
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಶಗುನ್ ಎಸ್. ವರ್ಮ ಹೆಗ್ಡೆ ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್ನವರು ನಡೆಸುವ 15ರ ವಯೋಮಿತಿಯ ವಿಶ್ವಾಶಾಲಾ ಬಾಲಕಿಯರ ವಿಭಾಗದ ವಿಶ್ವವಾಲಿಬಾಲ್ ಪಂದ್ಯಾಟದ ರಾಷ್ಟ್ರೀಯ ಅರ್ಹತಾ ತಂಡಕ್ಕೆ ಆಯ್ಕೆಯಾಗಿದ್ದಾಳೆ.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರೀಯ ತಂಡದ ಆಯ್ಕೆ ಶಿಬಿರದಲ್ಲಿ ಸುಮಾರು 200 ಸ್ಪರ್ಧಾಳುಗಳು ಸ್ಪರ್ಧಿಸಿದ್ದು ಇದರಲ್ಲಿ 23 ಸ್ಪರ್ಧಾಳುಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು ಅದರಲ್ಲಿ ಶಗುನ್ ಎಸ್ ವರ್ಮ ಹೆಗ್ಡೆ ಎರಡನೆಯವಳಾಗಿ ಆಯ್ಕೆಯಾದದ್ದಲ್ಲದೆ ಕರ್ನಾಟಕದಿಂದ ಏಕೈಕ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾಳೆ. ಇದಕ್ಕೂ ಮೊದಲು ರಾಜ್ಯದಿಂದ ಅರ್ಹತಾ ಶಿಬಿರಕ್ಕೆ ಉಡುಪಿ ಜಿಲ್ಲೆಯಿಂದ ಏಕೈಕ ಆಟಗಾರಳಾಗಿ ಶಗುನ್ ವರ್ಮ ಆಯ್ಕೆಯಾಗಿದ್ದಳು. ಈಗ ಕರ್ನಾಟಕದ ಎಂಟು ಸ್ಪರ್ಧಿಗಳಲ್ಲಿ ಶಗುನ್ ಎಸ್ ವರ್ಮ ರಾಷ್ಟೀಯ ತಂಡದಲ್ಲಿ ಸ್ಥಾನ ಪಡೆದ ರಾಜ್ಯದ ಏಕೈಕ ಆಟಗಾರ್ತಿಯಾಗಿದ್ದಾಳೆ. ಅಂತರಾಷ್ಟ್ರೀಯ ಪಂದ್ಯವು ಇದೇ ವರ್ಷ ಡಿಸೆಂಬರ್ ತಿಂಗಳ 4 ರಿಂದ 13 ನೇ ತಾರೀಖಿನವರೆಗೆ ಚೀನಾದ ಶಾಂಗ್ಲೋದಲ್ಲಿ ನಡೆಯಲಿದೆ. ಶಗುನ್ ಎಸ್ ವರ್ಮ ಹೆಗ್ಡೆ ಕಲ್ಲೊಟ್ಟೆ ನಿವಾಸಿ ಸಂದೇಶ್ ವರ್ಮ ಹಾಗೂ ಶ್ರುತಿರಾಜ್ ದಂಪತಿಗಳ ಸುಪುತ್ರಿಯಾಗಿದ್ದಾಳೆ