ಭಾಗ – 114
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೨೪ ಮಹಾಭಾರತ
ಶಲ್ಯ ಭೂಪತಿ ಕರ್ಣನನ್ನು “ನೀನು ಮೂರ್ಖ ಶಿಖಾಮಣಿ, ನಿನಗೆ ಸ್ವಂತ ಬುದ್ಧಿ, ವಿವೇಚನೆ ಇಲ್ಲ. ಹಾಗೆಂದು ಅನುಭವದಿಂದ ಹೇಳಿ, ದಾರಿ ತೋರಿದರೂ ಪಾಲಿಸುವ ಬುದ್ಧಿಯೂ ಇಲ್ಲ. ನಿನ್ನಂತಹ ಡೊಂಕನನ್ನು ತಿದ್ದಿ ಸರಿದಾರಿಗೆ ತರುವುದೂ ಶ್ವಾನನ ಬಾಲ ನೆಟ್ಟಗೆ ಮಾಡುವುದೂ ಒಂದೇ ನ್ಯಾಯವಾದೀತು. ನಿನ್ನಂತಹ ಭ್ರಾಂತನ, ತಾನೇ ಶ್ರೇಷ್ಠ ಎಂಬ ಅಹಂ ತಲೆಗಡರಿದವನ, ಪರನಿಂದಕನ, ಸ್ವಾರ್ಥಿಯ ಜೊತೆಯಲ್ಲಿ ಸಹರಥಿಯಾಗಿ ನಾನಿರಲಾರೆ. ಯಾವಾಗ ನಿನಗೆ ನನ್ನ ವಚನ ಪಾಲನೆ ಮಾಡುವಲ್ಲಿ ವಿಶ್ವಾಸ ಮೂಡಲಿಲ್ಲವೋ, ನಾನು ತೋರಿದ ಪಥ ಅಧರ್ಮ ಎನಿಸಿತೋ ಇನ್ನು ಯಥಾರ್ಥವಾಗಿ ನಾನಿದ್ದೂ ಏನು ಪ್ರಯೋಜನ? ನಿನಗೆ ನನ್ನ ಉಚಿತಾನುಚಿತ ಸಲಹೆ – ವಿಮರ್ಷೆ ಅನಗತ್ಯ ಎಂದಾಯಿತು. ಲೋಕದ ರೂಢಿಯಲ್ಲಿ ಒಂದು ಮಾತಿದೆ ಅತಿ ದಡ್ಡನಿಗೆ ಹೇಳಬಾರದು ಯಾಕೆಂದರೆ ಎಷ್ಟು ಹೇಳಿದರೂ ಆತನಿಗೆ ಅರ್ಥವಾಗದು. ಹಾಗೆಂದು ಅತಿ ಬುದ್ದಿವಂತನಿಗೂ ಬೋಧಿಸಬಾರದು. ಯಾಕೆಂದರೆ, ಆತನಿಗದರ ಅಗತ್ಯವಿಲ್ಲ, ಅಥವಾ ಆತ ತನಗೆಲ್ಲ ಗೊತ್ತಿದೆ ಎಂಬ ಪೊರೆಯೊಳಗಿರುತ್ತಾನೆ. ಇಲ್ಲಿ ನನ್ನ ಸ್ಥಿತಿಯೂ ಹಾಗಾಗಿದೆ. ನಿನ್ನನ್ನು ದಡ್ಡ ಎನ್ನಲೇ? ನೀನು ದಡ್ಡನಲ್ಲ. ಬುದ್ದಿವಂತನೇ? ಖಂಡಿತಾ ಅಲ್ಲ. ಯಾಕೆಂದರೆ ನಿನ್ನ ಬುದ್ಧಿಯುಕ್ತವಾಗಿ ಪ್ರಯೋಗಿಸಿದ ಮಹಾಸ್ತ್ರ ವ್ಯರ್ಥವಾಗಿ ಹೋಗಿದೆ. ನಿನ್ನಂತವನ ಸಹವಾಸ ಮಾಡಿದರೆ ಅಲ್ಪರ ಸಂಘ ಅಭಿಮಾನ ಭಂಗ ಎಂಬ ನುಡಿಯಂತೆ ನನ್ನ ಮಾನವನ್ನು ನಿನ್ನ ನೀಚ ಮಾತುಗಳಿಂದ ಕಳೆದುಕೊಳ್ಳಬೇಕಾದೀತು. ನಿನಗೆ ಸಾಕಷ್ಟು ಅವಕಾಶವಿತ್ತು ನಾನು ನನ್ನ ಎಲ್ಲ ಪೂರ್ವ ಮನಸ್ಥಿತಿಯನ್ನು ಬದಿಗಿರಿಸಿ ನಿನಗೆ ಪೂರಕನಾಗಿ ಸಹಕರಿಸಿದರೂ ನಿನ್ನಿಂದ ವಿಶ್ವಾಸ ತಳೆಯಲಾಗಲಿಲ್ಲ. ಈಗ ವಿಚಾರ ಸ್ಪಷ್ಟವಾಗಿದೆ. ಏನೆಂದರೆ ನೀನೊಬ್ಬನೆ ಜ್ಞಾನಿ, ಬಲ್ಲಿದ, ಕೋವಿದ, ಪಂಡಿತ. ನಾನು ಬಾಯಿ ಬಡುಕ, ಅಜ್ಞಾನಿ, ಆಗಂತುಕ, ನಿಂದಕ.. ಇತ್ಯಾದಿ ಭಾವ ನಿನ್ನಲ್ಲಿದೆ. ಅದೇ ನಿನ್ನ ಮನದ ಸತ್ಯವಾದರೆ ನಾನು ಯಾಕಾಗಿ ಇನ್ನು ನಿನ್ನ ಜೊತೆಗಿರಬೇಕು? ಹೇಳು!” ಎಂದು ಪ್ರಶ್ನಿಸಿದನು.
ಕರ್ಣನಿಗೆ ಒಂದೆಡೆ ಬಹಿರಂಗ ಶತ್ರು ಅರ್ಜುನನಿಗಿಂತಲೂ, ಸ್ವಪಕ್ಷೀಯ ಶಲ್ಯನು ಕ್ರೂರಿ ಎಂಬಂತೆ ಭಾಸವಾಗಿ ಕ್ರೋಧ ಮನಮಾಡಿತು. ಆದರೂ ಸಾವರಿಸಿಕೊಂಡು,
“ಮಾದ್ರಾಧೀಶ! ನಿನಗೆ ಈ ವಿಚಾರ ತಿಳಿದಿದೆ. ಒಂದು ದಿನ ನಾನು ಗುರು ಭಾರ್ಗವರಿಂದ ಕಲಿತಿದ್ದ ಅಸ್ತ್ರಗಳ ಅಭ್ಯಾಸ ನಿರತನಾಗಿದ್ದೆ. ಕತ್ತಿವರಸೆ, ಲಕ್ಷ್ಯ ಭೇದನ ಇತ್ಯಾದಿಗಳನ್ನು ಮತ್ತಷ್ಟು ನಿಖರಗೊಳಿಸುವ ಪ್ರಯತ್ನ ಮಾಡುತ್ತಿದ್ದೆ. ಹೀಗಿರಲು ನಾನು ಕತ್ತಿ ತಿರುವುತ್ತಾ ಘಾತ, ಲಾಘವಗಳ ಅಭ್ಯಾಸ ಮಾಡುತ್ತಿದ್ದೆ. ಅಂದು ಹೇಗೆ ನನ್ನ ಕೈಯಿಂದ ಖಡ್ಗ ಜಾರಿ ಬೀಸಿ ಎಸೆಯಲ್ಪಟ್ಟಿತೋ ನಾನರಿಯೆ. ಕಾಕತಾಳೀಯವೋ ಎಂಬಂತೆ ಆ ಕಡೆಯಿಂದ ದನದ ಕರುವೊಂದು ಓಡಿ ತನ್ನ ತಾಯಿಯ ಬಳಿ ಹೋಗುತ್ತಿತ್ತು. ನಾನು ನೋಡುತ್ತಿದ್ದಂತೆಯೇ ಆ ಎಳೆಗರು ನನ್ನ ಕೈಯಿಂದ ಜಾರಿ ಹಾರಿದ್ದ ಕತ್ತಿಯ ಹರಿತವಾದ ಅಲಗಿನಿಂದ ಕತ್ತರಿಸಲ್ಪಟ್ಟಿತು. ಅದರ ಬಳಿಗೆ ತಕ್ಷಣ ಓಡಿದೆ… ರಕ್ತದೋಕುಳಿಯನ್ನೇ ಹರಿಸಿ ಆ ಎಳೆಗರು ಪ್ರಾಣ ಬಿಟ್ಟಿತು. ಅಯ್ಯೋ ನನ್ನ ದುರ್ಗತಿಯೇ! ಅನಾವಶ್ಯಕವಾಗಿ ಗೋ ಹತ್ಯೆ ನಡೆದು ಹೋಯಿತಲ್ಲಾ ಎಂದು ಪರಿತಪಿಸುತ್ತಿದ್ದೆ. ಆಗ ಅಲ್ಲಿಗೆ ಬಂದ ಆ ಆಶ್ರಮದ “ವಿಜಯ” ಎಂಬ ಹೆಸರಿನ ಬ್ರಾಹ್ಮಣ “ಏನಿದು ಅಕ್ಷಮ್ಯ ಅಪರಾಧ! ಪೂಜ್ಯ ಯಾಗಧೇನುವಿನ ಕರು ಹತ್ಯೆಯಾಗಿದೆ? ಯಾರು ಈ ಕ್ರೂರ ಕೃತ್ಯ ಎಸಗಿದವರು?” ಎಂದು ಪ್ರಶ್ನಿಸಿದ.
ಘಟಿತ ಸಂಗತಿಯನ್ನು ಯಥಾವತ್ತಾಗಿ ವಿವರಿಸಿ ಹೇಳಿ ಕ್ಷಮಾ ಪ್ರಾರ್ಥಿಯಾದೆ. ಶಾಂತನಾಗಿ ಕ್ಷಮೆ ತೋರುವ ಬದಲು ಕ್ರುದ್ಧನಾದ ಬ್ರಾಹ್ಮಣ ವಿಜಯ “ನೋಡಲು ನೀನು ಆಯುಧಧಾರಿಯಾಗಿದ್ದು, ಕ್ಷಾತ್ರ ರಾಜಕುಮಾರನಂತೆ ಕಾಣುತ್ತಿರುವೆ. ನಿನ್ನ ಕರ್ತವ್ಯವಾಗಿರುವ ಗೋ ಬ್ರಾಹ್ಮಣರ ರಕ್ಷಣೆ ಮಾಡಬೇಕಾದ ನಿನ್ನಿಂದಲೇ ಈ ರೀತಿಯ ಪಾತಕ ದುಷ್ಕೃತ್ಯವಾಗಿದೆ. ಆ ಕರುವಿನ ದೇಹದಿಂದ ಬಸಿದಿಳಿದ ರಕ್ತದಿಂದ ನೆಲ ಕೆಸರಾಗಿದೆ. ಈ ರೀತಿ ಧೇನುವಿಗೆ ಕ್ರೂರ, ದಾರುಣ ಸಾವನ್ನಿತ್ತ ನಿನ್ನನ್ನು ಹಾಗೇ ಬಿಡುವೆನೇ? ಪಾಪಕ್ಕೆ ಸರಿಯಾದ ಶಿಕ್ಷೆಯಾಗಲೇ ಬೇಕು. ಜೀವನದ ಅಗತ್ಯಕಾಲದಲ್ಲಿ ನಿನ್ನ ರಥದ ಚಕ್ರವು ರಕ್ತದಿಂದ ಕೆಸರಾದ ಭೂಮಿಯಲ್ಲಿ ಹೂತು ಹೋಗಲಿ. ಅದೇ ನಿನ್ನ ಮರಣಕ್ಕೂ ಮುಹೂರ್ತವಾಗಲಿ” ಎಂದು ಶಪಿಸಿದನು.
ಬ್ರಾಹ್ಮಣೋತ್ತಮ ವಿಜಯನ ಬಳಿ ಆರ್ತನಾಗಿ “ಸ್ವಾಮೀ, ಗೋವಿಗೆ ಈ ಸ್ಥಿತಿ ಬರಲು ನನ್ನ ಕೈಜಾರಿದ ಕತ್ತಿ ಕಾರಣವಾಯಿತು. ಹಾಗೆಂದು ಈ ಗೋವಿನ ಹತ್ಯೆ ನನ್ನ ಉದ್ದೇಶವಾಗಿರಲಿಲ್ಲ. ಅನಿಯಂತ್ರಿತವಾಗಿ ಆಗಿ ಹೋದ ಈ ಘಟನೆಯಲ್ಲಿ ನಾನು ನಿರಪರಾಧಿ. ನನ್ನನ್ನು ಕ್ಷಮಿಸಿ ತಾವಿತ್ತ ಶಾಪವಾಕ್ಯದಿಂದ ಮುಕ್ತಗೊಳಿಸಬೇಕು” ಎಂದು ಬೇಡಿದೆ. ಮತ್ತೆ ಮತ್ತೆ ಅವರ ಆಶ್ರಮಕ್ಕೆ ಹೋಗುತ್ತಾ ಸಾವಿರದಷ್ಟು ಹಾಲೂಡುವ ದನಗಳನ್ನೂ, ಬಿಳಿಯ ಕರುಗಳನ್ನೂ ಪ್ರಾಯಶ್ಚಿತ್ತಕ್ಕಾಗಿ ದಾನ ಮಾಡಿದೆ. ಪರಿಚಾರಕರಾಗಿ ನೂರಾರು ದಾಸದಾಸಿಯರನ್ನೂ ಬ್ರಾಹ್ಮಣನಿಗೆ ಸೇವೆಗಾಗಿ ಒದಗಿಸಿ ಕ್ಷಮಿಸಬೇಕೆಂದು ಕೇಳಿದಾಗಲು ಬ್ರಾಹ್ಮಣ ಮನ್ನಿಸಲಿಲ್ಲ. ನಂತರ ಸುವರ್ಣ ನಾಣ್ಯಗಳನ್ನಿತ್ತು ಕ್ಷಮೆ ಕೇಳಿದಾಗ ಸ್ವೀಕರಿಸದೆ ಹಿಂದಿರುಗಿಸಿದರು. ಕೋಪಗೊಂಡು “ಏನು ನಿನ್ನ ಹುನ್ನಾರವಿದು? ಪ್ರಲೋಭನೆಗೆ ಒಳಪಡಿಸಿ ನಿನ್ನ ಪಾಪ ಕೃತ್ಯಕ್ಕೆ ವ್ಯವಹಾರ ರೂಪದ ಕ್ಷಮೆ ಬಯಸುತ್ತಿರುವೆಯಾ? ನಾನು ಸತ್ಯ ಪಾಲಕ, ನಾನಾಡಿದ ವಚನ ಸುಳ್ಳಾಗದು. ಇನ್ನೂ ಸ್ಪಷ್ಟವಾಗಿ ಹೇಳುತ್ತೇನೆ ಕೇಳು ನೀನಿತ್ತ ಸುವಸ್ತುಗಳಾಗಲಿ, ಧನ ಧಾನ್ಯಗಳಾಗಲಿ ನನಗೆ ಬೇಕಾಗಿಲ್ಲ. ನನ್ನ ಕಾಮನೆ ಏನಿದ್ದರು ಉತ್ತಮ ಗತಿ. ಅದರ ಸಂಪ್ರಾಪ್ತಿಗಾಗಿ ನಿಸ್ವಾರ್ಥ, ಲೋಕ ಕಲ್ಯಾಣ, ಭಗವದ್ಪ್ರೀತಿಯ ಕಾರ್ಯನಿರತನಾಗಿದ್ದೇನೆ. ಅಮೂಲ್ಯ ವಸ್ತು, ಧನಕನಕ ನನಗೆ ನಿರುಪಯುಕ್ತ” ಎಂದು ನಾನಿತ್ತ ಕೊಡುಗೆಗಳನ್ನೂ ತಿರಸ್ಕರಿಸಿ, ಕ್ಷಮೆಯನ್ನೂ ನೀಡಲಿಲ್ಲ.
ಪ್ರಕರಣ ಹೀಗಾಗಲು, ಅಂತಹ ಉದ್ದೇಶವಿಲ್ಲದ, ಅರಿತು ಮಾಡದ ತಪ್ಪಿಗೆ ಕ್ಷಮೆ ಸಿಗದೆ ಶಾಪಗ್ರಸ್ಥನಾಗಿದ್ದೇನೆ. ಶಲ್ಯಭೂಪತಿ! ಸಮರ್ಥ ಸಾರಥಿಯಾದ ನೀವು ನನ್ನ ಸಾರಥಿಯಾಗಿರುವಾಗ ನನ್ನ ರಥ ಕೆಸರಲ್ಲಿ ಹೂತು ನಾನು ಕೆಡಗುವ ಭಯವಿಲ್ಲ. ನಮ್ಮೊಳಗೆ ಏನೇ ಅಭಿಪ್ರಾಯ ವ್ಯತ್ಯಾಸಗಳಿದ್ದರೂ ಅದು ಭಿನ್ನಾಭಿಪ್ರಾಯವಲ್ಲ ಎಂದು ತೀರ್ಮಾನಿಸಿ ನನ್ನ ಪಾಲಿನ ಕೊರತೆ ಮತ್ತು ಸರಿದೂಗಿಸಬಲ್ಲ ನಿಮ್ಮ ಉಪಸ್ಥಿತಿಯ ಅಪೇಕ್ಷೆ ವ್ಯಕ್ತಪಡಿಸಿದ್ದೇನೆ. ನೀವು ಬೆಂಬಲವಿತ್ತು ನನ್ನೊಡನೆ ಇದ್ದರೆ ಆ ಅರ್ಜುನನನ್ನು ಇಂದಿನ ದಿನ ವಧಿಸಿ ನನ್ನ ಪ್ರತಿಜ್ಞೆ ಪೂರೈಸುವೆ.” ಎಂದು ಬೇಡಿಕೊಳ್ಳತೊಡಗಿದನು. ಆಗ ಶಲ್ಯ ಭೂಪತಿ….
ಮುಂದುವರಿಯುವುದು…








