
ಬೆಂಗಳೂರು: ಕನ್ನಡ ಆಡಳಿತ ಭಾಷೆಯಷ್ಟೇ ಅಲ್ಲ, ನ್ಯಾಯದಾನದ ಭಾಷೆಯೂ ಕನ್ನಡ ಆಗಬೇಕು ಎನ್ನುವ ಕೂಗಿಗೆ ಸ್ಪಂದಿಸಿರುವ ಕರ್ನಾಟಕ ಹೈಕೋರ್ಟ್ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ನೀಡಿ ಹೊಸ ಇತಿಹಾಸ ಬರೆದಿದೆ.
ಪಟ್ಟನಾಯಕನಹಳ್ಳಿ ಮಠದ ಸ್ವಾಮೀಜಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾ.ಕೃಷ್ಣ ಎಸ್ ದೀಕ್ಷಿತ್, ಸಿಎಂ ಜೋಶಿ ಅವರಿದ್ದ ವಿಭಾಗೀಯ ಪೀಠ ಕನ್ನಡದಲ್ಲಿ ತೀರ್ಪು ನೀಡಿದ್ದು ಬುಧವಾರವಷ್ಟೇ ಆಚರಿಸಲ್ಪಟ್ಟಿದ್ದ ಭಾರತ ಭಾಷಾ ದಿನವನ್ನು ಸ್ಮರಣೀಯವಾಗಿಸಿದೆ.
ತೀರ್ಪಿನ ಆಪರೇಟಿವ್ ಭಾಗವನ್ನು ನ್ಯಾ.ಕೃಷ್ಣ ದೀಕ್ಷಿತ್ ಕನ್ನಡದಲ್ಲಿಯೇ ಓದಿದ್ದು ಕನ್ನಡ ಅವಸಾನ ಆಗಬಾರದು ಎಂದರೇ ಕನ್ನಡಕ್ಕೆ ಮಾನ್ಯತೆ ಸಿಗಬೇಕು, ಸಾಂವಿಧಾನಿಕ ಸಂಸ್ಥೆಗಳಲ್ಲಿಯೂ ಕನ್ನಡದಲ್ಲೇ ವ್ಯವಹಾರ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





