ಭಾಗ 281
ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೨೮೨ ಮಹಾಭಾರತ
ವಿದುರನ ವಿವರಣೆ ಸಹಿತ ಪ್ರಶ್ನೆಗೆ ಧೃತರಾಷ್ಟ್ರ ಉತ್ತರ ನೀಡಲಿಲ್ಲ. ಬದಲಾಗಿ “ವಿದುರಾ! ನೀನು ಧರ್ಮವನ್ನು ಸ್ಪಷ್ಟವಾಗಿ ತಿಳಿದಿರುವ ಪ್ರಾಜ್ಞನಾಗಿರುವೆ. ಅದೇ ಕಾರಣಕ್ಕಾಗಿ ಹಲವರ ಮೆಚ್ಚುಗೆಗೂ ಪಾತ್ರನಾಗಿರುವೆ. ಈಗ ನಿನ್ನಿಂದ ತಿಳಿದುಕೊಳ್ಳಬೇಕೆಂಬ ಕುತೂಹಲ ನನಗಾಗಿದೆ. ಯಾವುದರಿಂದ ಶ್ರೇಯಸ್ಸು ಪ್ರಾಪ್ತವಾಗಬಲ್ಲುದು? ಮತ್ತು ಯಾವುದು ಧರ್ಮ? ನನಗೆ ವಿವರಿಸಿ ಹೇಳುವೆಯಾ? ಎಂದು ಕೇಳಿಕೊಂಡನು.
ವಿದುರನು ” ಅಣ್ಣಾ! ನೀನೂ ಶಾಸ್ತ್ರ ಅಧ್ಯಯನ ಮಾಡಿದವನು. ನಿನಗೆ ತಿಳಿದಿರುವ ವಿಚಾರವನ್ನು ಮತ್ತೆ ನನ್ನಲ್ಲಿ ಕೇಳುತ್ತಿರುವೆ ಎಂದು ಭಾವಿಸಿ, ನನ್ನಲ್ಲಿ ನೀನೀಗ ಕೇಳಿದ ಕಾರಣದಿಂದ ನನಗೆ ತಿಳಿದುದನ್ನು ಹೇಳುವೆ.”
“ವಿವೇಕಿಯಾದವನು ಪ್ರಶಸ್ತವಾದುದನ್ನು ಮಾಡುತ್ತಾನೆ, ನಿಂದನೀಯ ಕೃತ್ಯಗಳನ್ನು ಪರಿತ್ಯಜಿಸಿ ಬದುಕುತ್ತಾನೆ. ಆಸ್ತಿಕನಾಗಿ, ಶೃದ್ಧೆಯಿಂದ ವ್ಯವಹರಿಸುತ್ತಾನೆ. ಕೋಪ, ಹರ್ಷ, ಲಜ್ಜೆ, ಗರ್ವ, ಸ್ವಪ್ರತಿಷ್ಟೆ ಇತ್ಯಾದಿಗಳನ್ನು ಅನುಸರಿಸಿದರೆ ಪುರುಷಾರ್ಥ ನಷ್ಟವಾಗುತ್ತದೆ. ಹಾಗಾಗಿ ಧರ್ಮಾತ್ಮನು ಇವುಗಳನ್ನೆಲ್ಲಾ ತೊರೆದು, ಸತ್ಕಾರ್ಯಗಳಲ್ಲಿ ಸದಾ ತನ್ನನ್ನು ತೊಡಗಿಸಿ ಕೊಂಡಿರುತ್ತಾನೆ. ಶುದ್ದ ಮನಸ್ಸು ಹೊಂದಿರುವ ಆತನಲ್ಲಿ ಪ್ರಜ್ಞೆಗೆ ತಕ್ಕ ವಿದ್ಯೆಯೂ – ವಿದ್ಯೆಗೆ ಸರಿಯಾಗುವ ಪ್ರಜ್ಞೆಯೂ ಇರುತ್ತದೆ. ಪರಿಣಾಮದಿಂದ ಮರ್ಯಾದೆ, ಪುಣ್ಯಾದಿ ಸತ್ಫಲಗಳನ್ನು ಹೊಂದುತ್ತಾನೆ”.
“ಆದರೆ, ಅವಿವೇಕಿಯಾದವನು ವಿದ್ಯಾವಂತನಾಗಿದ್ದರೂ ವಿನಯ, ತಾಳ್ಮೆ, ಸಹಿಷ್ಣುತೆ ಇತ್ಯಾದಿ ಗುಣಗಳಿರದೆ, ಅಹಂಕಾರ ತಳೆದು ಮದೋನ್ಮತ್ತತೆಯಿಂದ ವ್ಯವಹರಿಸುತ್ತಾನೆ. ಕೆಲಸ ಮಾಡದೆ ದ್ರವ್ಯ ಸಂಗ್ರಹ ಮಾಡುವ ಪ್ರಯತ್ನ ಮಾಡುತ್ತಾನೆ. ಡಂಭಾಚಾರ, ಪ್ರತಿಷ್ಟೆಗಾಗಿ ಧಾರಳತನ ತೋರುವುದು ಇತ್ಯಾದಿ ಗುಣ ಪ್ರದರ್ಶಿಸುತ್ತಾನೆ. ಇಂತಹ ಅವಿವೇಕಿಗೆ ತನ್ನ ನಿಜ ಹಿತೈಷಿಗಳು – ಪ್ರೀತಿ ಪಾತ್ರರು ಯಾರು ಎಂದು ಅರಿತುಕೊಳ್ಳಲಾಗದು. ಹೊಗಳಿಕೆ, ಪ್ರಶಂಸೆಯ ಬೆನ್ನುಹತ್ತಿ ಹೋಗುತ್ತಾ ಹಿತಶತ್ರುಗಳನ್ನು ನಂಬಿ ಬಳಗದಲ್ಲಿರಿಸಿ, ಅಯೋಗ್ಯರ ಜೊತೆ ಸ್ನೇಹ ಬೆಳೆಸುತ್ತಾನೆ. ದುರ್ಮಾರ್ಗದಲ್ಲಿ ಪ್ರವರ್ತಿಸಿ, ಅಪಾತ್ರರಲ್ಲಿ ವಿಶ್ವಾಸ ಬೆಳೆಸುತ್ತಾನೆ. ತನ್ನ ದೋಷಗಳನ್ನು ತಿದ್ದಿ ಕೊಳ್ಳಲಾಗದೆ, ಅದನ್ನು ಇತರರಲ್ಲಿ ಹುಡುಕಿ ದೂಷಿಸುವುದು, ಕರುಬುವುದು, ಮುಂತಾದ ನಡತೆಗಳನ್ನು ಪ್ರದರ್ಶಿಸುತ್ತಾನೆ. ನಿಜ ಹಿತೈಷಿಗಳನ್ನು ದೂರ ಮಾಡುತ್ತಾನೆ. ಪರಿಣಾಮ ಸತ್ಪುರುಷರನ್ನು ದ್ವೇಷ ಮಾಡುತ್ತಾನೆ. ಹೀಗೆ ವಿವೇಕಿ – ಅವಿವೇಕಿಗಳ ವ್ಯತ್ಯಾಸ ಅರಿತು ವಿವೇಕಿಗಳ ಸಾಂಗತ್ಯ – ಸಾಮಿಪ್ಯ, ಅವಿವೇಕಿಗಳಿಂದ ಅಂತರವಿರಿಸಿದರೆ ಶ್ರೇಯಸ್ಸು ಪ್ರಾಪ್ತವಾಗುತ್ತದೆ.”
ಇನ್ನು ಧರ್ಮ ಎಂದರೇನೆಂದು ವಿವರಿಸಲು ಸಂಖ್ಯಾ ರೂಪದಲ್ಲಿ ಹತ್ತು ವಿಧಗಳಾಗಿ ವಿವರಿಸುವೆ. ಈ ಸೂಕ್ಷ್ಮ ವಿಚಾರ ಅರಿತುಕೊಳ್ಳುವ – ಅನುಷ್ಠಾನಗೊಳಿಸುವ ಪ್ರಯತ್ನ ಮಾಡಬೇಕು.”
“ಕೃತ್ಯ ಮಾಡುವವನು ಕೇವಲ ಒಬ್ಬನೇ ಆದರೂ, ಅದರ ಪರಿಣಾಮ ಫಲ ಬಹು ಮಂದಿ ಅನುಭವಿಸುವಂತಾಗುತ್ತದೆ. ದುರ್ಬುದ್ಧಿಯುಳ್ಳವನು ತನ್ನ ಆಚರಣೆಯಲ್ಲಿ ಪಾಪಕೃತ್ಯಗಳನ್ನೆಸಗುತ್ತಾ, ಅದರ ಫಲವನ್ನು ರಾಜ್ಯದ ಪ್ರಜೆಗಳೂ – ರಾಜನೂ ಅನಭವಿಸಬೇಕಾಗುತ್ತದೆ. ಪರಿಣಾಮ ಸರ್ವ ನಾಶವಾದರೂ ಆಗಬಹುದು. ಆದರೆ, ಸದ್ಬುದ್ಧಿಯಿಂದ ಕೂಡಿದವನ ಆಚರಣೆ ಲೋಕ ಹಿತವನ್ನು ಸಾಧಿಸಬಲ್ಲುದು. ಮಾತ್ರವಲ್ಲ, ಸತ್ಯ ನ್ಯಾಯದ ಮಾರ್ಗವನ್ನು ಅವಲಂಬಿಸಿ, ನಿಸ್ವಾರ್ಥಿಯಾಗಿ ಬದುಕುವ ಈತ ಸ್ವರ್ಗದ ಪಥದಲ್ಲಿ ಮುನ್ನಡೆಸುತ್ತಾನೆ”
“ರಕ್ಷಣೆಗಾಗಿ ಹೋರಾಡದ, ಯುದ್ಧ ಮಾಡದ ರಾಜ, ಜ್ಞಾನಾರ್ಜನೆಗಾಗಿ ದೇಶ ಸುತ್ತದ ಬ್ರಾಹ್ಮಣ ಈ ಇಬ್ಬರೂ ನಿರರ್ಥಕರು. ಅಂದರೆ ಯಾರು ಏನು ಮಾಡಬೇಕೋ ಅದಕ್ಕೆ ಪೂರಕ ಸಾಮರ್ಥ್ಯ ಹೊಂದಿರಬೇಕು. ಇಲ್ಲದೆ ಹೋದರೆ ಅನ್ಯರ ಮೇಲೆ ಅವಲಂಬಿತರಾಗಿ ತಮ್ಮ ಸ್ವಾಭಿಮಾನ ಕಳೆದುಕೊಳ್ಳುತ್ತಾರೆ. ಪರಿಣಾಮ ನಗಣ್ಯರಾಗುತ್ತಾರೆ”
ಮನುಷ್ಯರಲ್ಲಿ ಮೂರು ವಿಧ. ಉತ್ತಮರು, ಮಧ್ಯಮರು, ಅಧಮರು. ಅವರವರ ಯೋಗ್ಯತೆ ಅರಿತು ಯಾರು ಯಾವುದಕ್ಕೆ ಸೂಕ್ತರೊ ಅದೇ ಸ್ಥಾನ, ಕಾರ್ಯಭಾಗ ನೀಡಬೇಕು. ಅಧಮನಿಗೆ ಉನ್ನತ ಜವಾಬ್ದಾರಿ ನೀಡಿದರೆ ವಿನಾಶ ಹೇತುವಾಗುತ್ತದೆ.”
“ವಿದ್ಯೆ, ವಿನಯ, ಬುದ್ದಿವಂತರೊಡನೆ ಸಮಾಲೋಚನೆ ಮತ್ತು ದೈವಸಂಕಲ್ಪ ಇವು ನಾಲ್ಕು ಉತ್ತಮ ಫಲಗಳನ್ನು ಶೀಘ್ರವಾಗಿ ತಂದು ನೀಡಬಲ್ಲವುಗಳು. ಸದ್ಬಳಕೆ ಇಲ್ಲಿ ಪ್ರಧಾನ ಕ್ರಿಯೆ.”
“ಭಿಕ್ಷುಕರು, ಮನುಷ್ಯರು, ಅತಿಥಿಗಳು, ಪಿತೃಗಳು ಮತ್ತು ದೇವತೆಗಳು ಈ ಐವರನ್ನು ಶೃದ್ದೆಯಿಂದ ಸೇವೆಗೈದು ಪೂಜಿಸಿದರೆ ಶ್ರೇಯಸ್ಸು ಉಂಟಾಗುತ್ತದೆ.”
ಮನುಷ್ಯರಾದ ನಾವುಸತ್ಯ, ದಾನ, ಶ್ರಮ, ಸಹನೆ, ತಾಳ್ಮೆ, ಧೈರ್ಯ ಈ ಆರು ಗುಣಗಳನ್ನು ಸದಾ ಪಾಲಿಸಬೇಕು.
“ಸ್ತ್ರೀ, ಜೂಜು, ಬೇಟೆ, ನಶೆ (ಮದ್ಯಪಾನ), ದುರ್ಭಾಷೆ, ಕಠಿಣ ಶಿಕ್ಷೆ, ದುಂದು ವೆಚ್ಚ ಇವು ರಾಜನಾದವನಿಗಿರುವ ಏಳು ವ್ಯಸನಗಳು. ಮಿತಿ ಮೀರಿದರೆ ಇದರ ಕಾರಣದಿಂದ ಅವನತಿ ಪ್ರಾಪ್ತವಾಗುತ್ತದೆ.”
ಒಂಭತ್ತು ಬಾಗಿಲುಗಳು (ನವ ದ್ವಾರ) ಇರುವ ಮನೆಯನ್ನು (ಶರೀರ), ಅದರ ಯಜಮಾನನ್ನು (ಆತ್ಮ) ತಿಳಿದವನು ಮಹಾ ವಿದ್ವಾಂಸ. ಅಂದರೆ ನಶ್ವರವಾದ ಶರೀರವನ್ನು ಬಳಸಿ ಆತ್ಮೋನ್ನತಿಯ ಕೆಲಸ ಮಾಡಬೇಕೆಂಬ ಸತ್ಯವನ್ನು ತಿಳಿದವನು ಮಹಾಜ್ಞಾನಿ.
“ಉನ್ಮತ್ತ, ಪ್ರಮತ್ತ, ಬಳಲಿದವನು, ಕೋಪಗೊಂಡವನು, ಹಸಿದವನು, ಆತುರವುಳ್ಳವನು, ಹೇಡಿ, ಜಿಪುಣ, ಕಾಮಾತುರನು ಈ ಹತ್ತು ಜನರೂ ಧರ್ಮವನ್ನು ಮರೆಯುತ್ತಾರೆ. ಅಂತಹ ಸಂದರ್ಭ ಎದುರಾದಾಗ ಜಾಗೃತರಾಗಿದ್ದು ಉಚಿತಾನುಚಿತ ಅರಿತು ವ್ಯವಹರಿಸುವ ಜ್ಞಾನಕ್ಕೆ ಮಬ್ಬು ಕವಿದಂತಾಗುತ್ತದೆ. ಪರಿಣಾಮ ದುರ್ಗತಿ ಪ್ರಾಪ್ತವಾಗುತ್ತದೆ.”
ಈ ಒಂದರಿಂದ ಹತ್ತರವರೆಗಿನ ಎಲ್ಲವನ್ನು ತಿಳಿಯಬೇಕಾದರೆ ವಿಶೇಷ ಅಧ್ಯಯನ – ಮನನ, ವಿವೇಚನಾ ಬುದ್ಧಿ, ಅನುಷ್ಠಾನ ಶಕ್ತಿಯೂ ಬೇಕು. ಹೀಗೆ ಸಾಗುವುದೇ ಧರ್ಮ. ಅರಿತು ಆಚರಿಸುವುದು ಶ್ರೇಯಸ್ಕರ. ಇಹದಲ್ಲಿ ಕೀರ್ತಿ – ಪರಲೋಕದಲ್ಲಿ ಸುಗತಿ ಲಭಿಸುತ್ತದೆ. ಸ್ವಾರ್ಥಕ್ಕಾಗಿ ಯಾವತ್ತೂ ಅಸತ್ಯ ಅಧರ್ಮದ ಮಾರ್ಗ ಹಿಡಿಯದೆ ನಿಷ್ಠೆಯಿಂದ ಸತ್ಯ ಸನ್ಮಾರ್ಗ ಪಾಲಿಸಿದರೆ ಅದೇ ಶ್ರೇಷ್ಟ ಧರ್ಮ.
ಮುಂದುವರಿಯುವುದು…