
ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಿತ್ರರಂಗದವರ ನಟ್ಟು ಬೋಲ್ಟ್ ಟೈಟ್ ಮಾಡುವುದಾಗಿ ಹೇಳಿಕೆ ನೀಡಿದ್ದು ಇದು ಇಡೀ ಚಿತ್ರರಂಗದಲ್ಲಿ ಅತೃಪ್ತಿ ಉಂಟು ಮಾಡಿ ಭಾರಿ ಚರ್ಚೆಗೆ ಕಾರಣವಾಗಿದೆ.ಈ ಕುರಿತು ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ಮಾತನಾಡಿದ್ದು ಆ ಸ್ಥಾನದಲ್ಲಿ ಇರುವಾಗ ಒಂದೊಂದು ಮಾತು ಅಳೆದು ತೂಗಿ ಮಾತಾಡಬೇಕು. ಮುಂದೆ ಅವರು ಮುಖ್ಯಮಂತ್ರಿ ಆಗುವವರು ಈ ರೀತಿ ಮಾತನಾಡಬಾರದಿತ್ತು.
ಆ ನಟ್ ಬೋಲ್ಟ್ ಪದ ಬಳಸಿದ್ದು ನನಗೂ ಸರಿ ಕಾಣಲಿಲ್ಲ ಎಂದಿದ್ದಾರೆ.ನನ್ನ ಸಿನಿಮಾಗೆ ಪೊಲಿಟಿಕಲ್ ಇನ್ಫ್ಲುಯೆನ್ಸ್ ಬೇಡ. ಚಿತ್ರ ಚೆನ್ನಾಗಿದ್ದರೆ ಎಲ್ಲರೂ ನೋಡುತ್ತಾರೆ. ಇಲ್ಲದಿದ್ದರೆ ಸೋಲನ್ನು ನಾನು ಒಪ್ಪಿಕೊಳ್ಳುತ್ತೇನೆ. ಶೇಕಡ 85ರಷ್ಟು ನನ್ನ ಸಿನಿಮಾಗಳು ಯಶಸ್ವಿಯಾಗಿದೆ.ಸ್ಟಾರ್ ನಟರು ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿಬೇಕಿತ್ತು. ಅವರನ್ನೇ ಟಾರ್ಗೆಟ್ ಮಾಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಡೈರೆಕ್ಟರ್ಗಳ ಮೌಲ್ಯ ಕುಸಿದಿದ್ದು ಯಾರು ಹೀರೋ ಹಿಂದೆ ಓಡಾಡುತ್ತಾನೋ ಅವನೇ ಡೈರೆಕ್ಟರ್. ಇವತ್ತಿನ ಚಿತ್ರರಂಗದ ಅದಃಪತನಕ್ಕೆ ನಿರ್ದೇಶಕರನ್ನು ಕಡೆಗಣಿಸುತ್ತಿರುವುದೂ ಒಂದು ಕಾರಣವಾಗಿದೆ.ಸರಕಾರದ ಯಾತ್ರೆಗಳಲ್ಲಿ ಪಾಲ್ಗೊಳ್ಳುವುದು ಅವರವರ ವೈಯಕ್ತಿಕ ವಿಚಾರ.
ನಮ್ಮ ನೆಲ ಜಲ ಭಾಷೆ ಎಂದು ಬಂದಾಗ ನಾವು ತಪ್ಪದೆ ಭಾಗವಹಿಸಿದ್ದೇವೆ.ಚಿತ್ರನಗರಿ ಬಜೆಟ್ ಘೋಷಣೆಯಾಗಿದೆ, ನಿರ್ಮಾಣ ಆಗಿಲ್ಲ. ಇದರಿಂದ ಸರ್ಕಾರದ ಕೆಲಸ ಎಷ್ಟು ಎಂದು ತಿಳಿಯುತ್ತದೆ. ಬರಿ ನಟ್ಟು ಬೋಲ್ಟು ಮಾತನಾಡುವುದಲ್ಲ. ಗಣಿಗ ಶಾಸಕರಾಗಿ ಎಷ್ಟು ದಿನ ಇರುತ್ತಾರೆ. ಟ್ಯಾಕ್ಸ್ ಫ್ರೀ ಅಂತಾರೆ, ಆದರೆ ಜಿ ಎಸ್ ಟಿ ಬಂದಾಗಿನಿಂದ ಟ್ಯಾಕ್ಸ್ ಫ್ರೀ ಇಲ್ಲ. ಅದರ ಜ್ಞಾನವು ಅವರಿಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸರ್ಕಾರದಿಂದ ತುಂಬಾ ನಿರೀಕ್ಷೆಯಿದೆ. ಟಿಕೆಟ್ ದರ 250 ಮೇಲೆ ಇಡಬಾರದು. ಯಾವ ರಾಜ್ಯದಲ್ಲೂ ಇರದ 2000-3000 ರೇಟ್ ನಮ್ಮಲ್ಲಿದೆ. ಇಲ್ಲಿಂದ ಪರಭಾಷೆಗೆ 3000 ಕೋಟಿ ಹೋಗುತ್ತಿದೆ. ಅವರು ನಮಗೇನು ಮಾಡೋದಿಲ್ಲ, ಹೀಗಾಗಿ ಪರಭಾಷಿಕರಿಗೆ ಆದ್ಯತೆ ನೀಡಬಾರದು.ಪರಭಾಷೆ ಚಿತ್ರಗಳಿಗೆ ಶೇಕಡ 10 ರಷ್ಟು ತೆರಿಗೆ ಹಾಕಿ ಅದರಿಂದ ಬಂದ ಹಣದಲ್ಲಿ ಆಕ್ಲೈವ್ಸ್, ಮಿನಿ ಥಿಯೇಟರ್ ಮತ್ತು ಇತರ ಚಿತ್ರರಂಗದ ಅಭಿವೃದ್ಧಿ ಮಾಡಬೇಕು. ಇಷ್ಟು ದಿನ ಸಿನಿಮಾ ನಿರ್ಮಾಣಕ್ಕೆ ಸಬ್ಸಿಡಿ ನೀಡಲಾಗಿತ್ತು. ಆದರೆ ಇನ್ನು ಮುಂದೆ ಯಾವ ಕೆಲಸಕ್ಕೆ ನೀಡಬೇಕು ಎಂಬ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.






















































