ಭಾಗ – 197
ಭರತೇಶ್ ಎಕ್ಕಾರ್

ಸಂಚಿಕೆ ೧೯೮ ಮಹಾಭಾರತ
ಸಾಕ್ಷಾತ್ ಪ್ರತಿ ದೇವೇಂದ್ರನಂತೆ ಕಂಗೊಳಿಸುವ ಅರ್ಜುನನ ಜೊತೆ ಕಳೆಯುವ ರಸ ನಿಮಿಷಗಳನ್ನು ನೆನೆದು ಊರ್ವಶಿ ಅತ್ಯಂತ ಉಲ್ಲಾಸ ಹೊಂದಿದಳು. ತಕ್ಷಣ ಪರಿಣತರಾದ ನಾಲ್ಕಾರು ಸಖಿಯರನ್ನು ಕರೆದಳು. ಅರ್ಜುನನ್ನು ಕಾಣಲು ಹೀಗೆ ಹೋಗಲಾದೀತೆ? ಇದು ಕೇವಲ ಸ್ವಾಮಿ ಕಾರ್ಯವಲ್ಲ. ತಾನು ಮನಸಾರೆ ಬಯಸಿದ್ದು ಭಾಗ್ಯವಾಗಿ ಒಲಿದು ಬಂದಿದೆ.
ಊರ್ವಶಿಯ ಬಳಿ ಬಂದ ಪರಿಚಾರಕಿಯರು ಅವಳ ನಾಟ್ಯ ವಸನಗಳನ್ನು ಕಳಚಿದರು. ತಲೆಗೆ ಕಂಪು ಬೀರುವ ಎಣ್ಣೆಗಳನ್ನು ಹಚ್ಚಿ ಮೈಗೆ ಗಂಧ ಸುಗಂಧ ಲೇಪಿಸಿ ಹೀರಿಕೊಳ್ಳಲಿ ಎಂದು ಸಲಹೆ ನೀಡಿದರು. ಅರೆ ಕಾಯುವುದೇ!!! ಆಗುತ್ತಿಲ್ಲ ಊರ್ವಶಿಗೆ, ಆತುರ ಪಡುತ್ತಾ ಪನ್ನೀರ ಸ್ನಾನಕ್ಕೆ ಸಿದ್ಧಳಾದಳು. ಅನ್ಯ ಮಾರ್ಗವಿಲ್ಲದೆ ದೇವ ಸೇವಕಿಯರು ಸಿದ್ಧತೆ ಮಾಡಿ ಊರ್ವಶಿಗೆ ಪನ್ನೀರ ಜಳಕ ಮಾಡಿಸಿದರು. ಕೂದಲನ್ನು ಕೊಡಹಿ ಪರಿಮಳ ಧೂಪಕ್ಕೆ ಅದ್ದಿ ಒದ್ದೆಯಾರಿಸಿದಳು. ಸೌಗಂಧದ ಎಣ್ಣೆಯನ್ನು ಪೂಸಿ, ಸೌಂದರ್ಯ ವರ್ಧನೆಯಾಗಲು ಮೋಹಕ ಕೇಶ ವಿನ್ಯಾಸದಿಂದ ಕಟ್ಟಿಸಿದಳು. ಅಮೂಲ್ಯವಾದ ಮುತ್ತುಗಳಿಂದ, ಸುರತ್ನ ವಿಭೂಷಿತ ಶಿಖಾಮಣಿಗಳಿಂದ ಅಲಂಕರಿಸಿ ಕೊಂಡಳು. ಸುಮ ಪುಷ್ಪಗಳಾದ ಪಾರಿಜಾತ, ಮಂದಾರಗಳ ಮಾಲೆಗಳನ್ನು ಮುಡಿದು ತುಸು ಇಳಿಸಿಕೊಂಡಳು. ಮುಖಕ್ಕೆ ಗಂಧ, ಕೇಸರಿ, ಗುಲಾಬಿ, ಕಸ್ತೂರಿ, ಅರಸಿನ ಹಚ್ಚಿ ಸೊಬಗು ಹೆಚ್ಚಿಸಿಕೊಂಡಳು. ಕಣ್ಣಿನ ಅಂಚು, ಹುಬ್ಬು, ರೆಪ್ಪೆಗಳಿಗೆ ಕಾಡಿಗೆ ಹಚ್ಚಿಕೊಂಡಳು. ಕೈ, ಮೈ, ಕೊರಳು – ಕಂಕುಳು, ಎದೆ – ಬೆನ್ನು, ಕಾಲು – ತೋಳು ಹೀಗೆ ಎಲ್ಲೆಡೆ ವಿಧ ವಿಧ ಸುಗಂಧ ದ್ರವ್ಯಗಳಾದ ಕಸ್ತೂರಿ, ಮಲ್ಲಿಗೆ, ಮಕರಿಕಾ ಪತ್ರ, ರಕ್ತಚಂದನಾದಿ ರಸಗಂಧ ದ್ರವ್ಯಗಳನ್ನು ಹಚ್ಚಿಸಿ ಕೊಂಡಳು. ಕೈ ಕಾಲ ಬೆರಳುಗಳನ್ನು ವರ್ಣದ್ರವ್ಯಗಳಿಂದ ಅಲಂಕರಿಸಿಕೊಂಡಳು. ಹೊಳೆಯುವ ನೀಲ ವರ್ಣದ ರೇಷ್ಮೆಯ ವಸ್ತ್ರವನ್ನು ಸೊಂಟಕ್ಕೆ ಸುತ್ತಿಸಿಕೊಂಡಳು. ದಿವ್ಯವೂ ಶ್ರೇಷ್ಟವೂ ಆದ ಮೇಲು ಹೊದಿಕೆಯ ಶಾಲನ್ನು ಒಪ್ಪವಾಗಿ ಸಖಿಯರಿಂದ ಹೊದೆಸಿಕೊಂಡಳು. ಎದೆಯನ್ನು ಆವರಿಸಿದ ಈ ವಸ್ತ್ರ ಪೂರ್ತಿ ಮೈಸಿರಿ ಕಾಣದಂತೆ ಇತ್ತು. ಇಷ್ಟು ಸಾಕಾದೀತೆ? ಕಾಲಿಗೆ ಕಾಲಂದುಗೆ, ಕಿರುಗೆಜ್ಜೆ, ಕಾಲ ಬೆರಳುಗಳಿಗೆ ಹೊಳಪಿನ ಕಿರಿದಾದ ನೂಪುರಗಳು, ಮೂಗಿಗೆ ಹೊಳಪಿನ ನತ್ತು, ಕಿವಿಗಳಿಗೆ ವಜ್ರದೋಲೆ ತೊಡಿಸಿಕೊಂಡು ಒಮ್ಮೆ ದರ್ಪಣದಲ್ಲಿ ನೋಡಿಕೊಂಡಳು. ಮನಸ್ಸಿಗೆ ಇಷ್ಟಾದರೂ ತೃಪ್ತಿಯಾಗಲಿಲ್ಲ. ಇನ್ನೂ ಬೇಕೆಣಿಸಿತು. ಎದೆಗೆ ಪದಕ ಸರ, ಕನಕಹಾರ, ಮುತ್ತಿನ ಬೈತಲೆ, ಮುಂದಲೆ ಬೊಟ್ಟು, ತೋಳ್ಬಂಧಿ, ಮುಂಗೈ ಮಣಿ, ಒಡ್ಯಾಣ ಹೀಗೆ ಸರ್ವಾಂಗಗಳಿಗೂ ಸಕಲಂಕಾರ ಮಾಡಿಸಿಕೊಂಡಳು.
ತಾಂಬೂಲವನ್ನು ಸವಿದು ರಸದಿಂದ ಅಧರಕ್ಕೆ ಮೆರುಗನ್ನಿತ್ತಳು. ಕುಂಕುಮ ಮತ್ತು ಬಂಗಾರದ ಪುಡಿಯಿಂದ ಹಣೆಗೆ ಬಿಂದಿಯನ್ನಿಟ್ಟಳು.
ಮತ್ತೊಮ್ಮೆ ಮೈಗೆಲ್ಲಾ ಸುಗಂಧ ದ್ರವ್ಯಗಳನ್ನು ಹಚ್ಚಿ ಧೇನುವಿನ ಹಾಲು, ತುಪ್ಪ, ಪನ್ನೀರು,ಚಾಮರ, ತಾಂಬೂಲ ದ್ರವ್ಯಗಳನ್ನೆಲ್ಲಾ ಸಿದ್ಧಗೊಳಿಸಿ ಸಖಿಯರಲ್ಲಿ ಅದನ್ನೆಲ್ಲ ಕೊಟ್ಟಳು. ಅವರ ಹಿಂದಿನಿಂದ ಅರ್ಜುನಿಗಾಗಿ ನಿಯೋಜಿಸಿದ್ದ ಶಯನಾಗೃಹದತ್ತ ನಾಚುತ್ತಾ, ಪರ್ವತದೋಪಾದಿಯಲ್ಲಿ ಕಾಮನೆಗಳನ್ನು ಹೊತ್ತು ಮದಗಜಗಮನೆಯಂತೆ ಸಖಿಯರ ಜೊತೆ ಸಾಗಿದಳು.
ಮುಂದುವರಿಯುವುದು…








