
ಹೆಬ್ರಿ: ಅತಿಯಾದ ಮಳೆಯಿಂದಾಗಿ ತಾಲೂಕಿನ ಸಿದ್ದಾಪುರ-ಹೆಬ್ರಿ ರಾಜ್ಯ ಹೆದ್ದಾರಿ ಕುಚ್ಚೂರು ಕೆಂಚಾರ್ಕಳ ಪ್ರದೇಶದಲ್ಲಿ ರಸ್ತೆ ಹಾಗೂ ಮೋರಿ ಹಾನಿಗೊಂಡಿದ್ದು ಹೀಗಾಗಿ ರಕ್ಷಣಾ ತಡೆಗೋಡೆಯೊಂದಿಗೆ ಪುನರ್ ನಿರ್ಮಿಸುವ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೂನ್ 27ರಿಂದ ಜುಲೈ 30ರವರೆಗೆ ಈ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ. ಅವರು ಆದೇಶ ನೀಡಿದ್ದಾರೆ.
ಈ ಕಾಮಗಾರಿ ಪೂರ್ಣಗೊಳ್ಳುವ ತನಕ ಸಿದ್ದಾಪುರದಿಂದ ಹೆಬ್ರಿಗೆ ಬರುವವರಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿದ್ದು ಅದರಂತೆ ಸಿದ್ದಾಪುರದಿಂದ ಹೆಬ್ರಿ ಕಡೆಗೆ ಬರುವವರು ಗ್ರಾಮೀಣ ರಸ್ತೆಯಾದ ಮಾಂಡಿಮೂರುಕೈ- ಮೀನುಗದ್ದೆ- ಬೇಳಂಜೆ- ಕುಚ್ಚೂರು ಮಾರ್ಗ ಬಳಸಿ ಹೆಬ್ರಿಗೆ ತಲುಪಬಹುದು. ಹಾಗೆಯೇ ಹೆಬ್ರಿಯಿಂದ ಸಿದ್ದಾಪುರದ ಕಡೆಗೆ ಹೋಗುವವರೂ ಕೂಡ ಇದೇ ಮಾರ್ಗವನ್ನು ಬಳಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.






















































