ಸಹಾಯ ಕೇಳಿದರೂ ಮಹಾರಥಿ ಯೋಧ ನ್ಯಾಯ ಪಾಲಿಸಿ ಈತನನ್ನು ತಿರಸ್ಕರಿಸಿ ಆಗಿದೆ. ತನ್ನ ವೈರ ಸಾಧನೆ ಆಗಬೇಕೆಂದು ಸ್ವಯಂ ತಾನೇ ಮುಂದಾಗಿ ನಿನ್ನನ್ನು ಘಾತಿಸಲು ಬರುತ್ತಿದ್ದಾನೆ. ನಿನಗೆ ಉಲೂಪಿಯ ಅನುಗ್ರಹವಿರುವುದನ್ನು ಈ ಅಶ್ವಸೇನ ಮರೆತಿದ್ದಾನೊ ಏನೋ! ನೀನೇನೂ ಪ್ರತ್ಯಾಘಾತ ಮಾಡದಿದ್ದರೂ ಆತ ನಿನ್ನನ್ನೇನೂ ಮಾಡಲಾರ.” ಎಂದು ಕೃಷ್ಣ ವಿವರಿಸಿದನು.

ಅರ್ಜುನನಿಗೆ ಉಲೂಪಿಯ ಅನುಗ್ರಹವಾದದ್ದು ತೀರ್ಥಯಾತ್ರೆಯ ಸಮಯ. ಇಂದ್ರಪ್ರಸ್ಥದಲ್ಲಿ ಪಾಂಡವರು ಇರುವ ಸಮಯ ತಕ್ಷಕ ಗೋಪಾಲರ ಗೋವುಗಳನ್ನು ಅಪಹರಿಸಿದ್ದರು. ಗೋ ರಕ್ಷಣೆಗಾಗಿ ಅರ್ಜುನನಿಗೆ ಗಾಂಡೀವ ಬೇಕಿತ್ತು. ಆದರೆ ಆ ಸಮಯ ಆಯುಧಗಳು ಅಣ್ಣ ಧರ್ಮಜನ ಶಯನಾಗಾರದಲ್ಲಿದ್ದವು. ದ್ರೌಪದಿ ಮತ್ತು ಧರ್ಮಜ ಏಕಾಂತದಲ್ಲಿರುವಾಗ ಸೋದರರು ಒಳ ಪ್ರವೇಶಿಸುವಂತಿಲ್ಲ. ಅನಿವಾರ್ಯ ಕಾರಣವಿರುವುದರಿಂದ ಅರ್ಜುನ ನಿಯಮ ಮೀರಿ ಗಾಂಡೀವ ಪಡೆಯಬೇಕಾಗಿತ್ತು. ಪರಿಣಾಮ ಶಿಕ್ಷಾರೂಪದ ತೀರ್ಥಯಾತ್ರೆ ತನಗೊದಗಿದರೂ ಸರಿ, ಗೋವುಗಳ ರಕ್ಷಣೆಗಾಗಿ ಗಾಂಡೀವಧಾರಣೆ ಮಾಡಬೇಕೆಂದು ಅಂತಃಪುರ ಪ್ರವೇಶಿಸಿ, ದಿವ್ಯ ಧನುಸ್ಸನ್ನೆತ್ತಿ ತಕ್ಷಕನಿಂದ ಗೋವುಗಳನ್ನು ಬಿಡಿಸಿಕೊಂಡು ಬಂದಿದ್ದನು. ಈ ಕಾರಣವಾಗಿ ತೀರ್ಥಯಾತ್ರೆ ಮಾಡುತ್ತಾ ಹೋಗುತ್ತಿರುವಾಗ ಉಲೂಪಿಯ ಸಖ್ಯವಾಗಿತ್ತು.

ಪರಮ ಪಾವನವಾದ ಗಂಗಾ ನದಿಯ ಉಗಮಸ್ಥಾನವೆನಿಸಿದ ಆ ಪ್ರದೇಶವು ಅತ್ಯಂತ ರಮಣೀಯವಾಗಿತ್ತು. ಗಿರಿಯ ಝರಿಯಲ್ಲಿಳಿದು ಮಂಜುಳ ನಿನಾದದಿಂದ ಹರಿಯುತ್ತಿದ್ದ ಆ ಪುಣ್ಯವಾಹಿನಿಯು ಅಮರಲೋಕದ ದಿವ್ಯಗಾನಕ್ಕೆ ಮೈತೆತ್ತು ನರ್ತಿಸುತ್ತಿದ್ದಂತೆ ರಂಜಿಸುತ್ತಿತ್ತು.

ಜಿನುಗಿ ಹಾಲ್ನೊರೆಯಾಗಿ ಹಾರಿ ಹನಿ ಮುತ್ತಾಗಿ ಹರಡಿ, ನೀರಾಗಿ ಹರಿಹರಿದು ತೊರೆಯಾಗಿ, ತೊರೆ ತೊರೆಗಳೊಂದಾಗಿ ಹೊಂದಿ ಹೊನಲಾಗಿ ಹಳ್ಳದಾಳವ ತುಂಬಿ ಹೊಳೆಯಾಗಿ, ಬೆಳೆ ಬೆಳೆದು ನದಿಯಾಗಿ ಪಾಪನಾಶಿನಿಯ ಪುಣ್ಯಜಲ ಪರಿಪೂರ್ಣೆಯಾಗಿ ಪ್ರವಹಿಸುತ್ತಿದ್ದಳು.

ಅರ್ಜುನನಿಗೂ ಅವನ ಜತೆ ತೀರ್ಥಯಾತ್ರೆಗೆ ಬಂದಿದ್ದ ಬ್ರಾಹ್ಮಣರಿಗೂ ಆ ಪ್ರದೇಶದ ದಿವ್ಯತೆಯೂ ಭವ್ಯತೆಯೂ ಮನಸ್ಸಿಗೆ ಆಹ್ಲಾದಕರವಾಗಿ ಪರಿಣಮಿಸಿದವು. ಅಲ್ಲಿಯೆ ಕೆಲವು ದಿನ ಉಳಿದುಕೊಳ್ಳುವುದೆಂದು ಅವರು ತೀರ್ಮಾನಿಸಿದ್ದರು. ಅದರಂತೆ ಬ್ರಾಹ್ಮಣರು ಹೋಮ ಕಾರ್ಯಗಳಿಗಾಗಿ ಮಂತ್ರಪೂರ್ವಕವಾದ ಅಗ್ನಿಯನ್ನು ಪ್ರತಿಷ್ಠಾಪನೆ ಮಾಡಿದ್ದರು. ಅಗ್ನಿಯಲ್ಲಿ ಹವಿಸ್ಸನ್ನರ್ಪಿಸಿ ಗಂಧ ಪುಷ್ಪಾಕ್ಷತೆಗಳಿಂದ ಯಜ್ಞೇಶ್ವರನನ್ನು ಪೂಜಿಸುತ್ತಿದ್ದರು. ಆಗ ಗಂಗಾತೀರದ ಆ ಪ್ರದೇಶಕ್ಕೆ ಅಪೂರ್ವವಾದ ಒಂದು ಶೋಭೆ ಉಂಟಾಗಿತ್ತು. ಅದರಿಂದ ಮತ್ತಷ್ಟು ಪುಳಕಿತರಾದ ಯಾತ್ರಿಕರು ಅಲ್ಲಿಯೆ ಕಲೆತು ಕುಳಿತು ವೇದಪಾರಾಯಣ, ಪುರಾಣ ಪ್ರವಚನ ಹಾಗೂ ಸತ್ಕಥಾಶ್ರವಣ ಮನನಾದಿಗಳಲ್ಲಿ ನಿರತರಾಗಿ ಪರಮಾನಂದವನ್ನು ಹೊಂದುತ್ತಿದ್ದರು.

ಒಂದು ದಿನ ಅಲ್ಲಿಯೆ ಸ್ವಲ್ಪ ಕೆಳಗೆ ನದಿಯು ಆಳವಿರುವೆಡೆಗೆ ನಡೆದು ಅರ್ಜುನನು ಸ್ನಾನ ಮಾಡಿ, ಪಿತೃತರ್ಪಣವನ್ನು ಕೊಟ್ಟು ಅಗ್ನಿ ಕಾರ್ಯಕ್ಕಾಗಿ ಮೇಲೇಳುವಷ್ಟರಲ್ಲಿ ನೀರಿನ ಅಂತರಾಳದಿಂದ ಮೇಲೆ ಬಂದ ಉಲೂಪಿಯೆಂಬ ನಾಗಕನ್ನಿಕೆಯು ಇವನ ಅಸದೃಶವಾದ ರೂಪ ಸೌಂದರ್ಯಗಳಿಂದ ಮೋಹಿತಳಾಗಿ ಇವನನ್ನು ನೀರಿನೊಳಕ್ಕೆ ಸೆಳೆದುಕೊಂಡು ತನ್ನ ನಿವಾಸಕ್ಕೆ ಕೊಂಡೊಯ್ದಳು. ಅದು ನಾಗರಾಜನ ಮನೆ ಅಲ್ಲಿ ಪ್ರಜ್ವಲಿಸುತ್ತಿರುವ ಅಗ್ನಿಯಲ್ಲಿ ಅರ್ಜುನನು ಮೊದಲಾಗಿ ತನ್ನ ನಿತ್ಯಪದ್ಧತಿಯ ಅಗ್ನಿ ಕಾರ್ಯವನ್ನು ಪೂರೈಸಿದನು. ಅಪಹೃತನಾದ ಸಂದರ್ಭದಲ್ಲಿಯೂ ನಿಯಮನಿಷ್ಠೆಗಳನ್ನು ತಪ್ಪದ ಅರ್ಜುನನ ಕುರಿತು ಅಗ್ನಿದೇವನು ಅಧಿಕ ಸಂತುಷ್ಟನಾದನು. ನೈಮಿತ್ತಿಕ ಹೋಮ ಕಾರ್ಯವು ಮುಗಿಸಿದೊಡನೆ ಉಲೂಪಿಯು ಬಂದು ಅರ್ಜುನನ ಬಳಿ ನಿಂತುಕೊಂಡಳು. ಅರ್ಜುನನು ಅವಳನ್ನು ಕಂಡು ಯಾಕೆ ಹೀಗೆ ಮಾಡಿದೆ? ಎಂದು ಕೇಳಲು.. ಆಕೆಯು “ಓ ಮಹಾನುಭಾವನೆ, ಐರಾವತವೆಂಬ ಸರ್ಪ ಕುಲದಲ್ಲಿ ಜನಿಸಿರುವ ಕೌರವ್ಯನೆಂಬ ನಾಗರಾಜನ ಮಗಳು ನಾನು. ಉಲೂಪಿಯೆಂದು ನನ್ನ ಹೆಸರು, ನೀನು ಗಂಗೆಯಲ್ಲಿ ಸ್ನಾನ ಮಾಡುತ್ತಿದ್ದಾಗ ನಿನ್ನನ್ನು
ನೋಡಿದೆ. ನಿನ್ನ ರೂಪಕ್ಕೂ ತೇಜಸ್ಸಿಗೂ ನಾನು ಮನಸೋತೆನು. ನನ್ನ ಮನಸ್ಸು ಅಂಕೆಯಲ್ಲಿ ನಿಲ್ಲದೆ, ನಿನ್ನ ಮೇಲೆ ನೆಟ್ಟು ಹೋಯಿತು. ಅಂತೆಯೆ ಏನನ್ನು ಹೇಳದೆ, ಯಾವುದನ್ನೂ ಕೇಳದೆ ನಿನ್ನನ್ನು ಸೆಳೆದು ಇಲ್ಲಿವರೆಗೆ ಕರೆದು ತಂದಿರುವೆನು. ನಿನ್ನಲ್ಲಿ ಅನುರಕ್ತಳಾಗಿರುವ ನನ್ನನ್ನು ವರಿಸಿ ಪ್ರಾಣದಾನವನ್ನು ನೀಡಬೇಕು. ಇದು ನನ್ನ ಪ್ರಾರ್ಥನೆ ಎಂದು ನಿವೇದಿಸಿಕೊಂಡಳು. ಅವಳ ಅಪೇಕ್ಷೆಯನ್ನು ಕೇಳಿ ಅರ್ಜುನ ತೀರ್ಥಯಾತ್ರೆಯ ವೃತಸ್ಥನಾಗಿರುವೆ. ಹಾಗಾಗಿ…. ಎನ್ನುತ್ತಿರುವಾಗಲೆ ತಡೆದು ಅರ್ಜುನನ ವಾದವರಿತ ಉಲೂಪಿ ತನ್ನ ಬಯಕೆ, ಅದಕ್ಕೆ ಪೂರಕ ಧರ್ಮ ಸಹಮತ ಕಾರಣ ವಿವರಿಸತೊಡಗಿದಳು. “ಅಯ್ಯಾ ಮಹಾನುಭಾವ! ನೀನು ತೀರ್ಥಯಾತ್ರೆ ಕೈಗೊಂಡಿರುವುದು – ನಿಮ್ಮೊಳಗಿನ ಸಂಪ್ರದಾಯವನ್ನು ನೀನು ಮೀರಿದ ತಪ್ಪಿಗಾಗಿ. ಈ ಒಪ್ಪಂದದ ವ್ಯಾಪ್ತಿ ನಿಮ್ಮ ಹಾಗು ದ್ರೌಪದಿಯ ಸಂಬಂಧದವರೆಗೆ ಮಾತ್ರವಿರುತ್ತದೆ. ನನ್ನ ಹಾಗೂ ನಿನ್ನ, ಅಥವಾ ದ್ರೌಪದಿ ಹಾಗು ಪಾಂಡವರನ್ನು ಹೊರತು ಅನ್ಯರ್ಯಾರು ಈ ನಿರ್ಬಂಧದಿಂದ ಬಂಧಿಸಲ್ಪಡಲಾರರು. ಈ ಪ್ರಕರಣ ನಿರ್ದೇಶಿತ ತೀರ್ಥಯಾತ್ರೆಯ ಕಾಲಾವಧಿವರೆಗೆ ಕ್ಷೇತ್ರ ಪರ್ಯಟನೆ ಮಾಡಿ ಪುಣ್ಯ ಸಂಪಾದನೆಗೆ ಬಳಸಿಕೊಳ್ಳುತ್ತಿರುವುದು ಅತಿ ಉತ್ತಮ. ಹಾಗೆಂದು ಒಲಿದು ಬಂದವರನ್ನು ತಿರಸ್ಕರಿಸ ಬೇಕು ಎಂಬ ಹಾಗೇನು ಇಲ್ಲವಲ್ಲ. ನಾನು ನಿನ್ನನ್ನಿ ಬಯಸಿದ್ದೇನೆ. ನಿನ್ನ ಹೊರತು ನನ್ನನ್ನು ಸಂತೈಸಲು ಯಾರಿಂದಲೂ ಸಾಧ್ಯವಿಲ್ಲ. ಒಂದೊಮ್ಮೆಗೆ ನೀನು ನನ್ನನ್ನು ಅಲಕ್ಷಿಸಿದರೆ ಮತ್ತೆ ನನಗೆ ಬದುಕೇ ಬೇಡವಾಗಿದ್ದು ನನ್ನ ಅಂತ್ಯವಾಗುತ್ತದೆ. ಆದ ಕಾರಣ ನನ್ನನ್ನು ರಕ್ಷಣೆ ಮಾಡಿ ಉದ್ದರಿಸಬೇಕೆಂದು ಬೇಡಿಕೊಳ್ಳುತ್ತಿದ್ದೇನೆ.” ಅರ್ಜುನನು ಧರ್ಮ ಹಾಗು ಶಕ್ತಿಯ ಸಮ್ಮಿಳಿತ ಸ್ವರೂಪ. ಸ್ವಯಂ ಧರ್ಮ ಜಿಜ್ಞಾಸೆ ಮಾಡಿ ಉಲೂಪಿಯ ಒತ್ತಾಯ ಧರ್ಮಸಮ್ಮತವಾಗಿರುವುದನ್ನು ಮನಗಂಡನು. ತಾನು ಒಪ್ಪದೆ ಉಳಿದರೆ, ಅದು ಆಕೆಯ ಪಾಲಿಗೆ ದುರಂತಮಯ ಅಂತ್ಯ ಆಗ ಬಹುದು. ಆದ್ದರಿಂದ ರಕ್ಷಕನಾಗಿ ಆಕೆಯ ಅಪೇಕ್ಷೆಯಂತೆ ನಾಗಲೋಕದಲ್ಲೊಂದು ದಿನ ಉಳಿಯಲು ಒಪ್ಪಿದನು.

ಉಲೂಪಿಯು ವಿಶೇಷ ಶಕ್ತಿ ಸಂಪನ್ನೆಯಾಗಿದ್ದು ಸದ್ಯೋಗರ್ಭಧಾರಣದ ಯೋಗಬಲ ಹೊಂದುವ ಶಕ್ತೆಯಾಗಿದ್ದಳು. ಹಾಗೆಯೆ ಗರ್ಭಧರಿಸಿ ಸದ್ಯೋಜಾತತ್ವದ ಮೂಲಕ ಒಬ್ಬ ಮಗನನ್ನು ಪಡೆದಳು. ಅವನಿಗೆ ಮಹಿಮಾನಿತ್ವರಾದ ಮಾತಾಪಿತರು ಅವನ ರೂಪ, ಬಲ, ತೇಜಸ್ಸುಗಳನ್ನು ಗುರುತಿಸಿ ಇರಾವಂತ ಎಂದು ನಾಮಕರಣವನ್ನೂ ಮಾಡಿದರು. ಉಲೂಪಿಯು ನಾಗಲೋಕದಿಂದ ಅರ್ಜುನನ್ನು ಮರಳಿ ಗಂಗಾತೀರಕ್ಕೆ ಕರೆದುಕೊಂಡು ಬಂದು ನಮಿಸಿದಳು. “ಪ್ರಿಯವರ, ನನ್ನಿಂದ ಅತಿಕ್ರಮಣ, ಅಪಚಾರವಾಗಿದ್ದರೆ ಮನ್ನಿಸಬೇಕು. ನಾನು ನಿನ್ನಿಂದ ಅನುಗ್ರಹಿಸಲ್ಪಟ್ಟು ಪುನೀತಳಾಗಿದ್ದೇನೆ. ಸಂತೃಪ್ತಿಯೂ, ಜನ್ಮ ಸಾರ್ಥಕತೆಯೂ ನನಗಾಗಿದೆ. ಪ್ರತಿಯಾಗಿ ನನ್ನಲ್ಲಿ ಸಂಚಯವಾಗಿರುವ ದಿವ್ಯಶಕ್ತಿಗಳನ್ನು ವಿನಿಯೋಗಿಸಿ ನಿನಗೆ ವಿಶಿಷ್ಟವಾದ ಶಕ್ತಿಯಾಗಿ- ಇನ್ನು ಮುಂದೆ ನಿನಗೆ ಎಂತಹ ಜಲರಾಶಿಯಲ್ಲೇ ಆಗಿರಲಿ, ಎಷ್ಟು ಬಲಿಷ್ಟ ಜಲಚರವೇ ಆಗಿರಲಿ, ವಿಷ ಸರ್ಪ, ಉರಗ, ಸರೀಸೃಪಾದಿಗಳು ಏನೇ ಇರಲಿ ಅವುಗಳಿಂದ ನಿನಗೆ ಅಪಾಯ ಮಾಡಲಾಗದಿರಲಿ. ಮಾತ್ರವಲ್ಲ ಅವುಗಳು ನಿನ್ನ ವಶವಾಗಿ ಹೋಗಲಿ. ಇದು ಒಂದು ರೀತಿಯಲ್ಲಿ ನಿನಗೆ ಶ್ರೀರಕ್ಷೆಯೇ ಆಗಿ ಪರಿಣಮಿಸಲಿ” ಎಂದು ಹಾರೈಸುತ್ತೇನೆ ಎಂಬುದಾಗಿ ಹರಸಿ, ಹಾರೈಸಿ, ಅನುಗ್ರಹಿಸಿ ನಮಸ್ಕರಿಸಿದಳು. ಅರ್ಜುನನಿಗೆ ಬಯಸದೆ ದೊರೆತ ಅನುಗ್ರಹಬಲ ಇದಾಗಿತ್ತು. ಸುಪ್ರೀತನಾಗಿ ಅವಳನ್ನು ಬೀಳ್ಕೊಟ್ಟನು. ಉಲೂಪಿ ಮರಳಿ ತನ್ನ ಲೋಕ ಸೇರಿದರೆ, ಅರ್ಜುನ ತನ್ನೊಡನಿದ್ದ ಬ್ರಾಹ್ಮಣರತ್ತ ಬಂದು ಸೇರಿದನು. ತೀರ್ಥಯಾತ್ರೆ ಮುಂದುವರಿಸತೊಡಗಿದ್ದ.

ಹೀಗೆ ಉಲೂಪಿ ಇತ್ತಿರುವ ವರ ಬಲದಂತೆ ಸರ್ಪನಾಗಿರುವ ಅಶ್ವಸೇನ ಆಕ್ರಮಿಸಿದರೂ ಆತನಿಂದ ಅರ್ಜುನನ್ನು ಏನೂ ಮಾಡಲಾಗುತ್ತಿರಲಿಲ್ಲ. ಅರ್ಜುನ ಕೃಷ್ಣನ ಅನುಮತಿ ಪಡೆದು ಆರು ಶರಗಳನ್ನು ಸಂಧಾನ ಮಾಡಿದನು. ಗಗನ ಮಾರ್ಗದಲ್ಲಿ ವಕ್ರಗತಿಯಲ್ಲಿ ಬುಸುಗುಡುತ್ತಾ ಬರುತ್ತಿದ್ದ ಅಶ್ವಸೇನನ ಕಾಯವನ್ನು ಆರು ತುಂಡುಗಳಾಗಿ ಕತ್ತರಿಸಿ ಹಾಕಿ ಬಿಟ್ಟನು. ರಕ್ತಕಾರುತ್ತಾ ಕುರುಕ್ಷೇತ್ರದ ರಣಧಾರುಣಿಯಲ್ಲಿ ಬಿದ್ದು ಅಶ್ವಸೇನ ಹತಪ್ರಾಣನಾದನು.

ಕರ್ಣ ಸರ್ಪಾಸ್ತ್ರ ಪ್ರಯೋಗಿಸಿದ್ದ ಸಮಯ ರಥವನ್ನೊತ್ತಿ ತಗ್ಗಿಸಿದ ಕ್ಷಣದಿಂದ ಮಂದಗತಿಯಲ್ಲಿ ರಥ ಭೂಮಿಯಲ್ಲಿ ಹೂತು ಹೋಗುತ್ತಲೆ ಇತ್ತು. ಈಗ ಕುದುರೆಗಳಿಗೂ ರಥವನ್ನು ಮೇಲೆತ್ತಲು ಆಗುತ್ತಿಲ್ಲ. ಆಗ ಕೃಷ್ಣನು ತನ್ನೆರಡು ಮಹಾಬಲ ಬಾಹುಗಳಿಂದ ರಥವನ್ನೆತ್ತಿ ಸಮಸ್ಥಿತಗೊಳಿಸಿ ಮರಳಿ ಪೀಠಸ್ಥನಾದನು.

ಇದೆಲ್ಲವನ್ನೂ ನೋಡುತ್ತಿದ್ದ ಮಹಾರಥಿ ಕರ್ಣ ಮತ್ತು ಸಾರಥಿ ಶಲ್ಯರ ಮಧ್ಯೆ ವಿರಸ ಏರ್ಪಡುತ್ತಿದೆ. ಕರ್ಣಾರ್ಜುನರ ಕಾಳಗ ದ್ವೈರಥ ಯುದ್ಧ ಆಗಿದ್ದರೂ, ಏಕರಥಿಗಳಾದ ಶಲ್ಯ ಕರ್ಣರಿಗೆ ಮಹಾ ವಾಗ್ಯುದ್ದ ಆರಂಭಗೊಂಡಿದೆ. ತನ್ನ ನಿರ್ದೇಶನ ಪಾಲಿಸುವೆನೆಂದು ಒಪ್ಪಿ ಬಂದಿದ್ದ ಕರ್ಣ ಮಾತಿಗೆ ತಪ್ಪಿದ ದೋಷಕ್ಕೆ ಶಲ್ಯ ಕ್ರುದ್ಧನಾಗಿದ್ದಾನೆ. ದಿವ್ಯ ಸರ್ಪಾಸ್ತ್ರ ವೃಥಾ ನಷ್ಟವಾಗಿ ಏನೇನೂ ಸಾಧಿಸದೆ ವ್ಯರ್ಥವಾದುದಕ್ಕಾಗಿ ಹೀನಾಯವಾಗಿ ಶಲ್ಯ ಕರ್ಣನನ್ನು ನಿಂದಿಸತೊಡಗಿದ್ದಾನೆ. ಕರ್ಣನಿಗೂ ಒಂದು ಹಂತ ಮೀರಿದ ಶಲ್ಯನ ನಿಂದಾವಾಕ್ಯಗಳು ಅಸಹನೀಯವಾಗಿ ಆತನೂ ಪ್ರತಿಯಾಗಿ ಮೂದಲಿಸಿದನು. ಈಗ ಈ ವಿವಾದ ಕಾರಣ ಬೆಳೆದು ಇಬ್ಬರೊಳಗೆ ವಾಕ್ಸಮರ ಆರಂಭವಾಗಿದೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page