
ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಇಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಅಧ್ಯಾಪನಾ ವೃತ್ತಿಯನ್ನು ಪೂರೈಸಿ ನಿವೃತ್ತಗೊಂಡ ಹಿಂದಿ ವಿಭಾಗ ಮುಖ್ಯಸ್ಥರಾದ ಪ್ರೊ.ಹೆಚ್.ಜಿ.ನಾಗಭೂಷಣ ಇವರನ್ನು ಪ್ರಾಧ್ಯಾಪಕರ ಸಂಘದ ವತಿಯಿಂದ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಡಾ. ಮಂಜುನಾಥ ಎ.ಕೋಟ್ಯಾನ್ ಮಾತನಾಡಿ, ಪ್ರೊ.ನಾಗಭೂಷಣ ಅವರದ್ದು ತಣ್ಣಗಿನ ವ್ಯಕ್ತಿತ್ವ. ತನ್ನ ಪಾಡಿಗೆ ತಾನಿದ್ದುಕೊಂಡು ಕೇವಲ ವಿಭಾಗದ ಕೆಲಸವಲ್ಲದೆ ಐಕ್ಯೂಎಸಿ ಯ ನಿರ್ದೇಶಕರಾಗಿಯೂ ಇದ್ದುಕೊಂಡು ಕಾಲೇಜಿಗೆ ತನ್ನ ಸಾರ್ಥಕ ಸೇವೆಯನ್ನು ಒದಗಿಸಿದ್ದಾರೆ.
ಅಜಾತಶತ್ರುವೆನಿಸಿದ ಇವರು ತನ್ನ ಸರಳತೆ ಹಾಗೂ ಒಳ್ಳೆಯ ವ್ಯಕ್ತಿತ್ವದಿಂದ ಎಲ್ಲರ ಮನಸನ್ನು ಗೆದ್ದಿದ್ದಾರೆ. ಸಂಸ್ಥೆ ಅವರ ಸೇವೆಯನ್ನು ಸದಾ ನೆನಪಿಸುತ್ತದೆ ಎಂದರು.
ವೇದಿಕೆಯಲ್ಲಿರುವ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ ಮಾತನಾಡುತ್ತಾ, ನನ್ನ ಹಾಗೂ ನಾಗಭೂಷಣರ ಗೆಳೆತನ ಸುಮಾರು ಮೂವತ್ತೈದು ವರ್ಷಗಳದ್ದು. ಬಿಎಸ್ಸಿ ಪದವಿಯನ್ನು ಪಡೆದುಕೊಂಡು, ಭಾಷೆಯನ್ನು ಮುಖ್ಯ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡವರು ಇವರು. ನಾಗಭೂಷಣರಿಗೆ ತಂತ್ರಜ್ಞಾನದ ಅರಿವು ತುಂಬ ಇದೆ.ಎಂತಹ ಕ್ಲಿಷ್ಟ ಸಮಸ್ಯೆಗಳನ್ನೂ ಅವರು ಪರಿಹರಿಸುವ ಪ್ರಯತ್ನವನ್ನು ಸದಾ ಕಾಲ ಮಾಡುತ್ತಾರೆ. ತಾನು ಹಿಡಿದ ಕೆಲಸವನ್ನು ಸಮಯದ ಅರಿವಿಲ್ಲದೆ ಮಾಡುವ ಶೃದ್ದೆಯನ್ನು ರೂಢಿಸಿಕೊಂಡವರು. ಅವರ ನಿರ್ಗಮನ ನಿಜಕ್ಕೂ ಒಂದು ರೀತಿಯ ಖಾಲಿತನದಂತೆ ಎಂದರು.
ನಿವೃತ್ತಗೊಂಡ ಪ್ರೊ.ನಾಗಭೂಷಣ ಹೆಚ್.ಜಿ.ಯವರು ಮಾತನಾಡುತ್ತಾ, ಮಹಾವೀರ ಕಾಲೇಜು ಹಾಗೂ ಭುವನೇಂದ್ರ ಕಾಲೇಜಿನಲ್ಲಿ ನನ್ನ ವೃತ್ತಿ ಜೀವನ ಮುಂದುವರೆಯಿತು. ಭುವನೇಂದ್ರ ಕಾಲೇಜಿನಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಇದ್ದದ್ದರಿಂದ ಇಲ್ಲಿಯ ಇಡೀ ವಿದ್ಯಾರ್ಥಿ ಸಮೂಹ ಹಾಗೂ ಪ್ರಾಧ್ಯಾಪಕ ವೃಂದದ ಜೊತೆ ಒಳ್ಳೆಯ ಒಡನಾಟವನ್ನು ಇಟ್ಟುಕೊಳ್ಳಲು ಸಾಧ್ಯವಾಯಿತು. ನನ್ನ ವೃತ್ತಿ ಜೀವನಕ್ಕೆ ಬೇಕಾದ ಎಲ್ಲ ಅನುಕೂಲಗಳನ್ನು ಅಕಾಡೆಮಿ ಹಾಗೂ ಪ್ರಾಚಾರ್ಯರು ಒದಗಿಸಿದ್ದಾರೆ. ನನ್ನ ಬೆಳವಣಿಗೆಗೆ ಕಾರಣವಾದ ಎಲ್ಲರಿಗೂ ಕೃತಜ್ಞತೆಗಳನ್ನರ್ಪಿಸುವುದು ನನ್ನ ಕರ್ತವ್ಯವಾಗಿದೆ ಎಂದರು.
ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ರಮೇಶ್ ಎಸ್.ಸಿ.ಯವರು ನಿವೃತ್ತ ಜೀವನಕ್ಕೆ ಶುಭ ಹಾರೈಸಿ, ವೃತ್ತಿಗೆ ನಿವೃತ್ತಿಯೆನ್ನುವುದು ಸಹಜ. ವೃತ್ತಿಯಲ್ಲಿದ್ದಾಗ ತಾನು ಮಾಡಿದ ಒಳ್ಳೆಯ ಕೆಲಸಗಳು ಸದಾ ನೆನಪಿನಲ್ಲಿರುತ್ತದೆ ಎಂದು ನಾಗಭೂಷಣರ ವ್ಯಕ್ತಿತ್ವವನ್ನು ಕುರಿತು ಮಾತನಾಡಿದರು.