
ಚಿಕ್ಕಮಗಳೂರು: ಮಾರ್ಚ್ 3ರಂದು ಚಿಕ್ಕಮಗಳೂರು ಹೊರವಲಯದ ತೇಗೂರು ಗ್ರಾಮದ ಬಳಿ ಇರುವ ಡಾ. ಅಬ್ದುಲ್ ಕಲಾಂ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಬಾಳೆಹೊನ್ನೂರು ಮೂಲದ ಯಶ್ವಿತ್ ಸಾಲಿಯಾನ್ ಮತ್ತು ಬೆಂಗಳೂರು ಮೂಲದ ತರುಣ್ ವಸತಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಇದ್ದಕ್ಕಿದ್ದಂತೆ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಮಂಗಳೂರಿನ ಹೋಟೆಲ್ವೊಂದರಲ್ಲಿ ಕೆಲಸಕ್ಕೆ ಸೇರಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಉತ್ತಮ ಸ್ನೇಹಿತರಾಗಿದ್ದ ಯಶ್ವಿತ್, ತರುಣ್ ಓದಿನಲ್ಲಿ ಆಸಕ್ತಿ ಇಲ್ಲದೆ ಇದ್ದರೂ ವಸತಿ ಶಾಲೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದರು. 9 ನೇ ತರಗತಿ ಪರೀಕ್ಷೆ ಮುಗಿಸಿದ ಬಳಿಕ 10 ನೇ ತರಗತಿಯ ಸಿದ್ದತೆಗಾಗಿ ವಿಶೇಷ ತರಗತಿಗಳು ನಡೆಯುತ್ತಿದ್ದು, ಇದರಿಂದ ಪರೀಕ್ಷೆ ಮುಗಿದರೂ ರಜೆ ಮಾತ್ರ ಸಿಕ್ಕಿರಲಿಲ್ಲ. ವಿಶೇಷ ತರಗತಿ ಮುಗಿಸಿ ರೂಮ್ ಸೇರಿದ ಇಬ್ಬರು ಮೊದಲೇ ಮಾಡಿದ ಪ್ಲಾನ್ನಂತೆ ವಸತಿ ಶಾಲೆಯ ಕಾಂಪೌಂಡ್ ಹಾರಿದ್ದಾರೆ. ಬಳಿಕ 5 ಕಿಮೀ ನಡೆದು ಇಬ್ಬರೂ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ. ಅಲ್ಲಿಂದ ಬಸ್ ಹತ್ತಿ ಮಂಗಳೂರಿಗೆ ತೆರಳಿದ್ದಾರೆ.
ಇತ್ತ ಮಕ್ಕಳು ನಾಪತ್ತೆಯಾಗುತ್ತಿದ್ದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು, ವಿದ್ಯಾರ್ಥಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿ ಸಿಸಿಟಿವಿಗಳನ್ನು ಪರಿಶೀಲಿಸಿದಾಗ, ಚಿಕ್ಕಮಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬಸ್ಗಾಗಿ ಕಾಯುತ್ತಿರುವ ದೃಶ್ಯ ಕಂಡಿದೆ. ಬಳಿಕ, ಇಬ್ಬರೂ ಬೆಂಗಳೂರು ಬಸ್ ಹತ್ತಿರುವ ಮಾಹಿತಿ ಆಧಾರದ ಮೇಲೆ ಪೊಲೀಸರು ಬೆಂಗಳೂರಿನ ಹುಡುಕಾಟ ನಡೆಸಿದ್ದಾರೆ. ಅದೇ ರೀತಿ ಅನುಮಾನಗೊಂಡು ಮಂಗಳೂರಿನಲ್ಲೂ ಹುಡುಕಾಟ ನಡೆಸಿದಾಗ ವಿದ್ಯಾರ್ಥಿಗಳು ಪತ್ತೆಯಾಗಿದ್ದು ಪೊಲೀಸರು ಇಬ್ಬರೂ ವಿದ್ಯಾರ್ಥಿಗಳನ್ನು ಠಾಣೆಗೆ ಕರೆ ತಂದಿದ್ದಾರೆ.