
ಬೆಂಗಳೂರು: ಗೃಹಸಚಿವ ಜಿ ಪರಮೇಶ್ವರ್ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ರಹಿಮಾನ್ ಹತ್ಯೆ ಪ್ರಕರಣ ಹಾಗೂ ಪೊಲೀಸ್ ಆಯುಕ್ತರ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿ ನಾವು ಕೈಕಟ್ಟಿ ಕೂರಲ್ಲ. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯಿಂದಿರಬೇಕು ಎಂದು ಹೇಳಿದ್ದಾರೆ.
ಕರಾವಳಿ ಘಟನೆಯನ್ನ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇದನ್ನು ಸರ್ಕಾರ ಸಹಿಸುವುದಿಲ್ಲ. ಆರ್ಥಿಕ, ಶೈಕ್ಷಣಿಕವಾಗಿ ದಕ್ಷಿಣ ಕನ್ನಡ ಜಿಲ್ಲೆ ಮಾದರಿಯಾಗಿದೆ. ಜಿಲ್ಲೆಯ ಜನರು ಶಾಂತಿಯಿಂದ ಇರಬೇಕು ಎಂದು ವಿನಂತಿಸಿದರು.
ನಾವು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಪ್ರಜ್ಞಾವಂತ ಸಮುದಾಯ ಎಂದು ಅಲ್ಲಿನ ಸಮುದಾಯದವರ ಜೊತೆ ಮಾತನಾಡಿ ಬಂದಿದ್ದೇನೆ. ಮತ್ತೆ ಅದೇ ರೀತಿ ಆದರೆ ಹೇಗೆ? ನಾವು ಯಾವುದೇ ಕಾರಣಕ್ಕೂ ಕೈಕಟ್ಟಿ ಕೂರುವುದಿಲ್ಲ. ಜನರು ನಮಗೆ ಸಹಕಾರ ಕೊಡಬೇಕು. ಕರಾವಳಿಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು ಯಾರು ಏನೇ ಹೇಳಿದರು ನಾವು ಸಹಿಸುವುದಿಲ್ಲ. ಯಾವ ಕಾರಣಕ್ಕೂ ಜಿಲ್ಲೆಯಲ್ಲಿ ಶಾಂತಿಯನ್ನು ಕದಡಲು ಬಿಡುವುದಿಲ್ಲ. ಈ ರೀತಿ ಹತ್ಯೆಗಳು ನಡೆಯುತ್ತಲೇ ಇದ್ದರೆ ಸರ್ಕಾರ ಸಹಿಸೋಕೆ ಆಗುತ್ತಾ? ಅನಿವಾರ್ಯವಾಗಿ ಕೆಲವು ಅಧಿಕಾರಿಗಳನ್ನ ಬದಲಿಸಿದ್ದು ಈಗ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.






















































