
ಸದಾಶಿವನಗರ: ಗೃಹ ಸಚಿವ ಜಿ ಪರಮೇಶ್ವರ್ ಮಾಧ್ಯಮಗಳೊಂದಿಗೆ ಮಾತನಾಡಿ ಕರ್ನಾಟಕ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಈ ರಾಜೀನಾಮೆ ನೀಡಿರುವ ಕಾರಣ ಅಷ್ಟು ವಿವರವಾಗಿ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದ್ದು ರಾಜಣ್ಣ ಅವರ ರಾಜೀನಾಮೆಯ ಕಾರಣದ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರವನ್ನು ಗೌರವಿಸಲಾಗುತ್ತದೆ. ರಾಜಣ್ಣ ಅವರ ರಾಜೀನಾಮೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಅಧ್ಯಕ್ಷರಿಗೆ ಮಾಹಿತಿ ಇರಬಹುದು ಎಂದು ಹೇಳಿದರು.
ಇನ್ನು ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಇಳಿಸುವಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಯತ್ನ ಇದೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಅದರ ಬಗ್ಗೆ ಗೊತ್ತಿಲ್ಲ. ಆ ರೀತಿ ಇರೋದಕ್ಕೆ ಸಾಧ್ಯವಿಲ್ಲ ಅನ್ನಿಸುತ್ತೆ. ಏಕೆಂದರೆ ನಮ್ಮ ಹೈಕಮಾಂಡ್ ಅವರು ನಾವು ಯಾರ ಮೇಲೆ ಚಾಡಿ ಹೇಳಿದರು ಹಾಗೆಯೇ ಕೇಳೋದಿಲ್ಲ. ಅವರದ್ದೇ ಆದಂತ ಅಸೆಸ್ಮೆಂಟ್ ಹಾಗೂ ಮಾಹಿತಿಯನ್ನು ಪಡೆದಿರುತ್ತಾರೆ. ಹೈಕಮಾಂಡ್ ಯಾರ ಚಾಡಿಯನ್ನೂ ಕೇಳದೆ, ತಮ್ಮದೇ ಆದ ಮಾಹಿತಿ ಮತ್ತು ಮೌಲ್ಯಮಾಪನದ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.