22.1 C
Udupi
Sunday, February 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 404

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೪೦೪ ಮಹಾಭಾರತ

ಆಗ ಅರ್ಜುನ ನಡೆದ ವೃತ್ತಾಂತವನ್ನೆಲ್ಲ ವಿವರಿಸುತ್ತಾ, ಅಣ್ಣನನ್ನು ಈ ರೀತಿ ಭೀಭತ್ಸಕರವಾಗಿ ಘಾಸಿಗೊಳಿಸಿದ ಕರ್ಣನನ್ನು ದಿನಾಂತ್ಯದೊಳಗೆ ವಧಿಸುವ ಪ್ರತಿಜ್ಞೆಗೈದಿರುವುದನ್ನೂ, ಧರ್ಮರಾಯನಿಂದಾದ ಗಾಂಡೀವ ನಿಂದನೆ, ಅದಕ್ಕೆ ಪ್ರತಿಯಾಗಿ ತನ್ನ ಉಪಾಂಶು ವೃತ ಅಂತಹ ನಿಂದಕರು ಯಾರೇ ಇರಲಿ ಆ ಕ್ಷಣದಲ್ಲಿ ಅವರ ಶಿರಚ್ಚೇದನಗೈಯುವ, ತಪ್ಪಿದರೆ ಸ್ವಯಂ ತಾನು ಪ್ರಾಣತ್ಯಾಗ ಮಾಡಬೇಕಾದ ವ್ರತ ನಿಯಮವನ್ನು ವಿವರಿಸಿದನು. ಈಗ ಗಾಂಡೀವ ನಿಂದನೆಯ ಅಪರಾಧಕ್ಕಾಗಿ ಅಣ್ಣನನ್ನು ದಂಡಿಸದೆ ಕರ್ಣವಧೆಗೆ ತಾನು ತೆರಳುವಂತಿಲ್ಲ. ಅದು ಆಗದ ಕಾರ್ಯವಾದ ಕಾರಣ, ನನಗೀಗ ಉಳಿದಿರುವ ಮಾರ್ಗ ದೇಹತ್ಯಾಗ ಮಾತ್ರ ಎಂದು ಅಗ್ನಿಗುಂಡಕ್ಕೆ ಪ್ರದಕ್ಷಿಣೆಗೈಯಲು ಮುಂದಾದನು.

ಕೃಷ್ಣ ಎಲ್ಲಾ ಘಟಿತ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಪಾರ್ಥನನ್ನು ಕರೆದು “ಅರ್ಜುನಾ! ನೀನು ಯುದ್ಧಕ್ಕೆ ಶಕ್ತಿ ಮತ್ತು ಚಿಂತನೆಗೆ ಯುಕ್ತಿ. ಸವ್ಯಸಾಚಿಯಾದ ನಿನ್ನಲ್ಲಿ ಸರಳವಾದ ಎರಡು ಪ್ರಶ್ನೆಗಳಿವೆ, ಉತ್ತರ ನೀಡಿ ನಿನ್ನ ಪ್ರತಿಜ್ಞೆ – ವೃತಗಳ ಬಗ್ಗೆ ನಿರ್ಣಯಿಸೋಣ ಎಂದನು.

“ಕೃಷ್ಣಾ! ನನ್ನ ಇಹಲೋಕದ ಯಾತ್ರೆ ಮುಗಿಸುವ ಕ್ಷಣದಲ್ಲಿದ್ದೇನೆ. ಈ ಸಮಯದಲ್ಲಿ ಕೊನೆಯ ಅವಕಾಶ ಎಂಬಂತೆ ನನಗೆ ನಿನ್ನ ಆಸೆ ಈಡೇರಿಸುವ, ಅಥವಾ ಸತ್ವ ಪರೀಕ್ಷೆ ಎದುರಿಸುವ ಸಮಯ ಒದಗಿ ಬಂದಿದೆ. ನೀನು ಕೇಳಬಹುದಾದ ಪ್ರಶ್ನೆಗಳು, ಸರ್ವಜ್ಞನಾದ ನಿನಗೆ ತಿಳಿಯದಿರುವ ವಿಷಯವಾಗಿದ್ದರೆ, ನಾನು ಉತ್ತರಿಸಲು ಅಸಮರ್ಥನಾಗುವೆ. ನೀನು ತಿಳಿದಿದ್ದೂ ನನ್ನ ಜ್ಞಾನ ಪರೀಕ್ಷೆ ಅಳೆಯಲು ಕೇಳುವೆಯಾದರೆ ಪ್ರಯತ್ನವನ್ನಷ್ಟೆ ಮಾಡಬಲ್ಲೆ. ಆಗಲಿ ಕೇಳಿ ಬಿಡು” ಎಂದನು ಅರ್ಜುನ.

“ಪಾರ್ಥಾ! ನಿನ್ನ ಬಾಯಿಯಿಂದ ಅಣ್ಣ ಧರ್ಮರಾಜ ಕೈಗೊಂಡ ನಿರ್ಧಾರಗಳು, ಕೃತ್ಯಗಳು ನಿನ್ನ ದೃಷ್ಟಿಯಲ್ಲಿ ಅಪರಾಧಗಳೆಂದು ಪರಿಗಣಿತವಾಗಿದ್ದರೆ, ಅಂತಹ ಸರ್ವ ದೋಷಗಳಿಗೆ ದೂಷಣೆಯನ್ನು ಈ ಕ್ಷಣ ನಿನ್ನಿಂದ ಕೇಳಬೇಕು. ಹೇಳುವೆಯಾ?” ಎಂದು ಕೇಳಿದನು.

ಆಗ ಅರ್ಜುನ ಆದ್ಯಂತವಾಗಿ ಯೋಚಿಸತೊಡಗಿ, ಹೇಳತೊಡಗಿದ “ಅಣ್ಣ ಧರ್ಮಜ ಸಜ್ಜನನು ಹೌದು. ಆತನ ಸುಕೃತಗಳು ಅಗಣಿತ. ಆದರೂ ಪ್ರಕೃತಿಯಲ್ಲಿ ರಾತ್ರಿ ಹಗಲು ಎಂಬ ವ್ಯತ್ಯಾಸಗಳಿಂದ ಬೆಳಕು ಕತ್ತಲೆಯ ಆಟ ಆಡಿ ತೋರಿಸುತ್ತದೆ. ಅಗಾಧವಾದ ಸಾಗರವಾದರೂ ಏರಿಳಿತಗಳನ್ನು ಕಾಣಿಸುತ್ತದೆ. ಶಶಾಂಕನಿಗೆ ಒಂದಾವರ್ತಿ ಪೂರ್ಣ ಪೌರ್ಣಮಿ ಇದ್ದರೂ ಮತ್ತೆ ಕರಗುತ್ತಾ ಬಂದು ಅಮವಾಸ್ಯೆ ಆಗುತ್ತದೆ. ಆದರೆ ನಮ್ಮಣ್ಣ ಧರ್ಮರಾಯ ಸ್ಥಿರನಾಗಿ ನಿಂತು ವಿವೇಚಿಸದೆ ಧರ್ಮ ಧರ್ಮ ಧರ್ಮ ಎಂದು ಜಪ ಮಾಡುತ್ತಾ ಸಾಗಿ, ನಮ್ಮೆಲ್ಲರ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳ ವನವಾಸ ಅಜ್ಞಾತವಾಸ ಕಳೆಯುವಂತೆ ಮಾಡಿದ್ದಾನೆ. ವ್ಯಸನವೆಂದು ತಿಳಿದಿದ್ದರೂ ದ್ಯೂತವಾಡುವ ದುರ್ವ್ಯಸನಕ್ಕೆ ಚಕ್ರವರ್ತಿಯಾದ ಬಳಿಕ ಬಲಿಯಾಗಿದ್ದಾನೆ. ಪತಿವ್ರತಾ ಶಿರೋಮಣಿಯಾಗಿರುವ, ಪ್ರಾತಃ ಸ್ಮರಣೀಯಳಾದ ದ್ರುಪಜದೆ ನಮ್ಮೈವರ ಪತ್ನಿ ದ್ರೌಪದಿ ತುಂಬಿದ ಸಭೆಯಲ್ಲಿ ಮಾನಭಂಗ ಯತ್ನಕ್ಕೆ ಒಳಗಾಗುವಂತೆ ಮಾಡಿದ ದೋಷಿಯೂ ಹೌದು. ಇಷ್ಟೆಲ್ಲಾ ಮಾಡಿದರೂ ಧರ್ಮರಾಯನಾದ ಈತನ ಧರ್ಮಪಾಲನೆಗೆ ಸಿಕ್ಕ ಫಲವೇನು? ಪೂಜ್ಯರೂ, ಪರಮಧರ್ಮಿಷ್ಟರೂ, ದೇವತಾ ಸಮಾನರೂ ಆಗಿರುವ ಅಜ್ಜ ಭೀಷ್ಮಾಚಾರ್ಯರಿಗೆ ಘೋರ ಶಿಕ್ಷೆಯೋ? ಶಸ್ತ್ರ ಶಾಸ್ತ್ರ ಶಿಕ್ಷಣ ನೀಡಿ, ಪೋಷಿಸಿ ಪಾಲಿಸಿದ, ವೃದ್ಧಾಪ್ಯದಲ್ಲಿ ನಮ್ಮಿಂದ ಸೇವೆ ಕೈಗೊಳ್ಳಬೇಕಾಗಿದ್ದ ಗುರುರ್ದೇವ ದ್ರೋಣಾಚಾರ್ಯರು ನಮ್ಮ ಕಣ್ಮುಂದೆಯೆ ಶಿರಚ್ಚೇದನಕ್ಕೆ ಒಳಗಾದದ್ದೋ? ನನ್ನ ಪ್ರಿಯ ಪುತ್ರ, ನಿನ್ನ ಅಳಿಯ ಅಭಿಮನ್ಯುವಿನ ಬಲಿದಾನವೋ? ಅನ್ನದಾತ ಆಶ್ರಯದಾತರಾದ ವಿರಾಟ, ಉತ್ತರ ಕುಮಾರರ ಮೃತ್ಯುವೋ? ಹೆಣ್ಣಿತ್ತು ಸಮರ್ಪಣಾ ಭಾವದಿಂದ ನಮ್ಮ ಜೊತೆ ನಿಂತ ಮಾವ ಮಹಾರಾಜ ದ್ರುಪದನ ವಧೆಯೋ? ಇದನ್ನೆಲ್ಲಾ ಮೀರಿ ಲಕ್ಷೋಪ ಲಕ್ಷ ವೀರ ಕ್ಷತ್ರಿಯರು, ಮಿತ್ರರು, ಬಾಂಧವರ ರಕ್ತತರ್ಪಣವೋ? ಎಷ್ಟು ಮಾತೆಯರು ಹತಭಾಗಿನಿಯರಾದರು? ಪತ್ನಿಯರು ವಿಧವೆಯರಾದರು? ಅದೆಷ್ಟು ವೃದ್ದ ಪಿತರು ಸುತನನ್ನು ಕಳಕೊಂಡು ಅನಾಥರಾದರು? ಈ ಎಲ್ಲಾ ಅನರ್ಥಗಳಿಗೆ ಕಾರಣನಾಗುವುದಾದರೆ ಈತ ಈವರೆಗೆ ಧರ್ಮವನ್ನು ಪಾಲಿಸಬೇಕಾದ ಅನಿವಾರ್ಯತೆ ಏನಿತ್ತು? ಪುರುಷರಿಲ್ಲದೆ ಕ್ಷತ್ರಿಯಾನಿಯರು ವರ್ಣ ಸಾಂಕರ್ಯಕ್ಕೆ ಕಾರಣರಾದರೆ ಆ ಮಹಾಪಾತಕಕ್ಕೆ ಹೊಣೆ ಯಾರು?ಅಂದು ದ್ಯೂತ ಭವನದಲ್ಲಿ ನಾವು ನಾಲ್ವರು ಸೆಟೆದು ನಿಂತು ಕಪಟಿಗಳಾಗಿ ವಂಚನೆಗೈದು, ದ್ರೌಪದಿಯ ಸೆರಗಿಗೆ ಕೈಯಿಕ್ಕಿದ ಕೌರವರನ್ನು ವಧಿಸಲು ಯುದ್ದಕ್ಕೆ ಆಹ್ವಾನಿಸಿದ್ದೆವು. ಆಗಲೆ ಒಪ್ಪಿಗೆ ನೀಡಿದ್ದರೆ ಕೇವಲ ಧೃತರಾಷ್ಟ್ರ ಮತ್ತು ಪಾಂಡು ಪುತ್ರರಷ್ಟೆ ರಣಾಂಗಣದ ಭಾಗವಾಗುತ್ತಿದ್ದರು. ಸಮಗ್ರ ಆರ್ಯಾವರ್ತದ ಕ್ಷಾತ್ರ ಕುಲ ಆಹುತಿಯಾಗುತ್ತಿರಲಿಲ್ಲ. ಈ ಅಪರಾಧಗಳಿಗಂತೂ ಅಣ್ಣ ಧರ್ಮರಾಯನ ಧರ್ಮಬುದ್ದಿಯ ನಿಧಾನತೆಯೆ ಕಾರಣ. ಈಗ ಅಂತಹ ಧರ್ಮ ಪಾಲನೆಯ ದೋಷದ ಪರಿಣಾಮಕ್ಕೆ ಹೊಣೆ ಯಾರು?” ಎಂಬಂತೆ ಅರ್ಜುನ ಉತ್ತರಿಸುತ್ತಾ ಪ್ರಶ್ನಿಸಿದ.

ಎಲ್ಲವನ್ನೂ ಕೇಳಿಸಿಕೊಂಡ ಕೃಷ್ಣ “ಸರಿ, ನನ್ನ ಎರಡನೆ ಪ್ರಶ್ನೆ, ಏಕಮೇವ ಧನುರ್ಧರ ನೀನು. ನಿನ್ನ ಸಮಗ್ರ ಸಾಧನೆಗಳಲ್ಲಿ ನಿನಗೆ ನಿನ್ನ ಬಗ್ಗೆ ಹೆಮ್ಮೆ ಮೂಡಿಸಿರುವ ಮಹತ್ತರವಾದವುಗಳನ್ನು ನಿನ್ನಿಂದ ಮುಖತಃ ಕೇಳಬೇಕೆಂಬ ಮನಸ್ಸಾಗಿದೆ. ಹೇಳುತ್ತಾ ಹೋಗುವೆಯಾ?

“ಅಯ್ಯಾ ಕೃಷ್ಣಾ! ನೀನು ತಿಳಿಯದೆ ಕೇಳುವ ಪ್ರಶ್ನೆಯಲ್ಲ ಇದು. ನಿನ್ನ ಸಖನಾಗಿರುವ ನನ್ನ ಪೂರ್ವಾಪರಗಳೆಲ್ಲ ನಿನಗೆ ತಿಳಿದೇ ಇದೆ. ಆದರೂ ನೀನು ಕೇಳಿದೆ ಎಂಬ ಏಕೈಕ ಕಾರಣಕ್ಕಾಗಿ ಅಮಿತವಾದ ನನ್ನ ಸಾಹಸಗಾಥೆಗಳನ್ನು ಹೇಳುತ್ತೇನೆ. ಗುರು ದ್ರೋಣಾಚಾರ್ಯರ ಪರಮ ಪ್ರಿಯ ಶಿಷ್ಯನಾಗಿ ಎಳವೆಯಲ್ಲೇ ನನ್ನ ಅಧಿಕತೆಯನ್ನು ತೋರಿ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದವ ನಾನು. ಆ ಬಳಿಕ ವನವಾಸ ಕಾಲದಲ್ಲಿ ಇಂದ್ರಕೀಲಕದಲ್ಲಿ ಸಾಕ್ಷಾತ್ ಪರಶಿವನಲ್ಲೇ ಹೋರಾಡಿ ಆತನ ಮುಕ್ಕಣ್ಣಿರುವ ಹಣೆಯನ್ನೇ ಘಾತಿಸಿ ಪಾರ್ಥ ಪ್ರಹಾರ ಎಂಬ ಲಾಂಛನ ಉಳಿಯುವಂತೆ ಮಾಡಿದ್ದು ಮಾತ್ರವಲ್ಲ, ಆತನ ಮನ ಮೆಚ್ಚಿಸಿ ಪಾಶುಪತ ಸಹಿತ ಮಾತೆ ಪಾರ್ವತಿಯ ಅಂಜನಾಸ್ತ್ರ, ಶಿವಗಣ, ಪ್ರಮಥರ ದಿವ್ಯಾಯುಧಗಳಿಂದ ಅನುಗ್ರಹಿತನಾಗಿದವ ನಾನು. ಅಲ್ಲಿಂದ ಸಶರೀರಿಯಾಗಿ ದೇವಲೋಕ ಯಾನಗೈದು ದೇವರಾಜನಿಗೇ ಆಗದ ನಿವಾತಕವಚ, ಕಾಲಕೇಯ ದೈತ್ಯರನ್ನು ಕೊಂದು ಕಿರೀಟಿ ಎಂದು ಸನ್ಮಾನಿತನಾಗಿದವನು ನಾನು. ದೇವಲೋಕದ ಊರ್ವಶಿಯೇ ನನ್ನ ಬಳಿ ಬಂದು ಅಂತಃಪುರದಲ್ಲಿ ಬೇಡಿ ಕಾಡಿದರೂ ಜಿತೇಂದ್ರಿಯನಾಗಿ ಉಳಿದು ಯೋಗ್ಯತೆ ಮೆರೆದವ ನಾನು. ಅಷ್ಟ ದಿಕ್ಪಾಲಕರ ಶಕ್ತ್ಯಾಯುಧ ಗಳೆಲ್ಲವನ್ನೂ ಸಂಪಾದಿಸಿದವ ನಾನು. ಮಾತೆ ಕುಂತಿಯ ಆಶಯ ಪೂರೈಕೆಗಾಗಿ ದೇವಲೋಕದ ಐರಾವತವನ್ನೇ ಧರೆಗಿಳಿಸಿ ತಂದು ಗಜಗೌರೀ ವೃತ ಮಾಡಿಸಿದ ವಿಕ್ರಮಿ ನಾನು. ಒಂದೆರಡೇ ನನ್ನ ಸಾಧನೆಗಳು? ದಶನಾಮಗಳಿಂದ ಲೋಕಪ್ರಸಿದ್ಧನಾಗಿರುವವ ನಾನು. ಹೇಳಿ ಮುಗಿದೀತೆ ಮಾಧವಾ?” ಎಂದು ವರ್ಣಿಸುತ್ತಾ ಕೇಳಿದ.

ಇಷ್ಟಾಗುತ್ತಲೇ ಶ್ರೀ ಕೃಷ್ಣ ಮುಗುಳ್ನಗುತ್ತಾ, “ಪಾರ್ಥಾ ನಿನ್ನ ಉಪಾಂಶು ವೃತ ಪಾಲನೆಯಾಯಿತು. ಅಗ್ನಿಕುಂಡವನ್ನು ಉಪಶಮನಗೊಳಿಸು” ಎಂದನು. ಪಾರ್ಥ ಗೊಂದಲಕ್ಕೊಳಗಾಗಿ “ಹೇಗೆ ನನ್ನ ಉಪಾಂಶು ವೃತ ಪಾಲನೆಯಾಗಿರುವುದು? ಅರ್ಥವಾಗಲಿಲ್ಲ!” ಎಂದು ಆಶ್ಚರ್ಯದಿಂದ ಕೇಳಿದನು.

ಧನಂಜಯಾ! ಯಾರು ಮಾನವಂತನ ಮಾನವನ್ನು ಅನ್ಯರ ಎದುರಲ್ಲಿ ಹರಣ ಮಾಡುತ್ತಾನೋ! ಅದು ಆತನ ಪ್ರಾಣ ಹರಣಕ್ಕಿಂತಲೂ ನಿಕೃಷ್ಟವಾದ ಕಗ್ಗೊಲೆಗೆ ಸಮಾನವಾದ ಪಾತಕ. ಅಂತಹ ವಧಾ ವಿಧಾನಕ್ಕೆ ತೇಜೋವಧೆ ಎಂದು ಹೆಸರು. ನೀನು ಪರಮ ಧರ್ಮಿಷ್ಟನಾದ ಧರ್ಮರಾಯನ ಮಾನವನ್ನು ನಿಂದಿಸುತ್ತಾ ಹೋದಾಗಲೇ ಆತನ ನೇರ ವಧೆಗಿಂತಲೂ ನೀಚ ರೀತಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಇಲ್ಲಿಗೆ ಗಾಂಡೀವ ನಿಂದನೆಗೆ ಮಾಡಬೇಕಾದ ಕೃತ್ಯ ನೀನು ಪೂರೈಸಿರುವೆ. ಅದು ಸಾಲದು ಎಂದಾದರೆ, ಯಾರೊಬ್ಬನು ಸ್ವಯಂ ತನ್ನನ್ನು ತಾನೇ ಹೊಗಳುತ್ತಾ, ತಾನೇ ಶ್ರೇಷ್ಟ ಎಂಬ ಅಹಂಭಾವ ತಳೆಯುತ್ತಾನೋ, ತಾನೊಬ್ಬ ಮಹತ್ಸಾಧಕ ಎಂದು ತಾನೇ ಘೋಷಿಸ ತೊಡಗಿ ಆತ್ಮ ಸ್ತುತಿ ಮಾಡುತ್ತಾನೋ? ಆಗ ಅವನನ್ನು ಅವನೇ ಕೊಂದಂತೆ. ನಾನು, ನಾನು, ನನ್ನಿಂದ ಎಂಬ ಭಾವ ಯಾವಾಗ ಒಬ್ಬನಿಗೆ ತಲೆಗಡರುತ್ತದೋ ಅಂತಹ ವ್ಯಕ್ತಿ ಉಸಿರಾಡುವ ಹೆಣ ಸಮಾನ. ಆತ್ಮಸ್ತುತಿಗಿಂತ ಮಿಗಿಲಾಗಿ ಆತ ಸಾಯಲು ಪ್ರತ್ಯೇಕ ದೇಹತ್ಯಾಗ ಪ್ರಯತ್ನ ಮಾಡಬೇಕಾಗಿಲ್ಲ ಹಾಗಾಗಿ ನೀನೇ ಸ್ವಯಂ ಹತ್ಯೆ ಮಾಡಿಕೊಂಡಂತಾಗಿದೆ. ಇನ್ನು ಅಗ್ನಿ ಪ್ರವೇಶ ಮಾಡಿ ಆ ಮುಖೇನ ಸಾಯಬೇಕಾದ ಅಗತ್ಯವಿಲ್ಲ” ಎಂದನು.

ಕೃಷ್ಣನ ಧರ್ಮಯುಕ್ತ ಮಾತುಗಳನ್ನು ಕೇಳಿದೊಡನೆ ಅರ್ಜುನನಿಗೆ ಒಮ್ಮೆಲೇ ತನ್ನ ದುರ್ಬುದ್ದಿಯ ಅರಿವಾಯಿತು. ಅಣ್ಣ ಧರ್ಮಜನನ್ನು ನಿಂದಿಸಿದ ತಪ್ಪಿಗಾಗಿ ಮನಸ್ಸು ಮಮ್ಮಲ ಮರುಗಿತು. ಓಡಿ ಹೋಗಿ ಗಾಯಾಳುವಾಗಿ ಮಲಗಿದ್ದ ಅಣ್ಣನ ಪಾದ ಮೂಲದಲ್ಲಿ ಶಿರವಿಟ್ಟು ಕ್ಷಮಾಪ್ರಾರ್ಥಿಯಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದನು. ತನ್ನ ಸ್ವಯಂ ಆತ್ಮ ಸ್ತುತಿಗಾಗಿ ಕೊರಗಿ ಮಹಾಪರಾಧವಾಯಿತೆಂದು ಕೃಷ್ಣನ ಪದಕ್ಕೆರಗಿ “ಕೃಷ್ಣಾ! ಗೀತೋಪದೇಶದ ದಿವ್ಯಾಮೃತ ಪಾನ ಮಾಡಿಯೂ ಶುದ್ದನಾಗದೆ ಉಳಿದಿದ್ದ ನನ್ನನ್ನು ಇಂದು ಪರಿಶುದ್ಧನನ್ನಾಗಿಸಿರುವೆ. ನನಗೀಗ ತಪ್ಪಿನ ಅರಿವಾಗಿದೆ. ಕ್ಷಮಿಸಬೇಕು ದೇವಾ” ಎಂದು ಕಣ್ಣೀರಲ್ಲೇ ಪಾದ ತೊಳೆದು ಬೇಡಿದನು.

ಆಗ ಕೃಷ್ಣ ಅರ್ಜುನನ್ನು ಹಿಡಿದೆತ್ತಿ “ಹೇ ಪಾರ್ಥಾ! ನಿನ್ನ ಅಣ್ಣನೇ ಧರ್ಮ ಮೂರ್ತಿ. ಆತನಿಂದ ಅಧರ್ಮ, ಅಪರಾಧ ಆಗುವುದಾದರೂ ಹೇಗೆ ಸಾಧ್ಯ? ಕಾಲಚಕ್ರದ ಚಲನೆಯ ಸುಳಿಗೆ ಸಿಕ್ಕಿದಾಗ ಕಾಲ ನಿರ್ಣಯದ ನಿಯಮದ ನಿಯತಿಗೆ ಆತ ವಶನಾಗಿದ್ದಾನೆಯೇ ಹೊರತು ಅಪರಾಧವೆಸಗಿಲ್ಲ. ನೀನೂ ಈಗ ಶುದ್ಧಾಂತಃಕರಣಿಯಾಗಿರುವೆ. ಕೃತ ಪಾಪಕ್ಕೆ ಪಶ್ಚಾತ್ತಾಪ ಪ್ರಾಯಶ್ಚಿತ್ತ. ಅದನ್ನು ನೀನೀಗಾಗಲೇ ಅನುಭವಿಸಿ ಶಿಕ್ಷಿತನಾಗಿರುವೆ. ವ್ಯಾಕುಲತೆಯನ್ನು ಈರ್ವರೂ ಬಿಟ್ಟು ಸಾಗುತ್ತಿರುವ ಧರ್ಮಯುದ್ಧವನ್ನು ಪೂರ್ಣಗೊಳಿಸಲು ಸಿದ್ಧರಾಗಿ” ಎಂದನು.

ಧರ್ಮಜನಿಗೂ ತನ್ನಿಂದ ಅಪಚಾರ ಎಸಗಲ್ಪಟ್ಟಿದೆಯೋ ಎಂಬ ದ್ವಂದ್ವ ಕೃಷ್ಣನಾಡಿದ ವಚನದಿಂದ ದೂರವಾಗಿ ನಿರಾಳವಾಯಿತು. ಅರ್ಜುನನೋ ಅಣ್ಣನ ಸ್ಥಿತಿಗೆ ಕಾರಣನಾದ ಕರ್ಣನ ವಧೆಯ ಪ್ರತಿಜ್ಞಾ ಪೂರಣೆಗೆ ಸಿದ್ಧನಾಗಿ ಅಕ್ಷಯ ತೂಣಿರ ಬಿಗಿದು ಅಣ್ಣ ಧರ್ಮರಾಯನ ಅನುಮತಿ ಪಡೆದು ಹೊರಟು ನಿಂತನು. ಕೃಷ್ಣಾರ್ಜುನರ ರಥ ಕುರುಕ್ಷೇತ್ರದತ್ತ ವೇಗವಾಗಿ ಹಾರತೊಡಗಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page