
ಕಾರ್ಕಳ: ಮೇ 27 ರಂದು ಕಾರ್ಕಳದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕೆಎಂಎಎಸ್ ನ ಪ್ರಾಂಶುಪಾಲರಾಗಿ ಕೆ ಬಾಲಕೃಷ್ಣರಾವ್ ರವರು ಅಧಿಕಾರ ಸ್ವೀಕರಿಸಿದ್ದಾರೆ.
ಇವರು ಆಂಗ್ಲ ಭಾಷೆ ಹಾಗೂ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, 40 ವರ್ಷಗಳ ದೀರ್ಘಕಾಲ ವಿಜ್ಞಾನ ಶಿಕ್ಷಕರಾಗಿ, ಆಂಗ್ಲ ಭಾಷಾ ಮತ್ತು ಗಣಿತ ಉಪನ್ಯಾಸಕರಾಗಿ ಶೈಕ್ಷಣಿಕ ವಿಭಾಗದಲ್ಲಿ ಸೇವೃ ಸಲ್ಲಿಸಿದ್ದು ಬೇರೆ ಬೇರೆ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುತ್ತಾರೆ. ಎನ್ ಸಿ ಸಿ ನೇವಲ್ ವಿಂಗ್ ಕಮಿಷನ್ಡ್ ಆಫೀಸರ್ ಆಗಿ 15 ವರ್ಷಗಳ ಸೇವೆ ಸಲ್ಲಿಸಿದ ಇವರು ಕೊಚ್ಚಿನ್ ನೇವಲ್ ಬೇಸ್, ವಿಶಾಖಪಟ್ಟಣ ನೇವಲ್ ಬೇಸ್ ಗಳಲ್ಲಿ ಎನ್ ಸಿ ಸಿ ತರಬೇತಿಗಳನ್ನು ಪಡೆದಿರುತ್ತಾರೆ.
ಉತ್ತರ ಭಾರತದ ಮಸ್ಸೂರಿ, ಗೋವಾ ಇತ್ಯಾದಿ ಸ್ಥಳಗಳಲ್ಲಿ ರಾಷ್ಟ್ರೀಯ ಟ್ರಕಿಂಗ್ ಎಕ್ಸ್ ಪೆಡಿಶನ್ನಲ್ಲಿ ಭಾಗವಹಿಸಿದ್ದು ಬೆಂಗಳೂರಿನ ಸೋಮನಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತ ಶಿಬಿರದಲ್ಲಿ ಭಾಗವಹಿಸಿರುತ್ತಾರೆ.
ಶ್ರೀಯುತರು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಲೇಖನಗಳನ್ನು ಬರೆದಿದ್ದು ಆಕಾಶವಾಣಿ ಮಂಗಳೂರಿನಲ್ಲಿ ಕಥೆ, ಚಿಂತನ, ಪ್ರಬಂಧಗಳನ್ನು ಮಂಡಿಸಿ ಸಾಹಿತ್ಯದಲ್ಲಿಯೂ ಅಭಿರುಚಿಯನ್ನು ಹೊಂದಿರುತ್ತಾರೆ.
ಕಾರ್ಕಳ ಸಾಹಿತ್ಯ ಸಂಘ ಮತ್ತು ಅಖಿಲ ಭಾರತ ಸಾಹಿತ್ಯ ಪರಿಷದ್ ಕಾರ್ಕಳ ಇವುಗಳ ಸಕ್ರಿಯ ಸದಸ್ಯರಾದ ಇವರು ನಾಟಕ ಯಕ್ಷಗಾನಗಳಲ್ಲಿ ಪಾತ್ರ ನಿರ್ವಹಿಸಿರುತ್ತಾರೆ. ಹಲವಾರು ಕನ್ನಡ ಸಾಹಿತ್ಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು ಕವನವಾಚನ ಮಾಡಿರುತ್ತಾರೆ. ಕಾರ್ಕಳ ಜೇಸೀಸ್ ಸಂಸ್ಥೆಯ ಸಕ್ರಿಯ ಸದಸ್ಯರಾಗಿಯು ಸೇವೆ ಸಲ್ಲಿಸಿದ ಶ್ರೀಯುತರು ಹಲವಾರು ಸಂಘ-ಸಂಸ್ಥೆಗಳಿಂದ ಗೌರವ ಪುರಸ್ಕಾರಗಳನ್ನು ಪಡೆದಿರುತ್ತಾರೆ.
ಇವರು ಕೆಎಂಇಎಸ್ ನ ಪ್ರಾಂಶುಪಾಲರಾಗಿ ನೇಮಕಗೊಂಡಿರುವುದಕ್ಕೆ ಸಂಸ್ಥೆಯ ಅಧ್ಯಕ್ಷರಾದ ಕೆ ಎಸ್ ಇಮ್ತಿಯಾಜ್ ಅಹಮದ್ ರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.