
ನವದೆಹಲಿ: ದೂರಸಂಪರ್ಕ ಇಲಾಖೆಯು ಹೊಸ ನಿರ್ದೇಶನವೊಂದನ್ನು ನೀಡಿದ್ದು ಅದೇನೆಂದರೆ ಇನ್ನುಮುಂದೆ ಎಲ್ಲಾ ಹೊಸ ಮೊಬೈಲ್ ಫೋನ್ ಗಳಲ್ಲಿ ‘ಸಂಚಾರ್ ಸಾಥಿ’ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸುವಂತೆ ಮೊಬೈಲ್ ಕಂಪನಿಗಳಿಗೆ ಸೂಚಿಸಿದೆ. ಈ ನಿಯಮವನ್ನು ಜಾರಿಗೆ ತರಲು ಕಂಪನಿಗಳಿಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ.
ನವೆಂಬರ್ 28 ರಂದು ಹೊರಡಿಸಲಾದ ಮಾರ್ಗಸೂಚಿಗಳ ಪ್ರಕಾರ, 90 ದಿನಗಳ ನಂತರ ಪ್ರಾರಂಭಿಸಿ, ಭಾರತಕ್ಕೆ ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಎಲ್ಲಾ ಮೊಬೈಲ್ ಫೋನ್ಗಳು ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಮೊದಲೇ ಹೊಂದಿರಬೇಕು. ಫೋನ್ ಸೆಟಪ್ ಸಮಯದಲ್ಲಿ ಈ ಅಪ್ಲಿಕೇಶನ್ ಸುಲಭವಾಗಿ ಕಾಣಿಸಬೇಕು ಮತ್ತು ಅದನ್ನು ತೆಗೆದುಹಾಕಲು ಅಥವಾ ನಿಷ್ಕ್ರಿಯಗೊಳಿಸಲು ಸಾಧ್ಯವಾಗದಂತೆ ಇಡಬೇಕು. ಈ ನಿಯಮವು ಆ್ಯಪಲ್, ಸ್ಯಾಮ್ಸಂಗ್ ಸೇರಿದಂತೆ ಎಲ್ಲಾ ಬ್ರ್ಯಾಂಡ್, ಎಲ್ಲಾ ಕಂಪನಿಗಳಿಗೆ ಅನ್ವಯಿಸುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.
ಮೇ 2023 ರಲ್ಲಿ ತೆರೆಯಲಾಗಿದ್ದ ಸಂಚಾರ್ ಸಾಥಿ ಪೋರ್ಟಲ್ ಅನ್ನು ಅದರ ಮುಂದುವರಿದ ಭಾಗವಾಗಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿದ ಬಳಿಕ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದುಹೋದರೆ ಬ್ಲಾಕ್ ಮಾಡಬಹುದು. ಅಷ್ಟೇ ಅಲ್ಲದೇ ಈ ಫೋನ್ ದೇಶದ ಬೇರೆ ಕಡೆ ಬಳಕೆಯಾಗುತ್ತಿದ್ದರೂ ಕಾನೂನು ಸಂಸ್ಥೆಗಳಿಗೆ ಎಲ್ಲಿ ಈ ಫೋನ್ ಸಕ್ರಿಯವಾಗಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ. ಸೈಬರ್ ಅಪರಾಧ, ನಕಲಿ ಐಇಎಂಐ ಸಂಖ್ಯೆ ಬಳಸಿ ನಡೆಸುವ ಕೃತ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈ ಆ್ಯಪ್ ಇನ್ಸ್ಟಾಲ್ ಮಾಡಲು ಕಡ್ಡಾಯ ಮಾಡಿದೆ.
ಈಗಾಗಲೇ ತಯಾರಿಸಲಾದ ಅಥವಾ ಪ್ರಸ್ತುತ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಮೊಬೈಲ್ ಫೋನ್ಗಳಲ್ಲಿ ಸಹ ಸಾಫ್ಟ್ವೇರ್ ನವೀಕರಣಗಳ ಮೂಲಕ ಸಂಚಾರ ಸಾಥಿ ಅಪ್ಲಿಕೇಶನ್ ಅನ್ನು ಲಭ್ಯವಾಗುವಂತೆ ಮಾಡಬೇಕಾಗುತ್ತದೆ.
ಸಂಚಾರ್ ಸಾಥಿ ವೆಬ್ಸೈಟ್ ಪ್ರಕಾರ ಇಲ್ಲಿಯವರೆಗೆ 42.14 ಲಕ್ಷಕ್ಕೂ ಹೆಚ್ಚು ಮೊಬೈಲ್ಗಳನ್ನು ನಿರ್ಬಂಧಿಸಲಾಗಿದೆ ಮತ್ತು 26.11 ಲಕ್ಷಕ್ಕೂ ಹೆಚ್ಚು ಕಳೆದುಹೋದ ಅಥವಾ ಕದ್ದ ಮೊಬೈಲ್ ಹ್ಯಾಂಡ್ಸೆಟ್ಗಳನ್ನು ಪತ್ತೆಹಚ್ಚಲಾಗಿದೆ.





