ಭಾಗ 208
ಭರತೇಶ್ ಶೆಟ್ಟಿ,ಎಕ್ಕರ್

ಬೃಹದಶ್ವರಿಂದ ನಳ ದಮಯಂತಿ ಚರಿತ್ರೆಯ ಶ್ರವಣ ಮಾಡಿ ಸಮಾಧಾನ ಹೊಂದಿದರಾದರೂ, ಪಾಂಡವರಿಗೆ ಅರ್ಜುನನ ಬಗೆಗಿನ ಚಿಂತೆ ಅಂತರಂಗದಲ್ಲಿ ಅಧಿಕವಾಗುತ್ತಲೆ ಇತ್ತು. ಇದನ್ನು ಮನಗಂಡ ಧೌಮ್ಯರು ಪರಹಾರವೇನೆಂದು ಬೃಹದಶ್ವ ಮಹರ್ಷಿಗಳ ಜೊತೆ ಸಮಾಲೋಚಿಸಿದರು. ಅವರ ತೀರ್ಮಾನದಂತೆ ಚಿಂತೆಯ ಶಮನಕ್ಕೂ, ಪುಣ್ಯ ಸಂಚಯಕ್ಕಾಗಿಯೂ ಪಾಂಡವರನ್ನು ಒಡಕೂಡಿಕೊಂಡು ಜೊತೆಯಾಗಿ ತೀರ್ಥಯಾತ್ರೆಗೆ ಹೊರಡಲು ಸಿದ್ದರಾದರು. ಸುಮೂಹೂರ್ತ ನೋಡಿ ಯಾತ್ರೆಗೆ ಹೊರಟರು. ಸಾಗುತ್ತಾ ನೈಮಿಷಾರಣ್ಯಕ್ಕೆ ಬಂದು ಗೋಮತಿ ನದಿಯಲ್ಲಿ ಸ್ನಾನ ಮಾಡಿದರು.
ನೈಮಿಷಾರಣ್ಯ ಪುರಾಣ ಪ್ರಸಿದ್ದ ದಿವ್ಯ ಸ್ಥಳ. ಜಗತ್ತಿನ ಸೃಷ್ಟಿಯಾದ ಕೆಲ ಸಮಯದ ನಂತರ ಎಲ್ಲ ಋಷಿಮುನಿಗಳು ಸೃಷ್ಟಿ ಕರ್ತ ಬ್ರಹ್ಮದೇವನ ಬಳಿಗೆ ಹೋಗಿ, ‘ಎಲ್ಲ ಪಾಪಗಳಿಂದ ಮುಕ್ತರಾಗಲು, ನಿರಂತರ ಸಾಧನೆಗೆ, ದಿವ್ಯ ಜ್ಞಾನಪ್ರಾಪ್ತಿಗೆ, ಹಾಗೆಯೇ ಸಂಪೂರ್ಣ ಮನುಕುಲದ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ವಿಧಿ ಪೂರೈಸಲು ಯೋಗ್ಯ ಸ್ಥಳ ಯಾವುದಿದೆ ? ಅದನ್ನು ಹೇಳಬೇಕೆಂದು ಪ್ರಾರ್ಥಿಸಿದರು. ಆಗ ಬ್ರಹ್ಮದೇವನು ನಾನು ನನ್ನ ‘ಮನೋಮಯ’ ಚಕ್ರವನ್ನು ಕಳುಹಿಸುತ್ತೇನೆ. ಅದು ನಿಮ್ಮನ್ನು ಸರಿಯಾದ ಸ್ಥಳಕ್ಕೆ ಕರೆದುಕೊಂಡು ಹೋಗುವುದು. ಯಾವ ಸ್ಥಳದಲ್ಲಿ ಅದು ನಿಲ್ಲುತ್ತದೋ, ಆ ಸ್ಥಳ ನಿಮ್ಮ ಪವಿತ್ರ ಸ್ಥಳದ ಕೇಂದ್ರಬಿಂದು ಆಗುವುದು’. ಎಂದು ಹೇಳಿ ಅವರು ಚಕ್ರವನ್ನು ಬಿಟ್ಟರು. ಎಲ್ಲ ಋಷಿಮುನಿಗಳು ಆ ಚಕ್ರದ ಹಿಂದೆ ವ್ಯೋಮ ಮಾರ್ಗಿಗಳಾಗಿ ಹೊರಟರು. ಸಂಪೂರ್ಣ ಜಗತ್ಪರ್ಯಟನೆ ಮಾಡಿದ ನಂತರ ಆ ಚಕ್ರವು ಒಂದು ನಿರ್ಜನ ಅರಣ್ಯ ಸ್ಥಳದಲ್ಲಿ ನಿಂತಿತು. ಆ ಶಕ್ತಿಶಾಲಿಯಾದ ಚಕ್ರವು ಮಿಂಚಿನ ವೇಗದಲ್ಲಿ ಪೃಥ್ವಿಯ ಮೇಲೆ ಅಪ್ಪಳಿಸಿದ್ದರಿಂದ ಪಾತಾಳಲೋಕದಿಂದ ನೀರು ಚಿಮ್ಮಿ ಪುಟಿದೇಳತೊಡಗಿತು. ಆಗ ಬ್ರಹ್ಮದೇವನು ಲಲಿತಾದೇವಿಗೆ ಆ ಮನೋಮಯಚಕ್ರವನ್ನು ನಿಲ್ಲಿಸಲು ಪ್ರಾರ್ಥಿಸಿದನು. ಲಲಿತಾದೇವಿಯು ತನ್ನ ದಿವ್ಯ ಶಕ್ತಿಯಿಂದ ಆ ಚಕ್ರವನ್ನು ನಿಲ್ಲಿಸಿ ಆ ಸ್ಥಳದಲ್ಲಿ ಲಿಂಗಧಾರಿಣಿಯ ರೂಪದಲ್ಲಿ ಸ್ಥಿರವಾದಳು. ಅಂದಿನಿಂದ ಬ್ರಹ್ಮದೇವನ ‘ಮನೋಮಯ’ ಚಕ್ರ ಬಿದ್ದಿರುವ ಸ್ಥಳ ಮತ್ತು ಅದರ ಸುತ್ತಮುತ್ತಲಿನ ಅರಣ್ಯ ‘ನೇಮಿಷಾರಣ್ಯ’ ಅಥವಾ ‘ನೈಮಿಷಾರಣ್ಯ’ ಎಂದು ಪ್ರಖ್ಯಾತವಾಯಿತು. ನೇಮಿ’ ಅಂದರೆ ಚಕ್ರದ (ಅಂಚು) ತುದಿ ಎಂಬ ಅರ್ಥವಿದೆ. ಯಾವ ಸ್ಥಳದಲ್ಲಿ ಆ ಚಕ್ರವು ಪೃಥ್ವಿಯ ಮೇಲೆ ಅಪ್ಪಳಿಸಿತೋ ಮತ್ತು ಅಲ್ಲಿಂದ ನೀರು ಚಿಮ್ಮಿತೋ, ಅದೇ ‘ಚಕ್ರತೀರ್ಥ’ವಾಯಿತು. ಈ ಸ್ಥಾನವು ‘ಜಗತ್ತಿನ ಕೇಂದ್ರವಾಗಿದೆ’, ಎಂದು ಹೇಳುತ್ತಾರೆ. ನಂತರ ಅದು ಎಲ್ಲ ಯುಗಗಳಲ್ಲಿನ ಎಲ್ಲ ಸಂತರ ಮತ್ತು ಋಷಿಮುನಿಗಳ ಧ್ಯಾನಧಾರಣೆಯ ಕೇಂದ್ರಸ್ಥಾನವಾಯಿತು.
ಇದೇ ನೈಮಿಷಾರಣ್ಯದಲ್ಲಿ ಭಗವಾನ್ ವ್ಯಾಸ ಮಹರ್ಷಿಗಳು ೪ ವೇದ, ೬ ಶಾಸ್ತ್ರಗಳು ಮತ್ತು ೧೮ ಪುರಾಣಗಳನ್ನು ರಚಿಸಿರುವುದು. ಅಲ್ಲಿಯೆ ಅವರು ತಮ್ಮ ಪ್ರಿಯ ಶಿಷ್ಯರಾದ ಜೈಮಿನಿ ಮಹರ್ಷಿಗೆ ಸಾಮವೇದವನ್ನು ಉಪದೇಶ ಮಾಡಿರುವುದು.
ಶ್ರೀ ಸತ್ಯನಾರಾಯಣ ವ್ರತದ ಆರಂಭವೂ ನೈಮಿಷಾರಣ್ಯದಲ್ಲಿ ಆಯಿತು. ಒಂದು ನಿಮಿಷ ಕಾಲದಲ್ಲಿ ದೈತ್ಯರನ್ನೆಲ್ಲಾ ಭಗವಂತ ಸಂಹಾರ ಮಾಡಿದ್ದೂ ಇದೇ ನೈಮಿಷಾರಣ್ಯದಲ್ಲಿ. ಸೂತ ಪುರಾಣಿಕರು, ನಂತರ ಅವರ ಮಗ ಉಗ್ರಶ್ರವಸ್ಸು ನಿರಂತರ ಜ್ಞಾನ ಸತ್ರ ಗೈದ ದಿವ್ಯ ಭೂಮಿಯೂ ಇದೇ ನೈಮಿಷಾರಣ್ಯ. ನಾರಾಯಣ ಕವಚ ಮಂತ್ರ ಜಪಗೈಯುತ್ತಿದ್ದ ದಧೀಚಿ ಮಹರ್ಷಿ ದಾನವ ವ್ರತಾಸುರನ ವಧೆಗೆ ತನ್ನ ಶರೀರದ ಅಸ್ಥಿಯನ್ನು ದೇವೇಂದ್ರನಿಗೆ ದಾನ ಮಾಡಿ ವಜ್ಯಾಯುಧದ ಕೊಡುಗೆಯಿತ್ತ ಕ್ಷೇತ್ರವೂ ಇದೇ ನೈಮಿಷಾರಣ್ಯ.
ಹೀಗೆ ಸ್ಥಳ ವಿಶೇಷವನ್ನು ವಿವರಿಸುತ್ತಾ, ಇಂತಹ ಪುಣ್ಯಭೂಮಿ ನೈಮಿಷಾರಣ್ಯ ದರ್ಶನಕ್ಕೆ ಹೊರಟರೆ ಜೀವನದ ಬಹು ಪಾಪ ನಾಶವಾಗುವುದು. ಪ್ರವೇಶ ಮಾತ್ರದಿಂದ ಪೂರ್ಣ ಪಾಪ ಕಳಚಲ್ಪಡುವುದು. ಕೆಲ ಋತುಗಳ ಕಾಲ ಇಲ್ಲಿ ಇದ್ದು ಗೋಮತಿ, ಚಕ್ರ, ಮಿಶ್ರಕ ತೀರ್ಥ ಸ್ನಾನ – ಪಾನ ಮಾಡುತ್ತಾ ಜ್ಞಾನ ಸತ್ರ, ಜಪ ತಪಾದಿಗಳನ್ನು ವಿರಚಿಸಿದರೆ ಏಳು ತಲೆಮಾರುಗಳ ಜನ್ಮಾಂತರದ ಪಾಪ ವಿಮೋಚನೆಯಾಗುವುದು. ಮಾತ್ರವಲ್ಲ ಸಮಸ್ಥ ತೀರ್ಥ ಸ್ನಾನ ಮಾಡಿದ ಪುಣ್ಯದ ಫಲ ಪ್ರಾಪ್ತಿಯಾಗುವುದು.
ಹೀಗೆ ನೈಮಿಷಾರಣ್ಯದ ವಿಶೇಷಗಳನ್ನು ಮಹರ್ಷಿ ಬ್ರಹದಶ್ವರ ಮುಖೇನ ತಿಳಿಯುತ್ತಾ ಹಲವು ಪ್ರಸಿದ್ದ ಕ್ಷೇತ್ರ ಯಾತ್ರೆಗೈಯುತ್ತಾ ಆಗಸ್ತ್ಯಾಶ್ರಮಕ್ಕೆ ಬಂದರು. ಪಾಂಡವರ ತೀರ್ಥಯಾತ್ರೆಯ ವಿಷಯ ತಿಳಿದ ಅತಿ ಮಹಿಮಾನ್ವಿತ ಯುಗ ಪುರುಷನೆಂದು ಹೇಳಬಹುದಾದ ಲೋಮಶ ಮಹರ್ಷಿಗಳು ಸ್ವಯಂ ತಾವಾಗಿ ಧರ್ಮರಾಯಾದಿಗಳನ್ನು ಸಂದರ್ಶಿಸುವುದಕ್ಕೆ ಬಂದರು.
ಮುಂದುವರಿಯುವುದು…






















































