ಭಾಗ – 445
ಭರತೇಶ ಶೆಟ್ಟಿ,ಎಕ್ಕಾರ್

ಸಂಚಿಕೆ ೪೪೫ ಮಹಾಭಾರತ
ದೇವತೆಗಳೆಲ್ಲ ಸಮಾಲೋಚಿಸಿ ಕೈಗೊಂಡ ನಿರ್ಧಾರದಂತೆ, ಚಂದ್ರನ ಶಾಪ ವಿಮೋಚನೆಗಾಗಿ ದಕ್ಷ ಪ್ರಜಾಪತಿಯಲ್ಲಿ ವಿನಂತಿಸುವುದು ಉತ್ತಮ ಮಾರ್ಗ ಎಂದು ತೀರ್ಮಾನಿಸಿದರು. ಅದರಂತೆ ಬಂದು “ಭಗವಾನ್ ಪ್ರಜಾಪತಿಯೇ! ಚಂದ್ರನ ವಿಷಯದಲ್ಲಿ ನೀವು ಪ್ರಸನ್ನರಾಗಬೇಕು. ನಿಮ್ಮಿಂದ ಶಾಪಗ್ರಸ್ಥನಾದ ಸೋಮದೇವ ದಿನದಿಂದ ದಿನಕ್ಕೆ ಕ್ಷಯಿಸುತ್ತಿದ್ದಾನೆ. ಆತನ ಬಳಿ ಸತ್ವಾಂಶ ಸ್ವಲ್ಪ ಮಾತ್ರವೆ ಉಳಿದಿರುವಂತೆ ಕಾಣಿಸುತ್ತಿದೆ. ಹೀಗಾಗುತ್ತಿರುವ ಕಾರಣದಿಂದ ಪ್ರಜೆಗಳು, ಪ್ರಾಣಿಗಳು, ಜೀವ ಸಂಕುಲಗಳು, ಔಷಧಿ ಲತೆಗಳು, ಬಳ್ಳಿಗಳು, ವಿಧ ವಿಧವಾದ ಧಾನ್ಯಗಳ ಬೀಜಗಳು ಹೀಗೆ ಎಲ್ಲವೂ ಕ್ಷಯಿಸತೊಡಗಿದೆ. ಇವೆಲ್ಲ ಕ್ಷಯವಾದರೆ ಲೋಕದ ನಾಶಕ್ಕೆ ನಾಂದಿಯಾದೀತು. ಲೋಕಗಳನ್ನು ಅವಲಂಬಿಸಿರುವ ದೇವತೆಗಳಾದ ನಾವೂ ಮುಂದೆ ತೊಂದರೆಗಳಗಾಗುವುದು ನಿಶ್ಚಿತ. ನಾವೂ ಕ್ಷಯವಾಗತೊಡಗಿದರೆ ಸಮಸ್ತ ಸೃಷ್ಟಿ ಇನ್ನಿಲ್ಲವಾದೀತು. ಇಂತಹ ದುರಂತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳುವುದು ಅನಿವಾರ್ಯ. ಲೋಕ ಗುರುವೇ, ಈ ಎಲ್ಲಾ ವಿಚಾರಗಳನ್ನು ಪರಾಮರ್ಶಿಸಿ ಸಮೃದ್ಧಿಕಾರಕನಾದ ಸೋಮನ ವಿಚಾರದಲ್ಲಿ ನೀವು ಪ್ರಸನ್ನಾಗುವುದು ಯುಕ್ತವಾಗಿದೆ” ಎಂದು ಬೇಡಿಕೊಂಡರು.
ಬಲರಾಮ ಕೃಷ್ಣನಲ್ಲಿ ಕಥೆ ಮುಂದುವರಿಸಿ ಹೇಳತೊಡಗಿದನು. “ಹೀಗೆ ದೇವತೆಗಳು ಪ್ರಾರ್ಥಿಸಿದಾಗ, ನಿಮ್ಮ ಊಹೆ ನಿಜ ಹೌದಾದರೂ ಅಪರಾಧದಿಂದಾಗಿ ಚಂದ್ರ ಶಾಪಗ್ರಸ್ತನಾಗಿದ್ದಾನೆ. ಅದರ ಪರಿಣಾಮಕ್ಕೆ ನಾನು ಕಾರಣ ಎಂಬ ರೀತಿ ಅಪವಾದ ಹೊರಿಸುವುದು ಸೂಕ್ತವಲ್ಲ. ನಾನಿತ್ತ ಶಾಪ ಊರ್ಜಿತವಾಗಿದೆ. ಹಿಂಪಡೆಯುವುದು ಅಸಾಧ್ಯ. ಆದರೆ, ಯಾವುದೊ ಒಂದು ವಿಶೇಷ ಕಾರಣದಿಂದ ಅದು ತಾನಾಗಿಯೆ ಪರಿಹೃತವಾಗಲಿದೆ. ಆದರೂ ಪರಿಹಾರೋಪಾಯವನ್ನು ಸೂಚಿಸುತ್ತೇನೆ. ಚಂದ್ರನೊದಗಿರುವ ಶಾಪ ಪರಿಮಾರ್ಜನೆ ಆಗ ಬೇಕಾದರೆ, ಆತ ತನ್ನ ಎಲ್ಲಾ ಪತ್ನಿಯರಲ್ಲಿ ಸಮಾನ ಭಾವದಿಂದ, ತಾರತಮ್ಯವಿಲ್ಲದೆ ನಡೆದುಕೊಳ್ಳಬೇಕು. ಹೀಗೆ ಮಾಡತೊಡಗಿ ಆತನ ಪತ್ನಿಯರು ಈತನ ಬಗ್ಗೆ ಮುನಿಸು ತೊರೆದ ಬಳಿಕ ಸರಸ್ವತೀ ನದಿ ತೀರದ ಪುಣ್ಯತೀರ್ಥದಲ್ಲಿ ಮುಳುಗಿ ಸ್ನಾನ ಮಾಡಿದರೆ ಪುನಃ ವೃದ್ಧಿ ಹೊಂದುತ್ತಾನೆ. ಆದರೂ ಶಾಪ ಊರ್ಜಿತದಲ್ಲಿದ್ದು ಅರ್ಧ ಮಾಸ ಪರ್ಯಂತರವಾಗಿ ವೃದ್ಧಿಸುತ್ತಾ ಮತ್ತೆ ಅರ್ಧ ಮಾಸ ಕ್ಷಯಿಸುತ್ತಾ ಸಾಗಬೇಕಾಗುತ್ತದೆ. ವೃದ್ಧಿಯಾಗುವ ಸಮಯ ಕೃಷ್ಣ ಪಕ್ಷ, ಕ್ಷಯವಾಗುವ ಕಾಲ ಶುಕ್ಲ ಪಕ್ಷವೆಂದು ಪರಿಗಣಿತವಾಗುತ್ತದೆ. ಹೀಗಾದ ನಂತರದಲ್ಲಿ ಚಂದ್ರ ಪಶ್ಚಿಮ ಸಮುದ್ರ ತೀರಕ್ಕೆ ಹೋಗಿ ಸರಸ್ವತೀ ನದಿ ಸಂಗಮ ಕ್ಷೇತ್ರದಲ್ಲಿ ದೇವೇಶನಾದ ಮಹಾರುದ್ರನನ್ನು ಆರಾಧಿಸಲಿ. ಪರಮೇಶ್ವರನ ಪರಮಾನುಗ್ರಹದಿಂದ ಚಂದ್ರನು ಮರಳಿ ಕಾಂತಿಯನ್ನು ಪಡೆದುಕೊಳ್ಳುತ್ತಾನೆ” ಎಂದು ನುಡಿದನು.
ದಕ್ಷ ಪ್ರಜಾಪತಿಯ ಶಾಸನ ಅನುಸಾರ ಪೂರ್ಣ ಕ್ಷಯಗೊಂಡ (ಅಮವಾಸ್ಯೆ) ಚಂದ್ರಮ ಕಳಾಹೀನನಾಗಿದ್ದರೂ ಶ್ರೇಷ್ಟವೂ ಪುಣ್ಯಪ್ರದವೂ ಆದ ಪ್ರಭಾಸ ತೀರ್ಥದಲ್ಲಿ ಮುಳುಗಿ ಸ್ನಾನ ಮಾಡುತ್ತಾ ಕಾಂತಿವಂತನಾದನು. ಈ ಅವಗಾಹನದಿಂದಾಗಿ ಚಂದ್ರನ ಕಿರಣಗಳೂ ತಂಪಾಗಿ ಲೋಕದೆಲ್ಲೆಡೆ ಪಸರಿಸಿ ಶೀತಲವಾಯಿತು. ಸೋಮನು ಮತ್ತೆ ಸರ್ವ ಲೋಕಗಳನ್ನೂ ಪ್ರಕಾಶಗೊಳಿಸಿದನು. ಎಲ್ಲಾ ದೇವತೆಗಳೂ ಪುಷ್ಕಳವಾದ ಕಾಂತಿಯುಕ್ತ ಸೋಮನೊಡನೆ ದಕ್ಷ ಪ್ರಜಾಪತಿಯ ಬಳಿಗೆ ಕರೆತಂದರು. ಸುಪ್ರೀತನಾದ ಭಗವಾನ್ ದಕ್ಷ ಪ್ರಜಾಪತಿ ದೇವತೆಗಳನ್ನು ಅನುಗ್ರಹಿಸಿದನು. ಕೃತಜ್ಞತೆಗಳನ್ನರ್ಪಿಸಿ ದಕ್ಷನ ಅನುಮತಿಯಂತೆ ಮರಳಿ ಅವರವರ ಲೋಕಗಳನ್ನು ಸೇರಿದರು. ಆ ಬಳಿಕ ದಕ್ಷ ಚಂದ್ರನನ್ನು ಕರೆದು “ವತ್ಸಾ! ಯಾವ ಕಾರಣಕ್ಕೂ ಸ್ತ್ರೀಯರನ್ನು ಅವಮಾನಿಸಬೇಡ. ಸ್ತ್ರೀ ಕುಲದ ಕಣ್ಣೀರಿಗೆ ಕಾರಣನಾಗಬೇಡ. ಹಾಗೆ ನಡೆದರೆ ಯಾವ ಪುರುಷನೇ ಆದರೂ ತನ್ನ ಪ್ರಭೆಯನ್ನು ಕಳಕೊಂಡು ಕ್ಷೀಣಿಸುತ್ತಾನೆ ಎಂಬ ಪಾಠ ಲೋಕ ಮುಖಕ್ಕೆ ನಿನ್ನಿಂದಾಗಿದೆ. ನೀನಿನ್ನು ಹೊರಟು ಮುಂದೆ ಆಗಬೇಕಾದುದರತ್ತ ಗಮನ ಹರಿಸು ಎಂದು ಹರಸಿ ಬೀಳ್ಕೊಟ್ಟನು. ಮುಂದೆ ಪಶ್ಚಿಮ ಸಮುದ್ರ ತೀರದಲ್ಲಿ ಹರನನ್ನು ಭಜಿಸಿ ಪ್ರಸನ್ನೀಕರಿಸಿ ಕ್ಷಯರಹಿತ ಅರ್ಧ ಚಂದ್ರನಾಗಿ ಪರಶಿವನ ಶಿರದಲ್ಲಿ ಸ್ಥಾನ ಪಡೆದನು. ಸದಾಶಿವನ ಜಟೆಯಲ್ಲಿ ಸದಾ ಕಾಂತಿ ಪ್ರದನಾಗಿ ಶೋಭಿಸುತ್ತಾ ಚಂದ್ರಮೌಳೀಶ್ವರನ ಸೇವಾ ನಿರತನಾದನು.
ಅಂದಿನಿಂದ ಬಹುಕಾಲ ಪ್ರತಿ ಅಮವಾಸ್ಯೆಯಂದು ಚಂದ್ರ ಪ್ರಭಾಸ ಕ್ಷೇತ್ರದ ಪುಣ್ಯ ತೀರ್ಥದಲ್ಲಿ ಮುಳುಗಿ ಸ್ನಾನಗೈದು ಕಾಂತಿ ಪ್ರದನಾಗುತ್ತಿದ್ದನು ಎಂಬುವುದು ಪುರಾಣೇತಿಹಾಸ. ಈ ಕ್ಷೇತ್ರಕ್ಕೆ ಪ್ರಭಾಸ ಎಂಬ ಹೆಸರು ಬರಲು ಚಂದ್ರನೇ ಕಾರಣ. ಪ್ರಭೆಯನ್ನು ಕಳಕೊಂಡ ಆತ ಪುಣ್ಯ ತೀರ್ಥಸ್ನಾನಗೈದು ಪ್ರಭಾಕರನಾದ ಕಾರಣದಿಂದ ಈ ಕ್ಷೇತ್ರ ಪ್ರಭಾಸ ಎಂದು ಪ್ರಖ್ಯಾತವಾಯಿತು.
ಇದಕ್ಕೂ ಮೊದಲು ಬಲರಾಮ ಹಲವು ಪುಣ್ಯ ತೀರ್ಥ ಕ್ಷೇತ್ರಗಳ ಸಂದರ್ಶನ ಮಾಡಿ ಬಂದಿದ್ದರು. ವಿನಶನ, ಸುಭೂಮಿಕ, ಗಂಧರ್ವ, ಗರ್ಗಸ್ರೋತ, ಶಂಖ, ದ್ವೈತವನ, ನೈಮಿಶೇಯ ತೀರ್ಥ, ಸಪ್ತ ಸರಸ್ವತೀ ತೀರ್ಥ ಕ್ಷೇತ್ರಾದಿಗಳನ್ನು ಸಂದರ್ಶಿಸಿದ್ದನು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್






















































