
ಬೆಂಗಳೂರು: ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಎಷ್ಟೇ ಚಿರಾಡಲಿ, ಬಟ್ಟೆ ಹರಿದುಕೊಳ್ಳಲಿ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ನಾನು ಪತ್ರ ಬರೆದಿದ್ದಲ್ಲದೆ ಸಿಎಂ ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಮಾಹಿತಿ ನೀಡಿ ಮನವಿ ಮಾಡಿದ್ದೆ. ಇದರಂತೆ ಈಗ ಗೃಹ ಸಚಿವರು ಸಿಐಡಿ ತನಿಖೆಗೆ ಆದೇಶ ಮಾಡಿದ್ದಾರೆ. ಬಿಜೆಪಿ ಅವರಿಗೆ ಸಿಬಿಐ ಮೇಲೆ ಪ್ರೀತಿ ಜಾಸ್ತಿ. ಹೀಗಾಗಿ ಸಿಬಿಐ ತನಿಖೆಗೆ ಕೇಳುತ್ತಾರೆ. ವರ್ಷಗಳ ಹಿಂದೆ ಬಿಜೆಪಿ ಕೈಯಲ್ಲಿ ಎಲ್ಲಾ ಸಂಸ್ಥೆಗಳು ಇತ್ತು ಏನ್ ಮಾಡಿದರು? ಬಿಜೆಪಿ ಯಾರದ್ದೋ ತಲೆ ದಂಡ ಆಗುತ್ತೆ ಅಂತ ಕಾಯ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಯಾರ ತಲೆ ತಂಡ ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜು ಕಪನೂರು ಬಿಜೆಪಿ ನಾಯಕರ ಜೊತೆ ಇದ್ದ ಫೋಟೋ ಬಿಡುಗಡೆ ಮಾಡಿದರು. ರಾಜು ಕಪನೂರು ಬಿಜೆಪಿಯಲ್ಲಿ ಮೊದಲು ಇದ್ದರು. ಫೋಟೋ ಹಲವಾರು ಇವೆ. ಆದರೆ ಸತ್ಯ ಏನು? ರಾಜು ಕಪನೂರು ಪರಿಚಯ ಇಲ್ಲ ಅಂತ ನಾವು ಹೇಳಿಲ್ಲ. ನಟಿಯರ ಡ್ರಗ್ ಕೇಸ್ ನಲ್ಲಿ ವಿಪಕ್ಷ ನಾಯಕ ಅಶೋಕ್ ಜೊತೆ ನಟಿಯರ ಫೋಟೋ ಇತ್ತು. ಹಾಗಾದ್ರೆ ಅದಕ್ಕೆ ಅಶೋಕ್ ಸಂಬಂಧ ಹೇಳೋಕೆ ಆಗುತ್ತಾ? ಫೋಕ್ಸೋ ಕೇಸ್ನಲ್ಲಿ ಯಡಿಯೂರಪ್ಪ ಯಾಕೆ ರಾಜೀನಾಮೆ ಕೊಟ್ಟಿಲ್ಲ? ಅಕ್ರಮ ಹಣ ದುರ್ಬಳಕೆ ಪ್ರಕರಣದಲ್ಲಿ ವಿಜಯೇಂದ್ರ ಯಾಕೆ ರಾಜೀನಾಮೆ ಕೊಟ್ಟಿಲ್ಲ. ಮೊದಲು ನಿಮ್ಮ ನಾಯಕರಿಗೆ ನೋಟಿಸ್ ಕೊಡಿ ಎಂದು ತಿರುಗೇಟು ನೀಡಿದರು.




