26.9 C
Udupi
Saturday, January 24, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 412

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೧೨ ಮಹಾಭಾರತ

ಅರ್ಜುನ ಕರ್ಣರ ಹೋರಾಟ ಯಾವ ಮಟ್ಟದಲ್ಲಿದೆ ಎಂದರೆ ಅವರೀರ್ವರು ಶರಸಂಧಾನ ಮಾಡುವುದಾಗಲಿ – ಪ್ರಯೋಗಿಸಿದ ಶರ ಗಮಿಸುವುದಾಗಲಿ, ಪರಸ್ಪರ ಛೇದಿಸಲ್ಪಟ್ಟು ಬೀಳುವುದಾಗಲಿ ಕಾಣುತ್ತಿಲ್ಲ. ಮಳೆಯಾಗುವಾಗ ಧಾರಾಕಾರವಾಗಿ ಹನಿಗಳುದುರಿ, ಸುರಿದ ಮಳೆ ತೊರೆಯಾಗಿ ಹರಿದು ನೆರೆಯುಂಟಾಗುವಂತೆ ಕತ್ತರಿಸಲ್ಪಟ್ಟ ಶರಗಳು ಮಳೆಯಂತೆ ನಭದಿಂದ ಉದುರಿ ರಾಶಿಯಾಗಿ ಬೀಳತೊಡಗಿದೆ. ಹೀಗೆ ಮಹೋತ್ಕರ್ಷೆಯ ಯುದ್ದ ರಣಭಯಂಕರ ವೀರಾಗ್ರಣಿಗಳ ಮಧ್ಯೆ ಸಾಗುತ್ತಿದೆ.

ಇತ್ತ ದುಶ್ಯಾಸನನಿಂದ ರಕ್ಷಿಸಲ್ಪಟ್ಟು ರಣಾಂಗಣದ ಹೊರಭಾಗಕ್ಕೆ ತರಲ್ಪಟ್ಟಿದ್ದ ವೃಷಸೇನ ಉಪಚರಿಸಲ್ಪಟ್ಟು ಪುನಶ್ಚೇತನ ಗಳಿಸಿಕೊಂಡನು. ಆ ಕೂಡಲೆ ಆಕ್ರೋಶ ಭರಿತನಾಗಿ ಮತ್ತೆ ರಣಾಂಗಣದೆಡೆ ರಥ ಹಾರಿಸುತ್ತಾ ಮತ್ತೆ ಕದನದಲ್ಲಿ ತೊಡಗಿದನು. ಪಾಂಡವ ಸೇನೆಯ ನಾಶದಲ್ಲಿ ತೊಡಗಿದ. ಕರ್ಣ ಪುತ್ರ ವೃಷಸೇನ ಅಭಿಮನ್ಯುವಿನಂತೆ ಮಿಂಚು ಹರಿಸುತ್ತಾ ರಣಾಂಗಣದೆಲ್ಲೆಡೆ ಸಂಚರಿಸುತ್ತಾ ತನಗೆದುರಾದ ಪಾಂಡವ ಸೇನೆಯ ರಥಿಕ ಮಹಾರಥಿಕರನ್ನು ಸೋಲಿಸುತ್ತಾ ನಾಶಗೈಯುತ್ತಿದ್ದಾನೆ.

ಇನ್ನೊಂದೆಡೆ ಕೃಪಾಚಾರ್ಯರಿಗೂ ಶಿಖಂಡಿಗೂ ಘನಘೋರ ಸಂಗ್ರಾಮ ಸಾಗಿ ಶಿಖಂಡಿ ಸೋತು ಹಿಮ್ಮೆಟ್ಟಿಸಲ್ಪಟ್ಟರೆ, ಮತ್ತೊಂದೆಡೆ ದೃಷ್ಟದ್ಯುಮ್ನ – ಕೃತವರ್ಮರ ನಡುವೆ ತುರುಸಿನ ಕಾಳಗ ಸಾಗುತ್ತಿದೆ. ಸಮಬಲದಲ್ಲಿ ಸಾಗಿದ ಯುದ್ದದಲ್ಲಿ ಕೃತವರ್ಮ ಸೋತು ಹಿನ್ನಡೆಯಲ್ಪಡಬೇಕಾಯಿತು.

ಹದಿನೇಳನೆ ದಿನದ ಮಧ್ಯಾಹ್ನ ಭೀಮಸೇನ ಅತ್ಯುಗ್ರನಾಗಿದ್ದಾನೆ. ಕೌರವನ ಆರು ಸೋದರರನ್ನು ಏಕಕಾಲದಲ್ಲಿ ಎದುರಿಸಿ ಗಾಣಕ್ಕೆ ಕೊಟ್ಟ ಕಬ್ಬಿನ ಜಲ್ಲೆಯಂತೆ ಹಿಂಡಿ ಹರಿದು ಜಜ್ಜಿ ಆರು ಮಂದಿ ಧೃತರಾಷ್ಟ್ರ ಪುತ್ರರನ್ನೂ ಭೀಷಣವಾಗಿ ವಧಿಸಿದನು. ಮತ್ತೊಂದೆಡೆ ಸಹದೇವ ಶಕುನಿಯನ್ನೆದುರಿಸಿ ಹೀನಾಯವಾಗಿ ಘಾತಿಸಿ ಸೋಲಿಸಿ, ಯುದ್ದ ಮುಂದುವರಿಸುತ್ತಾ ದುಶ್ಯಾಸನನ ಜೊತೆ ಸಮರ ನಿರತನಾಗಿದ್ದರೆ, ನಕುಲ ದುರ್ಯೋಧನನೊಡನೆ ವೀರಾವೇಶದಿಂದ ಕಾದಾಡುತ್ತಿದ್ದಾನೆ.

ಹೀಗೆ ಎಲ್ಲೆಡೆ ಯುದ್ದ ಅತಿ ವೇಗ ಮತ್ತು ಭೀಕರತೆಯಿಂದ ಸಾಗುತ್ತಿರಬೇಕಾದರೆ ಧರ್ಮರಾಯ ಮತ್ತು ಗುರುಪುತ್ರ ಅಶ್ವತ್ಥಾಮರು ಅತ್ಯುಗ್ರರಾಗಿ ಹೋರಾಡುತ್ತಿದ್ದಾರೆ. ದ್ರೌಣಿಯು ಮೇಲುಗೈ ಸಾಧಿಸುತ್ತಿರುವುದನ್ನು ಕಂಡು ಕೃಷ್ಣಾರ್ಜುನರು ಅಶ್ವತ್ಥಾಮನೆಡೆ ತಿರುಗಿದರು. ಆಗ ಅರ್ಜುನನಿಂದ ಮುಕ್ತನಾದ ಕರ್ಣನನ್ನು ಚೇಕಿತಾನ, ಯುಯುತ್ಸು, ಶಿಖಂಡಿ, ಕರೂಷ, ಮತ್ಸ್ಯ, ಕಾಶಿ, ಕೋಸಲಾಧಿಪ, ಶಿಶುಪಾಲ ಕುಮಾರ, ಧರ್ಮರಾಯ ಸೇರಿ ವ್ಯೂಹವಾಗಿ ಸುತ್ತುವರಿದು ಆಕ್ರಮಿಸಿದರು. ಕರ್ಣನು ಈ ಸ್ಥಿತಿಯನ್ನು ಅರಿತು ನಾಲ್ಕು ದಿಕ್ಕುಗಳಿಗೂ ವೃತ್ತಾಕಾರದಲ್ಲಿ ತಿರುಗಿಸುತ್ತಾ ವಾರಾಹಕರ್ಣ, ನಾಲೀಕ, ವತ್ಸದಂತ, ವಿಪಾಠ, ಕ್ಷುರಪ್ರ, ಚಟಕಾಮುಖ ಮೊದಲಾದ ಉಗ್ರ ಅಸ್ತ್ರಗಳನ್ನು ಪ್ರಯೋಗಿಸಿ ಘಾತಿಸಿದನು. ವೃತ್ತ ಕೇಂದ್ರದಿಂದ ಕಾರಂಜಿಯಂತೆ ಚಿಮ್ಮಿದ ಶರಗಳನ್ನು ವ್ಯೂಹವಾಗಿದ್ದ ಮಹಾರಥಿಗಳು ಖಂಡಿಸಿ ಮತ್ತೆ ಆಕ್ರಮಿಸಿದರು. ಶಲ್ಯನು ರಥವನ್ನು ಬುಗರಿಯಂತೆ ವೃತ್ತಾಕಾರದಲ್ಲಿ ತಿರುಗುವಂತೆ ಸಾರಥ್ಯ ವಿದ್ಯೆಯಿಂದ ಸಮರ್ಥವಾಗಿ ನಡೆಸಿ ಕರ್ಣನಿಗೆ ಪೂರಕನಾಗಿದ್ದಾನೆ. ಅತ್ಯುಗ್ರನಾದ ಕರ್ಣ ಅತಿವೇಗದ ಯುದ್ದಕ್ಕೆ ತೊಡಗಿ ಧರ್ಮರಾಯ ಸಹಿತ ಎಲ್ಲಾ ವೀರಾಧಿವೀರ ಮಹಾರಥಿಗಳನ್ನು ಗಾಯಗೊಳಿಸಿದನು. ಸಾರಥಿಗಳ ಬಾಹುಗಳಿಗೂ ಶರ ಪ್ರಯೋಗಿಸಿ ಬೀಳಿಸಿದನು. ವ್ಯೂಹ ಚದುರಿ ಚೆಲ್ಲಾಪಿಲ್ಲಿಯಾಯಿತು. ಈಗ ಕರ್ಣನಿಗೆ ಧರ್ಮರಾಯ ಎದುರಾದನು. ನಿಮೇಷಮಾತ್ರದಲ್ಲಿ (ಕಣ್ಣಿನ ರೆಪ್ಪೆ – ಮಿಟುಕಿಸುವಷ್ಟು ಸಣ್ಣ ಸಮಯ) ಮಹಾಸ್ತ್ರಗಳನ್ನು ಸಂಧಾನ ಮಾಡಿ ಧರ್ಮರಾಯನ ಧನುಸ್ಸನ್ನು ಕತ್ತರಿಸಿ ಬಿಟ್ಟನು. ಆ ಕೂಡಲೆ ಧರ್ಮಜನ ಸುವರ್ಣ ರತ್ನ ಖಚಿತ ಕವಚವನ್ನು ಸೀಳಿ ಹಾರಿಸಿಬಿಟ್ಟನು. ಸಾವರಿಸಿಕೊಂಡು ಧರ್ಮರಾಯ ಶಕ್ತ್ಯಾಯುಧವನ್ನು ಕರ್ಣನಿಗೆ ಗುರಿಯಾಗಿ ಪ್ರಯೋಗಿಸಿದನು. ಆದರೆ ಅದನ್ನೂ ದಿವ್ಯಾಸ್ತ್ರ ಪ್ರಯೋಗಿಸಿ ಖಂಡಿಸಿದ ಕರ್ಣ, ಧರ್ಮಜನ ರಥದ ಧ್ವಜವನ್ನೂ ಕತ್ತರಿಸಿ ಬಿಟ್ಟನು. ಧರ್ಮಜನ ಬಲಭುಜವನ್ನು ತೀಕ್ಷ್ಣ ಶರದಿಂದ ಗಾಯಗೊಳಿಸಿ, ಅತಿವೇಗ ಶರದಿಂದ ರಥವನ್ನು ಹಾರಿಸಿದನು. ಆದರೆ ಧರ್ಮರಾಯ ಚಾಣಾಕ್ಷತೆಯಿಂದ ಜಿಗಿದು ಹಾರಿ ಬದುಕಿಕೊಂಡನು. ಅಷ್ಟರಲ್ಲಾಗಲೆ ಯುಧಿಷ್ಟಿರನ ರಕ್ಷಾಪಡೆ ಸಿದ್ಧಗೊಳಿಸಿದ್ದ ಇನ್ನೊಂದು ರಥದತ್ತ ಓಡಿ ಏರಿ ರಥಿಕನಾಗಿ ಮತ್ತೆ ಯುದ್ದ ಮುಂದುವರಿಸತೊಡಗಿದನು. ಆದರೆ ಕರ್ಣ ಇಂದಿನ ದಿನ ಸೋಲೆಂದರೆ ಏನೆಂದು ತಿಳಿಯದ ಅಜೇಯ ವೀರನಾಗಿ ವಿಜ್ರಂಭಿಸುತ್ತಿದ್ದಾನೆ. ಧರ್ಮಜನನ್ನು ಕ್ಷಣಾರ್ಧದಲ್ಲಿ ಮತ್ತೆ ಸೋಲಿಸಿ ಬೀಳಿಸಿದನು. ತನ್ನ ಮಿತ್ರ ಕೌರವನ ಆಸೆ ಈಡೇರಿಸಲು ಮನಮಾಡಿ ಪಾಂಡವಾಗ್ರಜನನ್ನು ಬಂಧಿಸಲು ಮುಂದಾದನು.

ಆಗ ಎಚ್ಚೆತ್ತುಕೊಂಡ ಶಲ್ಯ “ಕರ್ಣಾ, ಧರ್ಮರಾಯನನ್ನು ಮುಟ್ಟಬೇಡ. ಆತ ಶಾಂತಚಿತ್ತನು ಹೌದು, ಆದರೆ ಉಗ್ರ ತಪಸ್ಸನ್ನಾಚರಿಸಿದ ತಪಸ್ವಿಗಿಂತಲೂ ಅಧಿಕ ತಪಶ್ಶಕ್ತಿವಂತ. ನೀನೇನಾದರು ದುಡುಕಿ ಮನ ಮಾಡಿದೆ ಎಂದಾದರೆ ಆತನ ಕೋಧಾಗ್ನಿಯ ದೃಷ್ಟಿಗೆ ನೀನು ಭಸ್ಮೀಭೂತನಾಗುವೆ, ಜಾಗ್ರತೆವಹಿಸು” ಎಂದು ಎಚ್ಚರಿಸಿದನು.

ಆಗ ಕರ್ಣನಿಗೆ…

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page