
ಬೆಂಗಳೂರು: ವಿಶ್ವವ್ಯಾಪ್ತಿಯಾಗಿ ಪ್ರದರ್ಶನ ಕಾಣುತ್ತಿರುವ “ಧುರಂಧರ್ 2” ಚಿತ್ರದ ಬಗ್ಗೆ ಖ್ಯಾತ ನಟಿ ಹಾಗೂ ಮಾಜಿ ಸಂಸದೆ ರಮ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಪೋಸ್ಟ್ನಲ್ಲಿ, ಚಿತ್ರವು ನಿರೀಕ್ಷೆಗೂ ತಕ್ಕಂತೆ ಇಲ್ಲದೆ ನಿರಾಸೆ ಮೂಡಿಸಿದೆ ಎಂದು ಹೇಳಿ, ಪ್ರೇಕ್ಷಕರು ತಮ್ಮ ಸಮಯ ಮತ್ತು ಹಣ ವ್ಯರ್ಥ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.
ಚಿತ್ರದ ಕಥೆ, ನಿರ್ವಹಣೆ ಹಾಗೂ ವಿಷಯವಸ್ತು ಬಗ್ಗೆ ಟೀಕೆ ಮಾಡಿದ ರಮ್ಯ, ದುರಂಧರ್ 1ರಲ್ಲಿದ್ದ ಉತ್ಸಾಹ ಮತ್ತು ಪ್ರೇಕ್ಷಕರ ತೊಡಗಿಸಿಕೊಳ್ಳುವಿಕೆ ಈ ಭಾಗದಲ್ಲಿ ಕಾಣಿಸಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಥಿಯೇಟರ್ನಲ್ಲಿ ಸಾಮೂಹಿಕ ನಿರಾಶೆಯ ವಾತಾವರಣ ಅನುಭವಿಸಬಹುದು ಎಂದೂ ತಿಳಿಸಿದ್ದಾರೆ.
ಚಿತ್ರದಲ್ಲಿ ಅತಿಯಾದ ಹಿಂಸಾಚಾರ ಮತ್ತು ಅಸಂಬದ್ಧ ದೃಶ್ಯಗಳೇ ಹೆಚ್ಚಾಗಿದ್ದು, ನಿರ್ದೇಶನ, ಸಂಭಾಷಣೆ, ಹಿನ್ನೆಲೆ ಸಂಗೀತ ಸೇರಿದಂತೆ ಅನೇಕ ಅಂಶಗಳು ಕಳಪೆಯಾಗಿವೆ ಎಂದು ಅವರು ಆರೋಪಿಸಿದ್ದಾರೆ. ನಟ ರಣವೀರ್ ತಮ್ಮ ಮಟ್ಟಕ್ಕಿಂತ ಕಡಿಮೆ ಪ್ರದರ್ಶನ ನೀಡಿದ್ದಾರೆ ಎಂಬ ಸೂಚನೆಯನ್ನೂ ನೀಡಿದ್ದಾರೆ.
ಇನ್ನೊಂದೆಡೆ, ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೂಡ ಚಿತ್ರವನ್ನು ಟೀಕಿಸಿ, ಇದು ಅತಿಯಾಗಿ ಗದ್ದಲ ಮತ್ತು ಮಸಾಲೆಯಿಂದ ತುಂಬಿದ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಕಠಿಣ ಅನುಭವ ನೀಡುತ್ತದೆ ಎಂದು ಹೇಳಿದ್ದಾರೆ.






















































