ಭಾಗ 194
ಭರತೇಶ್ ಶೆಟ್ಟಿ, ಎಕ್ಕಾರ್

ಎಲಾ, ತಾನು ಪೂಜಿಸಿ ಅರ್ಚಿಸಿ ಸಮರ್ಪಿಸಿದ ಹೂವುಗಳು ಕಿರಾತನ ತಲೆಗೆ ಹೇಗೆ ಹೋಗುತ್ರಿದೆ? ಮತ್ತೆ ಆಶ್ಚರ್ಯಕ್ಕೊಳಗಾದನು ಅರ್ಜುನ! ಕೂಲಂಕುಷವಾಗಿ ಅವಲೋಕಿಸಿ ತರ್ಕಿಸಿದನು. ತಾನು ಪ್ರಯೋಗಿಸಿದ ಅಸ್ತ್ರ – ಶಸ್ತ್ರಗಳು, ತೋರಿದ ಅಸದಳ ವಿಕ್ರಮ ಎಲ್ಲವೂ ನಗಣ್ಯವಾಗುವಂತೆ ನಿಂತ ಮಹಾತ್ಮ ಯಾರಾಗಿರಬಹುದು? ನಾನು ಕಾನನ ಸೇರಿ ಪರಮೇಶ್ವರನ ತಪಸ್ಸು ನಿರತನಾಗಿದ್ದವನು. ಈಗ ಶುದ್ಧಾಂತಕರಣದಿಂದ ಪೂಜಿಸಿ ಅರ್ಚಿಸಿದ ಹೂವು ಕಿರಾತನ ಶಿರವೇರುತ್ತಿದೆ ಎಂದರೆ ಮಹಾದೇವನೆ ಕಿರಾತನಾಗಿ ಬಂದು ನನ್ನನ್ನು ಪರೀಕ್ಷಿಸುತ್ತಿರಬಹುದೇ? ಹೀಗೆ ತನ್ನೊಳಗೆ ತರ್ಕಿಸುತ್ತಿದ್ದಂತೆ ಏನೋ ರೋಮಾಂಚನವಾಯಿತು. ಮಿಂಚು ಹೊಳಪಿನ ಕಾಂತಿ ಹಾದು ಹೋದಂತಾಯಿತು. ಮನಸ್ಸಿಗೇನೋ ಒಂದು ತರಹದ ದಿವ್ಯ ಚೇತನ ಆವರಿಕೊಂಡಂತಾಗಿ ಸುಜ್ಞಾನದ ಜ್ಯೋತಿ ಸ್ವರೂಪ ಜಾಗೃತವಾಯಿತು. ಸತ್ಯದರ್ಶನವಾದಾಗ ಭಕ್ತ ದೇವನ ಸಮಾಗಮಕ್ಕೆ ತಡವಾದೀತೇ? ಕಿರಾತನತ್ತ ತಿರುಗಿ ಕಣ್ಮುಚ್ಚಿ ನಿಂತು ಪ್ರಾರ್ಥಿಸತೊಡಗಿದನು ಪಾರ್ಥ “ಮಹೇಶ್ವರಾ… ಪರಮೇಶ್ವರಾ… ಜಗದೀಶ್ವರಾ… ಭಕ್ತನನ್ನು ಕಾಣಲು ಕಿರಾತನಾಗಿ ಬಂದೆಯಾ ದೇವಾ! ಕ್ಷಮಿಸಬೇಕು ತಂದೆ. ಸಾಕ್ಷಾತ್ ಶಂಕರನಾದ ನೀನೇ ಬಂದಾಗ ನಿನ್ನನ್ನು ಗುರುತಿಸುವಲ್ಲಿ ನನ್ನ ಜ್ಞಾನಶಕ್ತಿ ಸಾಲದಾಗಿ ಹೋಯಿತು. ನಾನೇ ಪರಾಕ್ರಮಿ ಎಂಬ ಅಹಂಕಾರದ ಪೊರೆಯ ಹಿಂದೆ ನೀನೊಬ್ಬ ಕೇವಲ ಕಾಡ ಕಿರಾತನಾಗಿ ಕಂಡೆ. ನಿನ್ನ ಮೇಲೆ ಅಸ್ತ್ರ, ಶಸ್ತ್ರಗಳನ್ನು ಪ್ರಯೋಗಿಸಿದೆ. ಎಳೆದೆ, ಗುದ್ದಿದೆ, ಒದ್ದು ಹೊಡೆದೆ. ನನ್ನ ದಿವ್ಯ ಧನುಸ್ಸಿನಿಂದ ನಿನ್ನ ಹಣೆಗೆ ಬಡಿದು ಗಾಯಗೊಳಿಸಿದೆ. ದೇವಾ ಪುಣ್ಯಪ್ರದ ತಪವನ್ನಾಚರಿಸಿ ನಿನ್ನ ಅನುಗ್ರಹ ಪ್ರಸಾದ ಪಡೆಯಲು ಬಂದವನು ನಾನಾಗಿದದರೂ ನಾನಾಗಿದ್ದರೂ, ಮಹಾ ಪಾಪ ಕಾರ್ಯವನ್ನೆಸಗಿದೆ. ದೇವಾ ನಿನ್ನ ಭಕ್ತನಿಂದ ಅರಿಯದೆ ಆದ ಪ್ರಮಾದವನ್ನು ಮನ್ನಿಸಬೇಕು. ಅನುಗ್ರಹಿಸಿ ಕಾಪಾಡಬೇಕು ತಂದೆ. ನನ್ನಿಂದಾದ ಅಪರಾಧಕ್ಕಾಗಿ ಶರಣಾಗಿ ಕ್ಷಮೆ ಬೇಡುತ್ತಿದ್ದೇನೆ” ಎಂದು ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಶಬರ ಶಂಕರನ ಪಾದ ಮೂಲಕ್ಕೆರಗಿದನು.
ಅರ್ಜುನನನ್ನು ಎದ್ದೇಳಲು ಹೇಳಿ “ಭಕ್ತಾ ನಿನ್ನ ಶುದ್ದ ಭಕ್ತಿಗೆ ಮೆಚ್ಚಿ ಬಂದವನಿದ್ದೇನೆ. ಹರನೊಡನೆ ಕಾದಾಡಿ ಈವರೆಗೆ ಬದುಕುಳಿಯುವುದು ಸುಲಭ ಸಾಧ್ಯವೇ? ನೀನು ಏನೂ ಆಗದೆ ಉಳಿದಿರುವೆ ಎಂದಾದರೆ ಅದೇ ಮಹತ್ತರವಾದ ಅನುಗ್ರಹ. ನಿನ್ನ ಸಾಹಸ, ಶೌರ್ಯ, ಯುದ್ಧ ಕೌಶಲ್ಯ ಕಂಡು ಮನಸಾರೆ ಮೆಚ್ಚಿದವನಿದ್ದೇನೆ. ಈಗಲೇ ಹೋಗಿ ಶುಚಿರ್ಭೂತನಾಗಿ ಬಾ. ನಿನ್ನ ಇಷ್ಟಾರ್ಥಗಳನ್ನು ಅನುಗ್ರಹಿಸಲಿದ್ದೇನೆ” ಎಂದು ಶಿವ ಪರಮಾತ್ಮ ಆದೇಶಿಸಿದನು.
ಅದರಂತೆ ಸ್ನಾನಾದಿ ಕರ್ಮ ಪೂರೈಸಿ ಬಂದನು ಅರ್ಜುನ. ಶಿವ ಗಿರಿಜೆಯರು, ಎಡ ಬಲದಲ್ಲಿ ಷಣ್ಮುಗ – ಗಣಪತಿ, ನಂದಿಕೇಶ್ವರ, ಶಿವ ಗಣ, ಪ್ರಮಥರೆಲ್ಲಾ ನಿಂತಿದ್ದಾರೆ. ಅರ್ಜುನನಿಗೆ ಕಣ್ಣೆವೆಯಿಕ್ಕಲೂ ಮನಸ್ಸಾಗುತ್ತಿಲ್ಲ. ಮಹಾದೇವ ಪರಿವಾರ ಸಹಿತನಾಗಿ ಪ್ರಕಟನಾಗಿದ್ದಾನೆ. ಈ ಅರ್ಜುನನ ಬದುಕಿಗೆ ಇನ್ನೇನು ಸೌಭಾಗ್ಯ ಬೇಕು. ಇಷ್ಟನ್ನು ತರ್ಕಿಸುವಾಗ ಪಾರ್ಥನ ಬಾಯಿಯಿಂದ ಮಾತು ಹೊರಡಲಿಲ್ಲ. ಶಿವನಾಮ ಸ್ಮರಣೆಗೈಯುತ್ತಾ ನಿಂತುಬಿಟ್ಟನು. ಪೀಠಸ್ಥನಾಗಿ ಕುಳಿತಿದ್ದ ಪರಮೇಶ್ವರ ಅರ್ಜುನನನ್ನು ಎತ್ತಿ ತನ್ನ ತೊಡೆಯಲ್ಲಿ ಕುಳ್ಳಿರಿಸಿದನು. “ಅರ್ಜುನಾ ನೀನು ಅಸದಳ ವಿಕ್ರಮಿಯಾಗಿ ಸೆಣಸಾಡಿದೆ. ನಿನ್ನದ್ದಾದ ಸಂಪಾದನೆಯ ಅಕ್ಷಯ ತೂಣಿರ, ಗಾಂಡಿವ, ಖಡ್ಗಗಳನ್ನು ಕಳೆದುಕೊಂಡೆ. ತಪಸ್ಸನ್ನಾಚರಿಸಿ ಪಡೆಯಲು ಬಯಸಿದ ಆಯುಧ ಅದ್ವಿತೀಯವಾದದ್ದು
ಅದನ್ನು ಪಡೆದುಕೊಳ್ಳುವಲ್ಲಿ ನಿನ್ನ ಮನಸ್ಸೂ, ನಿನ್ನ ಬಲವರ್ಧಕ ಆಯುಧಗಳೆಲ್ಲವನ್ನೂ ನೀನು ಕಳೆದುಕೊಂಡು ಶೂನ್ಯಾವಸ್ಥೆಗೆ ಬರಬೇಕಾದ ಅಗತ್ಯವಿತ್ತು. ಈಗ ನಿನಗಾಗುವ ಶಿವಾನುಗ್ರಹ ಬೇರೆಯದರ ಜೊತೆ ಸೇರದು. ಬದಲಾಗಿ ಶಿವಾನುಗ್ರಹದ ಜೊತೆ ಸರ್ವವೂ ತಾನಾಗಿ ಬಂದು ಸೇರಿಕೊಳ್ಳುತ್ತವೆ” ಹೀಗೆ ವಿವರಿಸುತ್ತಾ ತನ್ನ ಜಟೆಯಿಂದ ದಿವ್ಯಾಯುಧ ಪಾಶುಪತ ವನ್ನು ಸೆಳೆದು ಅರ್ಜುನನಿಗೆ ಪ್ರದಾನಮಾಡಿದನು. ಮಂತ್ರೋಪದೇಶವನ್ನು ಬೊದಿಸಿದನು. ದಿವ್ಯಾಯುಧ ಪ್ರಯೋಗ ನಿಯಮ, ಅನುಸಂಧಾನ – ಉಪಸಂಹಾರ ವಿಧಿಗಳನ್ನೂ ಮಹಾದೇವ ಉಪದೇಶಿಸಿದನು. ಕೃತಾರ್ಥನಾದ ಪಾರ್ಥ ಪರಶಿವನಿಗೆ ಧನ್ಯತೆಯಿಂದ ನಮಸ್ಕರಿಸಿ ಕೃತಜ್ಞತೆ, ಭಕ್ತಿ ಭಾವದಿಂದ ಶಿವಪ್ರಸಾದವಾಗಿ ದಿವ್ಯಾಸ್ತ್ರವನ್ನು ಸ್ವೀಕರಿಸಿದನು.
ದೇವಿ ಗಿರಿಜೆ ಜಗಜ್ಜನನಿ ಲೋಕಮಾತೆ ತಾಯಿ ಮನಸ್ಸಿನವಳು. ಅರ್ಜುನನ ನಡೆ ನುಡಿ, ಭಕ್ತಿ – ಶಕ್ತಿಗೆ ಮನಮೆಚ್ಚಿದ್ದವಳಾಗಿದ್ದಳು. ಸಂತೃಪ್ತ ಮನದಿಂದ ಅನುಗ್ರಹಿಸಿ ಪಾರ್ಥನಿಗೆ ತನ್ನ ಶಕ್ತಿಯ ಅಂಜಲೀಕಾಸ್ತ್ರ ವನ್ನು ಕರುಣಿಸಿದಳು. ಆಗ ಗಣಪತಿ, ಷಣ್ಮುಗರೂ ತಮ್ಮ ಶಕ್ತಿಯ ದಿವ್ಯಾಯುಧ ಗಳನ್ನು ಅರ್ಜುನನಿಗಿತ್ತು ಅನುಗ್ರಹಿಸಿದರು. ಆ ಬಳಿಕ ದೇವ ಜಗದೀಶ್ವರ ಯುದ್ಧ ಸಮಯದಲ್ಲಿ ತಾನು ಸೆಳೆದಿದ್ದ ಅರ್ಜುನನ ಗಾಂಡೀವ, ಅಕ್ಷಯ ತೂಣಿರ, ಅಕ್ಷಯಾಸ್ತ್ರ, ದಿವ್ಯಾಸ್ತ್ರಗಳನ್ನೆಲ್ಲಾ ಒಂದೊಂದಾಗಿ ಮರಳಿ ನೀಡುತ್ತಾ ಅನುಗ್ರಹಿಸಿದನು.
ಅರ್ಜುನನ ಮನದಲ್ಲಿ ಶಿವದೇವನ ಹಣೆಗೆ ಬಿಲ್ಲಿನಿಂದ ಹೊಡೆದು ಮಾಡಿದ ಗಾಯ ಕಂಡು ಅತೀವ ವೇದನೆಯಾಯ್ತು. ಪಾರ್ಥನ ಮನಸ್ಥಿತಿ ಅರ್ಥೈಸಿದ ಮಹಾದೇವ, “ಅರ್ಜುನಾ! ನೀನು ಕ್ಷತ್ರಿಯ. ಹೋರಾಡುವುದು ನಿನಗ ಧರ್ಮ, ಕರ್ಮ ಮಾತ್ರವಲ್ಲ ಕರ್ತವ್ಯವೂ ಆಗಿದೆ. ಅದ್ವಿತೀಯ ವಿಕ್ರಮಿಯಾಗಿ ಹೋರಾಡಿ ನಿನ್ನ ಇಷ್ಟಾರ್ಥ ಈಡೇರಿಸಿರುವೆ. ನಿನ್ನ ಗಾಂಡೀವದ ಹೊಡೆತದಿಂದ ನನ್ನ ಹಣೆಯಲ್ಲಾದ ಗಾಯದ ಕುರುಹನ್ನು ನನ್ನ ಭಕ್ತರು ಪೂಜಿಸುವ ಸ್ವರೂಪವಾದ ಲಿಂಗದ ನೆತ್ತಿಯಲ್ಲಿ ಧರಿಸಿಕೊಳ್ಳುವೆ. ಇಂದಿನಿಂದ ನನ್ನ ಲಿಂಗದಲ್ಲಿ ನಿನ್ನಿಂದ ನನ್ನ ಹಣೆಯಲ್ಲಾದ ಹೊಡೆತದ ಗುರುತು ಪಾರ್ಥ ಪ್ರಹಾರ ಎಂಬ ಹೆಸರಿನಿಂದ ಅಜರಾಮರ ಕೀರ್ತಿ ಪಡೆಯಲಿ.
ಅರ್ಜುನನು ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿ ಎದ್ದಾಗ ಶಿವ ಪರಮಾತ್ಮ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹರಸಿ ಸಂಸಾರ – ಪರಿವಾರ ಸಹಿತನಾಗಿ ಅಂತರ್ಧಾನರಾದರು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್