
ಚೆನ್ನೈ : ಚೆನ್ನೈನ ಪ್ರಮುಖ ಅಮ್ಮನ್ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್ ಮುನಿಸ್ವಾಮಿ ವಿರುದ್ಧ ತಮಿಳುನಾಡಿನ ಖಾಸಗಿ ಟಿವಿ ಚಾನೆಲ್ನ ನಿರೂಪಕಿ, ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಆರೋಪದ ಮೇಲೆ ದೂರು ದಾಖಲು ಮಾಡಿದ್ದಾರೆ.
ನಿದ್ರೆ ಬರುವ ಮಾತ್ರೆಯನ್ನ ತೀರ್ಥದಲ್ಲಿ ಬೆರೆಸಿದ್ದ ಅರ್ಚಕ ಅದನ್ನು ನನಗೆ ನೀಡಿದ್ದು ಆ ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ನಿರೂಪಕಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ 30 ವರ್ಷದ ದಿವ್ಯಾ (ಹೆಸರು ಬದಲಾಯಿಸಲಾಗಿದೆ) ಸಾಲಿಗ್ರಾಮಮ್ ಮೂಲದವರಾಗಿದ್ದಾರೆ. ತಾವು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಚೆನ್ನೈನ ಪರ್ಯಾಸ್ ಪ್ರದೇಶದಲ್ಲಿರುವ ಪ್ರಸಿದ್ಧ ಕಾಳಿಕಾಂಪಲ್ ದೇವಸ್ಥಾನಕ್ಕೆ ಸಾಮಾನ್ಯವಾಗಿ ಭೇಟಿ ನೀಡುತ್ತೇನೆ. ಈ ವೇಳೆ ಇದೇ ದೇವಸ್ಥಾನದ ಅರ್ಚಕ ಕಾರ್ತಿಕ್ ಮುನಿಸ್ವಾಮಿ ಜೊತೆ ಸ್ನೇಹ ಸಂಬಂಧ ಬೆಳೆದಿತ್ತು.
ಇಬ್ಬರ ನಡುವೆ ಆತ್ಮೀಯ ಸ್ನೇಹ ಬೆಳೆದ ಬಳಿಕ ಕಾರ್ತಿಕ್ ಮುನಿಸ್ವಾಮಿ, ದೇವಸ್ಥಾನದಲ್ಲಿ ಆಗುವ ಕಾರ್ಯಕ್ರಮಗಳ ಬಗ್ಗೆ ಹಾಗೂ ವಿಶೇಷ ಪೂಜೆಗಳ ಬಗ್ಗೆ ವಾಟ್ಸ್ಆಪ್ ಮೂಲಕ ಸಂದೇಶಗಳನ್ನು ಕಳಿಸುತ್ತಿದ್ದ. ಆತ್ಮೀಯ ಸ್ಮೇಹಿತರಾಗಿದ್ದ ಕಾರಣ, ದಿವ್ಯಾ ದೇವಸ್ಥಾನಕ್ಕೆ ಬಂದಾಗೆಲ್ಲಾ ಆಕೆಯನ್ನು ದೇವರ ಗರ್ಭಗುಡಿಗೆ ಕರೆದುಕೊಂಡು ಹೋಗಿ ಕಾರ್ತಿಕ್ ಮುನಿಸ್ವಾಮಿ ವಿಶೇಷ ದರ್ಶನ ನೀಡುತ್ತಿದ್ದ.
ದಿನಗಳು ಕಳೆದ ಹಾಗೆ, ಒಂದು ದಿನ ನಾನು ದೇವಸ್ಥಾನಕ್ಕೆ ಬಂದಾಗ ಆತ ತನ್ನ ಬೆಂಜ್ ಕಾರ್ಅನ್ನು ಹೊರತೆಗೆದಿದ್ದ. ನನ್ನ ಮನೆಯ ಕಡೆಯಿಂದಲೇ ಪಾಸ್ ಆಗುತ್ತೇನೆ. ಇದೇ ವೇಳೆ ಮನೆಗೆ ಬಿಟ್ಟು ಹೋಗುತ್ತೇನೆ ಎಂದು ತಿಳಿಸಿದ್ದ. ಕಾರಿನಲ್ಲಿ ಕುಳಿತುಕೊಂಡು ಪ್ರಯಾಣ ಮಾಡುವ ವೇಳೆ ಆತ ನಿದ್ರೆ ಬರುವ ತೀರ್ಥವನ್ನು ನನಗೆ ನೀಡಿದ್ದ. ಏಕೆಂದರೆ, ಇದನ್ನು ಕುಡಿದ ಬಳಿಕ, ನನಗೆ ಪ್ರಜ್ಞೆ ತಪ್ಪಿತ್ತು. ಆ ಬಳಿಕ ಆತ ನನ್ನ ಮೇಲೆ ಅತ್ಯಾಚಾರ ಮಾಡಿದ್ದ. ಅದಾದ ಬಳಿಕ ಕಾರ್ತಿಕ್ ಮುನಿಸ್ವಾಮಿ ನನ್ನನ್ನು ದೇವಸ್ಥಾನದಲ್ಲಿಯೇ ಮದುವೆಯಾಗುವುದಾಗಿಯೂ ಮಾತು ಕೊಟ್ಟಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದಾದ ಬಳಿಕ ಕಾರ್ತಿಕ್ ಮುನಿಸ್ವಾಮಿ ಸಾಕಷ್ಟು ಬಾರಿ ನನ್ನ ಮನೆಗೆ ಭೇಟಿ ನೀಡಿದ್ದ, ಆ ಬಳಿಕ ನಾನು ಗರ್ಭಿಣಿಯೂ ಆಗಿದ್ದೆ. ಇದು ಗೊತ್ತಾದ ಬಳಿಕ ನನ್ನನ್ನು ವಡಾಪಳನಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆತ ಗರ್ಭಪಾತವನ್ನೂ ಮಾಡಿಸಿದ್ದ. ಆ ಬಳಿಕ ಆತ ನನಗೆ ಸೆಕ್ಸ್ ವರ್ಕ್ ಮಾಡುವಂತೆಯೂ ಒತ್ತಾಯ ಮಾಡಿದ್ದ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ನಿರೂಪಕಿ ನೀಡಿದ ದೂರಿನ ಮೇಲೆ ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಕಾರ್ತಿಕ್ ಮುನಿಸ್ವಾಮಿಯನ್ನು ಬಂಧಿಸಿ ಟಿವಿ ನಿರೂಪಕಿಯ ಜೊತೆಗಿನ ಕೆಲವು ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಕೂಡ ಆತನ ಮೊಬೈಲ್ನಿಂದ ಪಡೆದುಕೊಂಡಿದ್ದಾರೆ. ಒಟ್ಟು ಆರು ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಕಾರ್ತಿಕ್ ಮುನಿಸ್ವಾಮಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ