
ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ನಡುವೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಹತ್ತಾರು ಬಾರಿ ರಾಜ್ಯದ ಸಂಸ್ಕೃತಿ–ಪರಂಪರೆಯನ್ನು ಪ್ರತಿಬಿಂಬಿಸಿದ್ದ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಈ ಬಾರಿ ಅವಕಾಶ ದೊರೆತಿಲ್ಲ.
ಆತ್ಮನಿರ್ಭರ ಭಾರತದ ಸಂಕೇತವಾಗಿ ರಾಜ್ಯದ ಸಿರಿಧಾನ್ಯ ಕೃಷಿಯಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನವರೆಗೆ ಇರುವ ಸಮಗ್ರ ಕೊಡುಗೆಯನ್ನು ತೋರಿಸುವ ಉದ್ದೇಶದಿಂದ ‘ಮಿಲೆಟ್ಸ್ ಟು ಮೈಕ್ರೋ ಚಿಪ್’ ವಿಷಯಾಧಾರಿತ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವ ಪರೇಡ್ಗೆ ಯೋಜಿಸಲಾಗಿತ್ತು. ಆದರೆ, ಈ ಪ್ರಸ್ತಾವನೆ ಅಂಗೀಕಾರ ಪಡೆಯದ ಕಾರಣ, ಕರ್ತವ್ಯಪಥದಲ್ಲಿ ನಡೆಯುವ ವರ್ಣರಂಜಿತ ಪರೇಡ್ನಲ್ಲಿ ಈ ಬಾರಿ ಕರ್ನಾಟಕದ ಸ್ತಬ್ಧಚಿತ್ರ ಭಾಗವಹಿಸುವುದಿಲ್ಲ. ಬದಲಾಗಿ, ಪ್ರಗತಿ ಮೈದಾನದಲ್ಲಿ ಸಾರ್ವಜನಿಕ ವೀಕ್ಷಣೆಗೆ ಸ್ತಬ್ಧಚಿತ್ರವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.



















