27.2 C
Udupi
Monday, June 2, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 210

ಭರತೇಶ್ ಶೆಟ್ಟಿ, ಎಕ್ಕಾರ್

ಭೀಮಸೇನ ವೀರಾವೇಷದಿಂದ ಕಾದಾಡಿ ಕಾವಲಾಗಿದ್ದವರನ್ನು ಹೊಡೆದೊಡಿಸಿದ. ಕುಬೇರನ ಅರಮನೆಯ ಹತ್ತಿರದಿಂದ ಹರಿದು ಇಳಿದು ಗಿರಿ ಶಿಖರಗಳಿಂದ ಧುಮುಕುತ್ತಾ ಬಂದ ನೀರ್ಝರಿಯಿಂದ ಉಂಟಾದ ಸರೋವರ ಅದಾಗಿತ್ತು. ಭೀಮಸೇನನ ಕೈಯಿಂದ ಪೆಟ್ಟು ತಿಂದು ಓಡಿದ ಕಾವಲುಗಾರರು ಕುಬೇರನಲ್ಲಿ ದೂರಿತ್ತರು. ಬಂದವನಾರೆಂದು ವಿಮರ್ಶಿಸಿದ ಕುಬೇರನಿಗೆ ಈತ ಭೀಮಸೇನನೆಂದು ತಿಳಿದು ಕಾವಲು ಭಟರನ್ನು ಉದ್ದೇಶಿಸಿ ನುಡಿದನು “ಪುಷ್ಪವರಸಿ ಬಂದವನು ಅಸಾಮಾನ್ಯ ಬಲವಂತ ವಾಯುಪುತ್ರ ಭೀಮಸೇನ. ಆತನಿಗೆ ಬೇಕಾದಷ್ಟು ಪುಷ್ಪಗಳನ್ನು ಕೊಯ್ದು ಹೋಗಲಿ, ನೀವ್ಯಾರೂ ಆಕ್ಷೇಪಿಸದಿರಿ” ಅಂತೆಯೆ ಕುಬೇರನಿಂದ ಕಳುಹಲ್ಪಟ್ಟ ದೂತರು ಬಂದು ಭೀಮಸೇನನಿಗೆ ವಂದಿಸಿ ಸೌಗಂಧಿಕಾ ಪುಷ್ಪಗಳನ್ನು ಕೊಯ್ಯಲು ಅವಕಾಶವಿತ್ತರು. ಕುಬೇರನ ಅನುಮತಿಯ ವಿಚಾರವನ್ನೂ ತಿಳಿಯಪಡಿಸಿದರು. ಭೀಮ ತನಗೆ ಬೇಕಾದಷ್ಟು ಸೌಗಂಧಿಕಾ ಪುಷ್ಪಗಳನ್ನು ಕೊಯ್ದು ಹೊರಡಲುವಾದಾಗ ಆತನನ್ನು ಕುಬೇರನ ದೂತರು ಗೌರವಿಸಿ ಬೀಳ್ಕೊಟ್ಟರು.

ಇಷ್ಟೆಲ್ಲಾ ಆಗುತ್ತಿರಬೇಕಾದರೆ ಇತ್ತ ಭೀಮಾರ್ಜುನರು ಪ್ರತ್ಯೇಕ ಕಾರಣದಿಂದ ಧರ್ಮರಾಯನ ಜೊತೆಯಲ್ಲಿರಲಿಲ್ಲ. ಸಮಯಸಾಧಕನಾಗಿ ಜಟಾಸುರ ಎಂಬ ರಾಕ್ಷಸ ಋಷಿ ರೂಪ ಧರಿಸಿ ಬಂದು ಮೊದಲೆ ಸೇರಿಕೊಂಡಿದ್ದನು. ಸಾಕಷ್ಟು ವಿಷಯಗಳ ಚರ್ಚೆಗಳಲ್ಲಿ, ಧರ್ಮ ಜಿಜ್ಞಾಸೆಗಳಲ್ಲಿ ಭಾಗಿಯಾಗುತ್ತಾ ವಿಶ್ವಾಸ ಸಂಪಾದಿಸಿದ್ದನು. ಒಂದು ದಿನ ಅವಕಾಶ ನೋಡಿಕೊಂಡು ಧರ್ಮರಾಯನ ಜೊತೆ ದ್ರೌಪದಿ ಮತ್ತು ಆತನ ತಮ್ಮಂದಿರಾದ ನಕುಲ ಸಹದೇವರನ್ನು ಕರೆದುಕೊಂಡು ಹೊರಟು ತುಸು ದೂರ ಹೋಗಿದ್ದನು. ಆತನ ಉದ್ದೇಶ ಧರ್ಮರಾಯ, ನಕುಲ ಸಹದೇವರರನ್ನು ಕೊಂದು ಅತಿ ಚೆಲುವೆಯಾದ ದ್ರೌಪದಿಯನ್ನು ಅಪಹರಿಸಿ ಹೊತ್ತೊಯ್ಯುವುದಾಗಿತ್ತು. ತನ್ನ ತಂತ್ರದಂತೆ ನಿಜರೂಪ ತಳೆದು ಧರ್ಮರಾಯ, ನಕುಲ, ಸಹದೇವ ಸಹಿತ ದ್ರೌಪದಿಯನ್ನೂ ಅಪಹರಿಸಿ ಎತ್ತಿಕೊಂಡು ಹೊತ್ತೊಯ್ದನು. ಚತುರನಾದ ಸಹದೇವ ಬುದ್ದಿವಂತಿಕೆಯಿಂದ ಜಟಾಸುರನ ಕೈಹಿಡಿತದಿಂದ ನುಸುಳಿ ತಪ್ಪಿಸಿಕೊಂಡನು. ಕ್ಷಣಾರ್ಧದಲ್ಲಿ ಯುದ್ದ ಸನ್ನದ್ಧನಾಗಿ ಅಸುರನ ಜೊತೆ ಹೋರಾಡಲು ಆರಂಭಿಸಿದನು. ಧರ್ಮರಾಯ ಯುದ್ದ ತಡೆದು ಬಹುವಿಧ ನೀತಿಯ ಮಾತುಗಳನ್ನಾಡಿದರೂ ಒಪ್ಪಲಿಲ್ಲ. ಕಡೆಗೆ “ಅಯ್ಯಾ ಅಧರ್ಮದ ದಾರಿಯಲ್ಲಿ ನೀನು ಸಾಗುತ್ತಿರುವೆ. ಪರಿಣಾಮವಾಗಿ ನಿನ್ನ ಸಾವು ಸಂಭವಿಸುತ್ತದೆ. ಬದುಕುವ ಆಶೆಯಿದ್ದರೆ ನಮ್ಮನ್ನು ಯಥಾಸ್ಥಾನದಲ್ಲಿ ಬಿಟ್ಟು ನಿನ್ನ ದಾರಿ ಹಿಡಿದು ಹೊರಟು ಹೋಗು, ಕ್ಷಮಿಸುತ್ತೇನೆ. ಹಾಗೆ ಮಾಡದಿದ್ದರೆ ನೀನು ವಧಾರ್ಹನೇ ಆಗುವೆ” ಎಂದು ಎಚ್ಚರಿಸಿದನು. ಜಟಾಸುರನಿಗೆ ಕೇಳುವ ತಾಳ್ಮೆ ಎಲ್ಲಿದೆ? ಧರ್ಮಜ, ನಕುಲ ಮತ್ತು ದ್ರೌಪದಿಯನ್ನು ತನ್ನ ಎಡಕೈಯಲ್ಲಿ ಬಿಗಿ ಹಿಡಿದು ಸಹದೇವನೊಡನೆ ಯುದ್ದ ಮುಂದುವರಿಸಿದನು.

ಆ ಕಡೆಯಿಂದ ಭೀಮಸೇನ ಸೌಗಂಧಿಕಾ ಪುಷ್ಪ ಸಮೇತನಾಗಿ ಬಂದು ನೋಡಿದರೆ ಅಣ್ಣ ತಮ್ಮಂದಿರು ಜೊತೆಗೆ ದ್ರೌಪದಿಯ ಪತ್ತೆಯಿಲ್ಲ. ಉಳಿದ ಋಷಿಗಳಲ್ಲಿ ಕೇಳಿದರೆ ಇಲ್ಲಿ ಎಲ್ಲೋ ಸುತ್ತಾಡುತ್ತಾ ಹೋಗಿರಬೇಕು ಎಂಬ ಉತ್ತರ ಸಿಕ್ಕಿತು. ಹುಡುಕಿದರೂ ಕಾಣದಾದರು. ಓಡಾಡುತ್ತಾ ಹುಡುಕುತ್ತಿದ್ದ ಭೀಮನಿಗೆ ದ್ರೌಪದಿಯು ರಕ್ಷಣೆಗಾಗಿ ಕೂಗುವ ಧ್ವನಿಯೂ, ಯುದ್ದ ಸಾಗುತ್ತಿರುವ ಸಂಘರ್ಷದ ಶಬ್ದಗಳೂ ಕೇಳಿ ಅತ್ತ ಹಾರಿ ಹೋದನು.

ಬಕಾಸುರ, ಹಿಡಿಂಬಾಸುರ, ಕಿಮ್ಮೀರಾದಿ ರಾಕ್ಷಸರನ್ನು ಹೊಸಕಿ ಬಿಸಾಡಿದ್ದ ಭೀಮಸೇನನೆದುರು ಈಗ ಜಟಾಸುರ. ಸೌಗಂಧಿಕಾ ಪುಷ್ಪವನ್ನು ತನ್ನ ಉತ್ತರೀಯದಲ್ಲಿ ಸುತ್ತಿ ಸೊಂಟಕ್ಕೆ ಕಟ್ಟಿಕೊಂಡನು. ಅರೆಕ್ಷಣದಲ್ಲಿ ಜಟಾಸುರನ್ನು ಕೆಡಹಾಕಿ ತನ್ನ ಸಹಸ್ರ ಗಜತ್ರಾಣದ ಬಾಹುಬಲದಿಂದ ಮುಷ್ಟಿ ಗುದ್ದಿನೇಟುಗಳನ್ನು ಅಪ್ಪಳಿಸಿದನು. ಧರ್ಮಜ, ನಕುಲ, ದ್ರೌಪದಿ ಬಂಧ ಮುಕ್ತರಾದರು. ಸಾಗಿದ ಘನಘೋರ ಸಂಗ್ರಾಮದಲ್ಲಿ ಭೀಮ ತನ್ನ ಭೀಕರ ಹೊಡೆತಗಳಿಂದ ರಕ್ಕಸನನ್ನು ವಧಿಸಿ ಬಿಟ್ಟನಿ. ಸೋದರರ ಜೊತೆ ದ್ರೌಪದಿಯನ್ನು ರಕ್ಷಿಸಿ ಕರೆದು ಕೊಂಡು ಬಂದನು.

ಅಣ್ಣ ಧರ್ಮರಾಯನಿಗೆ ವಂದಿಸಿ, ದ್ರೌಪದಿಯ ಆಸೆಯಂತೆ ಹೂವನ್ನರಸಿ ಹೋದ ತನಗೆ ಹನೂಮಂತನು ಸಿಕ್ಕಿದ್ದು, ಆ ಬಳಿಕ ನಡೆದ ವೃತ್ತಾಂತವನ್ನೆಲ್ಲಾ ವಿವರಿಸಿ ಹೇಳಿದನು. ಕೇಳಿದ ಧರ್ಮರಾಯನಿಗೆ ಮಹದಾನಂದವಾಯಿತು. ದಿವ್ಯ ಸೌಗಂಧಿಕಾ ಪುಷ್ಪಗಳನ್ನು ದ್ರೌಪದಿಯ ಕೈಗಿತ್ತನು. ಪುಷ್ಪಗಳನ್ನು ನೋಡಿದೊಡನೆ ಆಕೆಯ ಮುಖಾರವಿಂದಗಳು ಅರಳಿದವು. ಸೌಂದರ್ಯವನ್ನೂ, ಸುಮಸೌರಭವನ್ನೂ ಆಸ್ವಾದಿಸಿ ಧರ್ಮರಾಯನಿಗೆ ಪುಷ್ಪಗಳನ್ನರ್ಪಿಸಿದಳು. ಆಕೆ ಬಯಸಿದ ಪುಷ್ಪಗಳನ್ನು ಯಾಕೆ ಅಣ್ಣನಿಗಿತ್ತಳು ಎಂಬ ಧರ್ಮ ಸೂಕ್ಷ್ಮ ಭೀಮನಿಗೆ ಅರ್ಥವಾಯಿತು. ತನ್ನ ಬಿಚ್ಚಿದ ಕೂದಲನ್ನು ಬಾಚಿ ಕಟ್ಟಿ ಹೂವು ಮುಡಿಯುವ ಸ್ಥಿತಿ ಈಗ ದ್ರೌಪದಿಗಿಲ್ಲ. ಕಾರಣ ದುಷ್ಟ ಕೌರವರ ಅದರಲ್ಲೂ ದುಶ್ಯಾಸನನ ವಧೆಯಾಗುವವರೆಗೆ ಈಕೆಯ ಕೇಶಾಲಂಕಾರದ ವಿಚಾರದಲ್ಲಿ ಸಂನ್ಯಾಸವನ್ನು ಶಪಥವಾಗಿ ಘೋಷಣೆ ಮಾಡಿಯಾಗಿದೆ. ಇದನ್ನೆಲ್ಲಾ ಸ್ಮರಿಸಿಕೊಂಡ ಭೀಮ ರೋಷದಿಂದ ಘರ್ಜಿಸಿದನು.

ಅದೇ ಸಮಯಕ್ಕೆ ಗಂಧಮಾದನದ ಪರ್ವತದ ಬಳಿ ಗಗನ ಮಾರ್ಗದಲ್ಲಿ ದಿವ್ಯ ರಥವೊಂದು ತೇಲಿ ಬರುವುದು ಕಾಣಿಸಿತು. ನೋಡುತ್ತಿದ್ದಂತೆ ದೇವಲೋಕದ ರಥದಿಂದ ಅರ್ಜುನ ಇಳಿದು ಬರುತ್ತಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page