
ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ಶಾಲಾ ಪ್ರವೇಶ ವಯೋಮಿತಿ ಕುರಿತು ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಒಂದನೇ ತರಗತಿಗೆ ಸೇರ್ಪಡೆಯ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದ್ದು, ಪೋಷಕರಿಗೆ ಇದರಿಂದ ಅನುಕೂಲವಾಗಲಿದೆ.
ಈವರೆಗೆ 6 ವರ್ಷ ವಯಸ್ಸು ಕಡ್ಡಾಯವಾಗಿದ್ದ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು ಇದೀಗ 6 ವರ್ಷ ಪೂರೈಸಿದ ಬಳಿಕ 60 ದಿನಗಳವರೆಗೆ (ಸುಮಾರು 6 ವರ್ಷ 2 ತಿಂಗಳು) ವಿನಾಯಿತಿ ನೀಡಲಾಗುತ್ತದೆ. ಜೊತೆಗೆ, 5 ವರ್ಷ 10 ತಿಂಗಳ ಮಕ್ಕಳಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಬದಲಾವಣೆಯನ್ನು ಜಾರಿಗೆ ತರಲು ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಶಾಲಾ ದಾಖಲಾತಿ ತಂತ್ರಾಂಶದಲ್ಲಿಯೂ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. LKG ಮತ್ತು UKG ದಾಖಲಾತಿ ಸಮಸ್ಯೆಗಳನ್ನೂ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ನಿರ್ಧಾರದಿಂದ ವಯೋಮಿತಿ ಸಮಸ್ಯೆಯಿಂದ ಪ್ರವೇಶ ತಪ್ಪುತ್ತಿದ್ದ ಮಕ್ಕಳಿಗೆ ಅವಕಾಶ ದೊರೆಯಲಿದ್ದು, ಪೋಷಕರಿಗೆ ನಿರಾಳತೆ ಸಿಕ್ಕಿದೆ.






















































