
ಕೊಪ್ಪಳ: ವರ್ಷಪೂರ್ತಿ ರಜೆ ಇಲ್ಲದೆ ಕೆಲಸ ಮಾಡಬೇಕಾಗಿರುವ ಪೊಲೀಸ್ ವೃತ್ತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿ, “ಇಂತಹ ಕೆಲಸಕ್ಕಿಂತ ರಸ್ತೆಯಲ್ಲಿ ನಿಂತು ಎಗ್ ರೈಸ್ ಮಾರುವುದು ಉತ್ತಮ” ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರ ಠಾಣೆಯ ಪೇದೆ ಬ್ರಹ್ಮಾನಂದ ಎಂಬವರು ಹಾಕಿದ ವಾಟ್ಸಾಪ್ ಸ್ಟೇಟಸ್ ರಾಜ್ಯದ ಗಮನ ಸೆಳೆದಿದೆ.
ರಾಜ್ಯದಲ್ಲಿ ಖಾಲಿ ಇರುವ 8,300 ಪೊಲೀಸ್ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಡಿಜಿ–ಐಜಿಪಿ ಡಾ. ಎಂ.ಎ. ಸಲೀಂ ಇತ್ತೀಚೆಗೆ ಹೇಳಿಕೆ ನೀಡಿದ ಬೆನ್ನಲ್ಲೇ, ಅದಕ್ಕೆ ಪ್ರತಿಕ್ರಿಯೆಯಂತೆ ಈ ಸ್ಟೇಟಸ್ ಪ್ರಕಟವಾಗಿದೆ. ಹೊಸದಾಗಿ ಪೊಲೀಸ್ ಇಲಾಖೆಗೆ ಸೇರುವವರು ನೂರಾರು ಬಾರಿ ಯೋಚಿಸಬೇಕು. ಹಬ್ಬ-ಹರಿದಿನವಿಲ್ಲದೆ 365 ದಿನವೂ ಡ್ಯೂಟಿ, ಮಾನಸಿಕ ಒತ್ತಡ ಮತ್ತು ರಜೆ ಕೊರತೆ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಇಲಾಖೆಯ ವಿರುದ್ಧ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರುವುದು ಶಿಸ್ತು ಉಲ್ಲಂಘನೆ ಎಂದು ಹಿರಿಯ ಅಧಿಕಾರಿಗಳು ಅಸಮಾಧಾನಗೊಂಡಿದ್ದು ವಿಷಯ ಗಂಭೀರವಾಗಿರುವುದರಿಂದ ಕೊಪ್ಪಳ ಜಿಲ್ಲಾ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ತನಿಖೆಗೆ ಆದೇಶಿಸಿದ್ದು, ವರದಿ ಬಂದ ಬಳಿಕ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಘಟನೆ ಪೊಲೀಸ್ ಸಿಬ್ಬಂದಿಯ ಕೆಲಸದ ಒತ್ತಡ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.



















