
ಕಾರ್ಕಳ: ಭುವನೇಂದ್ರ ಕಾಲೇಜಿನಲ್ಲಿ ವಿಜ್ಞಾನ ಸಂಘವು ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ” ವಿಜ್ಞಾನದಲ್ಲಿ ಉದ್ಯೋಗವಕಾಶ “ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಡುಪಿಯ ಪೂರ್ಣಪ್ರಜ್ಞ
ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ..ರಾಘವೇಂದ್ರ ಭಟ್ ಇವರು ಮಾತನಾಡುತ್ತಾ, ಕಲಿಕೆಯ ಬೇರೆ ಬೇರೆ ಹಂತಗಳನ್ನು
ಪಡೆಯುವ ಎಲ್ಲ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಪರೀಕ್ಷೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಾವೇ
ಭಾಗಿಯಾಗಿ, ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಕಲಿಕೆಯ ವಾತಾವರಣವನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನ ಸದಾ
ನಮ್ಮದಾಗಬೇಕು. ಜಾಮ್ ಪರೀಕ್ಷೆಗಳಂಥಹ ಕಠಿಣ ಹಂತದ ಪರೀಕ್ಷೆಗಳನ್ನು ವಿಜ್ಞಾನದ ವಿದ್ಯಾರ್ಥಿಗಳು ಎದುರಿಸುವಷ್ಟು
ಶಕ್ತರಾಗಿರಬೇಕು. ಇಂತಹ ಪರೀಕ್ಷೆಗಳೆಲ್ಲ ಬದುಕಿಗೆ ಉತ್ತೇಜನ ನೀಡುತ್ತದೆ. ಕನಸು ಕಾಣುವಾಗ ನಿರ್ದಿಷ್ಟ ಗುರಿ ಇರಬೇಕು. ಎಲ್ಲ
ಚಟುವಟಿಕೆಗಳ ಜೊತೆಗೆ ಪರೀಕ್ಷೆಗಳತ್ತ ಸಾಗಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ಇಷ್ಟಪಟ್ಟು ಮತ್ತು ಕಷ್ಟ ಪಟ್ಟು ಮಾಡುವ
ಕೋರ್ಸುಗಳು ಹೆಚ್ಚು ಅನುಕೂಲವನ್ನು ತಂದು ಕೊಡಬಲ್ಲದು ಎನ್ನುತ್ತಾ, ವಿದ್ಯಾರ್ಥಿಗಳಿಗೆ ಲಭ್ಯವಾಗುವ ಬೇರೆ ಬೇರೆ ಸ್ಪರ್ಧಾತ್ಮಕ
ಪರೀಕ್ಷೆಗಳು ಹಾಗೂ ಆನ್ಲೈನ್ ಕೋರ್ಸುಗಳ ಕುರಿತಾಗಿ ವಿವರವಾದ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ನಿಮ್ಮ ವ್ಯಕ್ತಿತ್ವವನ್ನು
ರೂಪಿಸುವ ಕೋರ್ಸುಗಳನ್ನು ಶೃದ್ಧೆಯಿಂದ ಕಲಿಯಬೇಕು. ಆಯ್ಕೆ ಮಾಡುವ ಮುನ್ನ ಮಾತ್ರ ನಮಗೆ ಅವಕಾಶ. ಕೋರ್ಸಿಗೆ ಸೇರಿದ
ಮೇಲೆ ಅದರಿಂದ ವಿಚಲಿತರಾಗಕೂಡದು. ನಾವು ಇರುವ ಕೋರ್ಸಿನಲ್ಲಿ ಸಿಗುವ ಎಲ್ಲ ಹೊಸ ಹೊಸ ಅವಕಾಶಗಳನ್ನು
ಬಳಸಿಕೊಳ್ಳಬೇಕು. ಯಾವ ವಿಷಯದ ಕಲಿಕೆಯಲ್ಲಿ ನನಗೆ ಕೊರತೆಯಿದೆ ಎನ್ನುವುದನ್ನು ಅರಿತು ಅದರ ಕುರಿತ ಜ್ಞಾನವನ್ನು ಹೆಚ್ಚಿಸುವ
ಕೆಲಸ ಮಾಡಬೇಕಿದೆ. ವಿಜ್ಞಾನದಲ್ಲಿ ವಿಫುಲ ಅವಕಾಶಗಳಿವೆ. ನಿಮ್ಮ ಸಾಧನೆಯಲ್ಲಿ ಹೆತ್ತವರ ಜೊತೆಗೆ ನಾವೂ ಸಂತೋಷಪಡುತ್ತೇವೆ.
ಪದವಿಯನ್ನು ಕೇವಲ ಪದವಿ ಅಂತ ಭಾವಿಸದೆ ಯೋಗ್ಯ ಆಯ್ಕೆ ಎಂದೇ ತಿಳಿದು ಗುರಿ ತಲುಪುವಲ್ಲಿ ಪ್ರಯತ್ನ ಪಡಬೇಕು ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ವಿಜ್ಞಾನ ಸಂಘದ ಸಂಯೋಜಕರಾದ ಡಾ.ವಿಜಯಾ ಕುಮಾರಿ , ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ
ಡಾ.ಈಶ್ವರ ಭಟ್, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಕೀರ್ತಿ ಹಾಗೂ ಖ್ಯಾತಿ ಉಪಸ್ಥಿತರಿದ್ದರು. ಐಕ್ಯೂಎಸಿ ಸಂಯೋಜಕರಾದ ಪ್ರೊ.
ಲಕ್ಷ್ಮೀನಾರಾಯಣ ಭಟ್ ಸ್ವಾಗತಿಸಿದರು. ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ವೆರಿನಾ ಕಾರ್ಯಕ್ರಮ ನಿರೂಪಿಸಿದರು.






















































