ಭಾಗ 201
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೨೦೨ ಮಹಾಭಾರತ
ಸುರಸೇನೆಯೊಂದಿಗೆ ಹಿರಣ್ಯಪುರದೆಡೆ ಅರ್ಜುನ ಹೊರಟನು. ಮಾಯಾವಿ ರಾಕ್ಷಸರ ನಗರವದು. ಎಲ್ಲವೂ ಮಾಯೆ, ವೈಚಿತ್ರ್ಯಗಳ ಬೀಡು. ಇಲ್ಲಿ ಕಾಣುತ್ತಿರುವುದು ನಿಜವಲ್ಲ. ನಿಜವಾಗಿ ಇರುವುದು ಕಾಣುವುದಿಲ್ಲ. ಅಂತಹ ಅಬೇಧ್ಯ ಕೋಟೆಗೆ ಯಾರೂ ಯುದ್ದಾಕಾಂಕ್ಷಿಗಳಾಗಿ ಬಂದವರಿಲ್ಲ. ಕಾಲಕೇಯರು ಹೊರಹೋಗಿ ಕದನವಿತ್ತು ವರಬಲದಿಂದ ಜಯಿಸಿ ಬರುವುದು ಸಾಮಾನ್ಯ ಸಂಗತಿಯಾಗಿತ್ತು. ಆದರೆ ಈ ಬಾರಿ ಅವರ ಮಾಯಾಜಾಲವನ್ನು ಮೀರಿ ಆಕ್ರಮಣವಾದಾಗ ಒಮ್ಮೆಗೆ ಕಂಗೆಟ್ಟರೂ ಘೋರ ಸಂಗ್ರಾಮಕ್ಕೆ ಸನ್ನದ್ಧರಾದರು ರಕ್ಕಸರು. ಉಗ್ರ ಕದನದಲ್ಲಿ ದೇವತೆಗಳನ್ನು ದೈತ್ಯರು ಹುರಿದು ಮುಕ್ಕುವಂತೆ ಮೇಲುಗೈ ಸಾಧಿಸತೊಡಗಿದರು. ಇನ್ನು ನಿಧಾನಿಸುವುದು ಬೇಡವೆಂದು ಅರ್ಜುನ ಗಾಂಡೀವವನ್ನೆತ್ತಿ ಮಂತ್ರಾಸ್ತ್ರ ಪ್ರಯೋಗ, ಅಕ್ಷಯಾಸ್ತ್ರಗಳನ್ನು ನಿರರ್ಗಳವಾಗಿ ಪ್ರಯೋಗಿಸತೊಡಗಿದನು. ಪುಂಖಾನುಪುಂಖವಾಗಿ ವರ್ಷಾಧಾರೆಯಂತೆ ಸುರಿದ ಅರ್ಜುನನ ತೀಕ್ಷ್ಣ ಶರಗಳೆದುರು ಕಾಲಕೇಯರ ಸಹಿತವಾಗಿ ಸೈನ್ಯ ನಾಶಗೊಳ್ಳುತ್ತ ಹತಪ್ರಾಣವಾಗಲು ತೊಡಗಿತು. ಅಂತಿಮವಾಗಿ ಕಾಲಕೇಯರ ವಧೆಯಾಗಿ ಅದ್ಬುತ ಜಯ ಪ್ರಾಪ್ತಿಯಾಯಿರು. ಜೀತೇಂದ್ರಿಯನ ಸಾಹಸದಿಂದ ಮಹೇಂದ್ರನ ಚಿಂತೆ ದೂರವಾಯಿತು.
ವಿಜಯೋತ್ಸಾಹದಿಂದ ದೇವತೆಗಳೊಡನೆ ದಿವ್ಯರಥದಲ್ಲಿ ಸ್ವರ್ಗವೇರಿದರೆ ಅಲ್ಲಿ ಕೋಲಾಹಲವೆ ಏರ್ಪಟ್ಟಿದೆ. ನಿವಾತಕವಚರು ಸ್ವರ್ಗದ ಮೇಲೆ ದಾಳಿ ಮಾಡಿದ್ದಾರೆ. ದೇವೇಂದ್ರ ಸಹಿತ ಅಷ್ಟ ದಿಕ್ಪಾಲಕರು ರಕ್ಷಣೆಗಾಗಿ ಕಾದಾಡುತ್ತಿದ್ದಾರೆ. ಹೊರಭಾಗದಿಂದ ಅರ್ಜುನ ನಿವಾತಕವಚರನ್ನು ಎಚ್ಚರಿಸಲು ಧನುಷ್ಟೇಂಕಾರ ಮಾಡಿದನು. ಇಕ್ಕೆಲಗಳಲ್ಲಿ ಮುತ್ತಿಗೆಯಾಗಿ ಮಧ್ಯೆ ಸಿಲುಕಿದ ನಿವಾತಕವಚರು ಅಂಜದೆ ಕದನಕಲಿಗಳಾಗಿ ಸಂಗ್ರಾಮ ನೀಡತೊಡಗಿದರು. ಅನುಗ್ರಹ ವಿಶೇಷ ಬಲಾನ್ವಿತ ಅರ್ಜುನ ಕಾಲಹರಣ ಮಾಡದೆ ಉಗ್ರನಾಗಿ ಅವರ ಮೇಲೆ ದಿವ್ಯಶರಗಳನ್ನು ಪ್ರಯೋಗಿಸಿ ಕಂಗೆಡಿಸಿದನು. ಕೈಸಾಗದೆ ಕಂಗೆಟ್ಟ ನಿವಾತಕವಚರು ಸೋತು ಓಡಿ ಸಮುದ್ರ ಮಧ್ಯೆ ಸೇರಿಕೊಂಡರು. ಬೆಂಬತ್ತಿ ಹೋದ ಅರ್ಜುನನಿಗೆ ನೀರಿನಲ್ಲೂ, ಕತ್ತಲೆಯಲ್ಲೂ ಮಾಯಾವಿಗಳ ಇರವರಿತು ಕದನ ಮುಂದುವರಿಸುವ ಚಾಕ್ಷುಷ ವಿದ್ಯೆಯಿದ್ದ ಕಾರಣ ಅನಾಯಾಸವಾಗಿ ದುಷ್ಟರನ್ನು ಬೆಂಬತ್ತಿ ನಿಗ್ರಹಿಸಿದನು.
ವಿಜಯಲಕ್ಷ್ಮಿಯೊಡನೆ ಸಂಭ್ರಮದಿಂದ ಮರಳಿ ಸ್ವರ್ಗಕ್ಕೆ ಬಂದು ಸೇರಿದಾಗ ಭವ್ಯ ಸ್ವಾಗತ ಏರ್ಪಟ್ಟಿತ್ತು. ಸಂಭ್ರಮ ಸಡಗರದ ಸಮಾರಂಭ ಕಾರ್ಯಕ್ರಮಗಳು ಸಾಗಿತು. ಅರ್ಜುನನ ಗುಣಗಾನ ಎಲ್ಲೆಡೆಯಿಂದಲೂ ಪ್ರತಿಧ್ವನಿಸಿತು. ದೇವರಾಜ ಇಂದ್ರ ಅನರ್ಘ್ಯವಾದ ಮುತ್ತುಗಳ ಕಿರೀಟವೊಂದನ್ನು ತನ್ನ ಕೈಯಾರೆ ಅರ್ಜುನನಿಗೆ ತೊಡಿಸಿ ಸಮ್ಮಾನಿಸಿದ. ಮಾತ್ರವಲ್ಲ ಕಿರೀಟ ಹೊತ್ತವತೆಲ್ಲರಿಗಿಂತಲೂ ಮಿಗಿಲಾದ ಕಿರೀಟಿ ನೀನು. ಲೋಕ ಲೋಕಗಳೂ ನಿನ್ನನ್ನು ಹಾಗೆಯೇ ಕೊಂಡಾಡಲಿ ಎಂದು ಹರಸಿದನು.
ದೇವಲೋಕದ ಚಿತ್ರಸೇನ ನಾಟ್ಯ ಶಾಸ್ತ್ರ ಪ್ರವೀಣ. ಅರ್ಜುನನಿಗೆ ದೇವಲೋಕದಲ್ಲಿ ನಾಟ್ಯಶಾಸ್ತ್ರವನ್ನು ಕಲಿಸಿ ಅನುಗ್ರಹಿಸಿದನು. ಅರ್ಜುನನೂ ಸಿಕ್ಕ ಅವಕಾಶದಲ್ಲಿ ಹೊಸದಾದ ವಿದ್ಯೆ ನಾಟ್ಯಶಾಸ್ತ್ರವನ್ನು ಅಧ್ಯಯನ ಮಾಡುತ್ತಾ ಕರಗತಗೊಳಿಸತೊಡಗಿದನು. ಹೀಗಿರಲು ವನವಾಸ ಮತ್ತು ತನ್ನ ಪರಿವಾರದವರ ನೆನಪಾಗಿ ಮತ್ತೆ ಮರಳಿ ದ್ವೈತವನ ಸೇರುವುದಕ್ಕೆ ಇಂದ್ರನ ಅನುಮತಿ ಬೇಡಿದನು.
ಒಂದೆಡೆ ಅರ್ಜುನನ ವಿಶೇಷ ವಿಜಯಗಾಥೆ ಸಾಗುತ್ತಿದ್ದರೆ ಇತ್ತ ದ್ವೈತವನದಲ್ಲಿ ವನವಾಸದ ದೀಕ್ಷಾ ಪಾಲನೆಯಲ್ಲಿ ನಿರತರಾಗಿದ್ದ ಅರ್ಜುನನ ಸೋದರರು, ಪತ್ನಿ ದ್ರೌಪದಿಗೆ ಅರ್ಜುನ ಇಂದ್ರಕೀಲಕಕ್ಕೆ ಹೋದ ದಿನದಿಂದ ಏನೋ ಒಂದು ತರಹದ ಮಾನಸಿಕ ವೇದನೆ ದುಃಖ ಮನ ಮಾಡಿತ್ತು. ಭೀಮನಿಗಂತೂ ಅರ್ಜುನನಿಲ್ಲದೆ ಏನನ್ನೋ ಕಳೆದುಕೊಂಡವನಂತೆ ಕೋಪಗೊಳ್ಳುವುದು, ಆ ಕ್ರೋಧ ಕೌರವನತ್ತ ತಿರುಗಿ ಈಗಲೆ ಹೋಗಿ ಆ ಧೃತರಾಷ್ಟ್ರ ಪುತ್ರರನ್ನು ಕೊಂದು ಕೆಡಹುವೆನೆಂದು ಅಬ್ಬರಿಸುವುದು ಹೀಗೆಲ್ಲಾ ವರ್ತಿಸುತ್ತಿದ್ದನು. ತನಗೂ ವೇದನೆ ಆಗುತ್ತಿದ್ದರೂ ಯುಧಿಷ್ಟಿರ ಎಲ್ಲರನ್ನೂ ಸಂತೈಸುತ್ತಾ, ಸಮಾಧಾನಿಸುತ್ತಾ ನಿಯಂತ್ರಿಸಿ ಕಾಲ ಕಳೆಯುತ್ತಿದ್ದಾರೆ. ಅರ್ಜುನ ತಪಸ್ಸಿಗೆ ಹೋದ ಬಳಿಕ ವರ್ತಮಾನಗಳಿಲ್ಲದೆ ಎಲ್ಲರೂ ವ್ಯಥಿತರಾಗಿದ್ದಾರೆ.
ಮುಂದುವರಿಯುವುದು…






















































