
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬೆಂಬಲ ನೀಡಿದ ಜೆಡಿಯು ಮತ್ತು ಟಿಡಿಪಿ ಪ್ರತಿನಿಧಿಸುವ ರಾಜ್ಯಗಳಿಗೆ ಬಜೆಟ್ ನಲ್ಲಿ ಬಂಪರ್ ಅನುದಾನ ಘೋಷಣೆ ಮಾಡಲಾಗಿದೆ.
ಬಿಹಾರ, ಪಶ್ಚಿಮ ಬಂಗಾಲ, ಒಡಿಶಾ ಮತ್ತು ಆಂಧ್ರ ಪ್ರದೇಶ ರಾಜ್ಯಗಳಿಗೆ ಮೂಲಭೂತ ಸೌಕರ್ಯಗಳಿಗೆ ವಿಶೇಷ ಸ್ಕೀಂ ಜಾರಿಗೆ ತರಲಾಗುವುದು ಎಂದು ವಿತ್ತ ಸಚಿವರು ಘೋಷಿಸಿದ್ದಾರೆ.
ಬಿಹಾರಕ್ಕೆ ಹಲವು ಕಾರಿಡಾರ್ ನಿರ್ಮಾಣಕ್ಕೆ ಅನುದಾನ ಘೋಷಣೆ ಮಾಡಿದ್ದು ಪಟನಾ-ಪೂರ್ಣಿಯಾ ಎಕ್ಸ್ಪ್ರೆಸ್ ವೇ, ಬಕ್ಸರ್-ಭಾಗಲ್ಪೂರ ಎಕ್ಸ್ಪ್ರೆಸ್ ವೇ, ಬೋದಗಯಾ ರಾಜಗಿರ, ವೈಶಾಲಿ-ದರ್ಬಂಗ್ ಎಕ್ಸ್ಪ್ರೆಸ್ ವೇ ಮತ್ತು ಬೋಧಗಯಾದಲ್ಲಿ ಎರಡು ಲೇನ್ ಸೇತುವೆ ನಿರ್ಮಾಣಕ್ಕಾಗಿ 26,000 ಕೋಟಿ ರೂ. ಅನುದಾನದ ಘೋಷಣೆ ಮಾಡಲಾಗಿದೆ. ಗಂಗಾ ನದಿಗೆ ಎರಡು ಸೇತುವೆಗಳ ನಿರ್ಮಾಣವೂ ಈ ಅನುದಾನದಲ್ಲಿ ಒಳಗೊಂಡಿದೆ.
ಬಿಹಾರ ಪ್ರವಾಹ ಪರಿಸ್ಥಿತಿ ನಿಭಾಯಿಸಲು 11,500 ಕೋಟಿ ಮೀಸಲಿಡಲಾಗುವುದು. ಬಿಹಾರದಲ್ಲಿ ಹೆದ್ದಾರಿ ಜೊತೆ ಹೊಸ ಮೆಡಿಕಲ್ ಕಾಲೇಜ್, ಕ್ರೀಡಾ ಮೂಲ ಸೌಕರ್ಯ ಒದಗಿಸಲಾಗುವುದು. ಬಿಹಾರದ ಗಯಾ ಮತ್ತು ಬುದ್ದಗಯಾ ದೇವಸ್ಥಾನಗಳನ್ನು ಕಾಶಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ನಳಂದಾವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಲು ಉತ್ತೇಜನ ನೀಡಲಾಗುವುದು ಎಂದು ಘೋಷಿಸಿದರು.
ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆಯಲ್ಲಿನ ಬದ್ಧತೆಗಳನ್ನು ಈಡೇರಿಸಲು ಸರ್ಕಾರ ಪ್ರಯತ್ನಗಳನ್ನು ಮಾಡಿದೆ. ಆಂಧ್ರ ಪ್ರದೇಶಕ್ಕೆ ವಿಶೇಷ ಆರ್ಥಿಕ ಸಹಾಯಯಡಿಯಲ್ಲಿ 15 ಸಾವಿರ ಕೋಟಿ ನೆರವು ಸಿಗಲಿದೆ. 21,400 ಕೋಟಿ ಅನುದಾನದಲ್ಲಿ ಪಿರಪಂತಿಯಲ್ಲಿ 24 ಸಾವಿರ ಮೆಗಾವ್ಯಾಟ್ ಹೊಸ ವಿದ್ಯುತ್ ಸ್ಥಾವರ ಆರಂಭಿಸಲಾಗಿವುದು.
ಸರ್ಕಾರದಿಂದಲೇ ದೇಶದ 500 ಪ್ರಮುಖ ಕಂಪನಿಗಳಲ್ಲಿ ಯುವಕರಿಗೆ ಒಂದು ವರ್ಷದ ಕೌಶಲ್ಯ ತರಬೇತಿಯನ್ನು ನೀಡಲಾಗುವುದು. ಐದು ವರ್ಷದಲ್ಲಿ ಒಂದು ಕೋಟಿ ಯುವಕರಿಗೆ ಲಾಭ ಸಿಗಲಿದೆ. ಈ ತರಬೇತಿ ವೇಳೆ 5,000 ವೇತನ ಹಾಗೂ 6,000 ರೂ. ಹಣಕಾಸಿನ ನೆರವು ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.








