ಭಾಗ – 452
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೫೨ ಮಹಾಭಾರತ
ಹಿಂದೆ ಕೃತಯುಗದಲ್ಲಿ ಅರ್ಷಿಷ್ಟೇನ ನೆಂಬವನು ಗುರುಗಳ ಆಶ್ರಮದಲ್ಲಿ ವೇದಾಧ್ಯಯನ ಮಾಡುತ್ತಿದ್ದನು. ನಿರಂತರವಾಗಿ ಎಷ್ಟು ಶ್ರಮವಹಿಸಿದರೂ ಶಾಸ್ತ್ರ ವಿದ್ಯೆಯಾಗಲಿ, ವೇದವಿದ್ಯೆಯಾಗಲಿ ಆತನಿಗೆ ಕರಗತವಾಗಲಿಲ್ಲ. ಅದರಿಂದ ಅತ್ಯಂತ ಖಿನ್ನ ಮನಸ್ಕನಾಗಿ ಗುರುಕುಲ ತೊರೆದು ಸರಸ್ವತೀ ನದಿ ತೀರದಲ್ಲಿರುವ (ಬ್ರಹ್ಮಯೋನಿ) ಮಹಾತೀರ್ಥದ ಬಳಿಗೆ ಹೋಗಿ ಅಲ್ಲಿ ಬಹುವರ್ಷಗಳ ಕಾಲ ತಪಸ್ಸು ಮಾಡಿದನು. ಮಹಾತಪಸ್ವಿಯಾಗಿ ಸಾಧಿಸಿ ಶ್ರೇಷ್ಟವಾದ ವೇದಗಳ ದಿವ್ಯಜ್ಞಾನವನ್ನು ಪಡೆದನು. ತಪೋಬಲದಿಂದ ವಿದ್ವಾಂಸನೂ, ವೇದವಿದನೂ, ಸಕಲ ಶಾಸ್ತ್ರ ಪಾರಂಗತ ಸಿದ್ಧಪುರುಷನಾದನು. ತನಗೆ ಇಂತಹ ಮಹತ್ಸಾಧನೆಯನ್ನು ಸಾಧಿಸಲು ಸಹಾಯವಾದ ತೀರ್ಥಕ್ಷೇತ್ರಕ್ಕೆ ಏನಾದರು ಮರಳಿ ನೀಡಬೇಕೆಂದು ಮನ ಮಾಡಿದ ಮಹರ್ಷಿಯು ಮೂರು ವರದಾನಗಳನ್ನು ಮಾಡಿದನು. ಆತನಿತ್ತ ವರಗಳಂತೆ ಬ್ರಹ್ಮಯೋನಿ ತೀರ್ಥ ಕ್ಷೇತ್ರದಲ್ಲಿ ಯಾವ ಮಾನವನು ಭಕ್ತಿಯಿಂದ ಸ್ನಾನಮಾಡುತ್ತಾನೆಯೊ ಅವನು ಅಶ್ವಮೇಧ ಯಾಗ ಮಾಡಿದ ಓರ್ವ ಮಹಾತ್ಮ ಹೊಂದಬಹುದಾದ ಪುಣ್ಯಕ್ಕೆ ಸಮತುಲ್ಯವಾದ ಪುಣ್ಯಬಲವನ್ನು ಹೊಂದಲಿ. ಎರಡನೆಯದಾಗಿ ವಿಷಸರ್ಪಗಳ ಭಯವಿದ್ದ ಆ ತೀರ್ಥಕ್ಷೇತ್ರದಲ್ಲಿ ಇನ್ನು ಮುಂದೆ ಯಾವುದೆ ಸರ್ಪಗಳ ಭಯವಿರದೆ ಹೋಗಲಿ. ಮೂರನೆಯದಾಗಿ ಈ ತೀರ್ಥದ ಪವಿತ್ರ ಸಾನಿಧ್ಯದಲ್ಲಿ ಯಾರಾದರು ಅಲ್ಪಕಾಲ ವಾಸಮಾಡಿದರೂ ಯಥೇಚ್ಚವಾದ ಮನೋವಾಂಛಿತ ಫಲವನ್ನು ಹೊಂದಲಿ. ಹೀಗೆ ಅತ್ಯದ್ಬುತ ವರಬಲವನ್ನು ಕ್ಷೇತ್ರಕ್ಕೆ ದಯಪಾಲಿಸಿದನು. ನಂತರ ಅದೆ ತೀರ್ಥಕ್ಷೇತ್ರದಲ್ಲಿ ಸುದೀರ್ಘ ತಪಸ್ಸನ್ನಾಚರಿಸಿ ಸಿದ್ಧಿಯನ್ನು ಪಡೆದು ಸ್ವರ್ಗವನ್ನೇರಿದನು. ಬ್ರಹ್ಮಯೋನಿ ತೀರ್ಥಕ್ಷೇತ್ರದಲ್ಲಿ ಸಿಂಧುದ್ವೀಪ, ದೇವಾಪಿ ಮತ್ತು ರಾಜಾ ಕೌಶಿಕರು ತಪಸ್ಸನ್ನಾಚರಿಸಿದ್ದರು. ಸಿಂಧು ದ್ವೀಪ ಮತ್ತು ದೇವಾಪಿ ಮಹರ್ಷಿಗಳಾದರೆ, ಕೌಶಿಕ ರಾಜ ವಿಶ್ವಾಮಿತ್ರನೆಂದು ಖ್ಯಾತನಾಗಿ ಬ್ರಹ್ಮರ್ಷಿಯಾಗಿ ಋಷಿಮಂಡಲಕ್ಕೇರಿದ್ದನು. ಇಂತಹ ಪವಿತ್ರ ತೀರ್ಥಕ್ಷೇತ್ರದಲ್ಲಿ ಬಲರಾಮನು ತೀರ್ಥಸ್ನಾನಗೈದು, ದಾನಧರ್ಮ, ಸೇವೆಗಳನ್ನು ಮಾಡಿ, ಧ್ಯಾನಸ್ಥನಾಗಿದ್ದು ಮುಂದೆ ಅವಾಕೀರ್ಣ ತೀರ್ಥದತ್ತ ಸಾಗಿದನು.
ಅವಾಕೀರ್ಣ ತೀರ್ಥಕ್ಷೇತ್ರಕ್ಕೆ ಮಹತ್ತರವಾದ ಹಿನ್ನೆಲೆ ಕಥೆಯಿದೆ. ಅಲ್ಲಿ ಋಷಿಕುಲ ತಿಲಕರೆಂದು ಹೇಳಬಹುದಾದ ಮಹಾಮಹಿಮಾನ್ವಿತ ಮಹರ್ಷಿ ಬಕದಾಲ್ಭ್ಯರು ಆಶ್ರಮವಾಸಿಯಾಗಿದ್ದರು. ಇಲ್ಲಿಯೆ ನೈಮಿಷಾರಣ್ಯ ವಾಸಿಗಳಾದ ಋಷಿಗಳ ಸಹಿತರಾಗಿ ದ್ವಾದಶ ವಾರ್ಷಿಕ ಮಹಾಯಾಗ, ವಿಶ್ವಜಿತ್ ಯಾಗಾದಿಗಳನ್ನು ಮಾಡಿದ್ದರು. ಇದೆಲ್ಲ ಸಾಗಿದ ನಂತರ ಮನನಶೀಲರಾದ ಮಹರ್ಷಿ ಪಾಂಚಾಲದೇಶಕ್ಕೆ ಯಾಗ ದಕ್ಷಿಣೆಯನ್ನು ಪಡೆಯಲು ಋಷಿಗಳನ್ನು ಕಳುಹಿಸಿದರು. ಅಲ್ಲಿ ರೋಗರಹಿತವಾದ, ಬಲಿಷ್ಟವಾದ ಇಪ್ಪತ್ತೊಂದು ಹೋರಿಗಳನ್ನು ದಕ್ಷಿಣೆಯಾಗಿ ಪಾಂಚಾಲ ದೇಶದಲ್ಲಿ ನೀಡಲ್ಪಟ್ಟಿತು. ದಕ್ಷಿಣೆಯನ್ನು ತಂದ ಋಷಿಗಳಲ್ಲಿ ನೀವು ಈ ದಾನವನ್ನು ನಿಮ್ಮೊಳಗೆ ಹಂಚಿಕೊಳ್ಳಿ. ನನಗೆ ಬೇಕಾದ ದಕ್ಷಿಣೆಯನ್ನು ಯಾರಾದರು ಶ್ರೇಷ್ಟ ರಾಜನ ಬಳಿ ಹೋಗಿ ಪಡಕೊಳ್ಳುತ್ತೇನೆ ಎಂದನು.
ಅಂತೆಯೆ ಮಹರ್ಷಿ ಬಕದಾಲ್ಭ್ಯರು ಹಸ್ತಿನಾವತಿಯ ರಾಜ ವಿಚಿತ್ರವೀರ್ಯನ ಮಗನಾದ ಧೃತರಾಷ್ಟ್ರನ ಆಸ್ಥಾನಕ್ಕೆ ಹೋದರು. ಹೋಗಿ ರಾಜ ಧೃತರಾಷ್ಟ್ರನಲ್ಲಿ ಲೋಕಕಲ್ಯಾಣಾರ್ಥ ವಿರಚಿಸಿದ ಯಾಗಕ್ಕೆ ದಕ್ಷಿಣೆಯಾಗಿ ಗೋದಾನ ಕೇಳಿದರು. ಕಾಕತಾಳೀಯವೊ, ದೈವೇಚ್ಚೆಯೊ ಅದೇ ಸಮಯ ರಾಜನ ಗೋಲಾಯದಲ್ಲಿ ಕೆಲವು ಹಸುಗಳು ಅಸುನೀಗಿದ ಸುದ್ದಿ ಬಂದಿತ್ತು. ಆ ಚಿಂತೆಯೋ, ಅದೇ ಸಮಯ ಗೋ ದಾನ ಕೇಳಿದ್ದರಿಂದ ಉತ್ಪನ್ನವಾದ ಅಸಹನೆಯೊ! ಅಂತೂ ಕ್ರೋಧ ಉಕ್ಕೇರಿ “ಹೇ ಋಷಿವರಾ! ಗೋದಾನ ಕೇಳಲು ಬಂದಿರುವೆ. ನನ್ನ ಹಸುಗಳು ಸತ್ತು ಹೋಗಿವೆ. ಬೇಕಿದ್ದರೆ ಅವುಗಳನ್ನು ಕೊಂಡುಹೋಗು” ಎಂದು ನುಡಿದನು.
ಮಹರ್ಷಿ ಬಕದಾಲ್ಭ್ಯರು ತಾಳಲಾರದಷ್ಟು ಕೋಪ ಗೊಂಡು ಸಹನೆ ಕಳಕೊಳ್ಳುವ ಸ್ಥಿತಿ ತಲುಪಿದರು. ತಾನೇನು ಸತ್ತ ದನಗಳನ್ನೊಯ್ದು ಗೋಮಾಂಸ ಭಕ್ಷಣೆ ಮಾಡುವವನೆ? ಅದಲ್ಲದಿದ್ದರೂ ದನದ ಹೆಣವನ್ನೊಯ್ದು ಮಾಡಬೇಕಾದುದು ಆದರು ಏನು? ಅವುಗಳನ್ನು ಹೂಳುವ ಊಳಿಗದವನೆ? ಎಂದು ತರ್ಕಿಸತೊಡಗಿ, ಸೈರಿಸಿಕೊಂಡರು. ಅದೇನು ವಿವೇಚಿಸಿದರೊ! ಸರಿ ನಿನ್ನಿಚ್ಚೆಯಂತೆ ಸತ್ತ ದನಗಳನ್ನು ನನಗೆ ದಾನವಾಗಿ ನೀಡೆಂದು ಕೇಳಿ ಪಡೆದರು.
ಮುಂದೆ ನಡೆದದ್ದು ಮಾತ್ರ ಧೃತರಾಷ್ಟ್ರನ ಪಾಲಿಗೆ ಘೋರ ಘಟನೆ.
ಮುಂದುವರಿಯುವುದು…






















































