“ತಾವು ನಂಬಿದ ಧ್ಯೇಯಕ್ಕಾಗಿ, ಗಂಧದಂತೆ ಬದುಕನ್ನು ತೇಯ್ದರು”
ಎಂ.ಕೆ ನೆನಪಿಸಿ, ಶಾಸಕ ವಿ. ಸುನಿಲ್ ಕುಮಾರ್ ಸಂತಾಪ

“ಉಂದುವೆ ಎನ್ನ ಲಾಸ್ಟ್ ದ ಚುನಾವಣೆ” ಈ ಜವಾನನು ಗೆಂದಾದ್ ಕೊರ್ಲೆ ( ಇದು ನನ್ನ ಕೊನೆಯ ಚುನಾವಣೆ, ಇವರನ್ನು ಗೆಲ್ಲಿಸಿ ಕೊಡಿ )…
ಕಳೆದ ಚುನಾವಣೆ ಸಂದರ್ಭದಲ್ಲಿ ಈ ರೀತಿ ಮಾತನಾಡಿದ್ದ ಕಾರ್ಕಳ ಬಿಜೆಪಿಯ ಹಿರಿಯ ಮುಖಂಡ ಎಂ.ಕೆ.ವಿಜಯ್ ಕುಮಾರ್ ಇನ್ನಿಲ್ಲ !
ನನ್ನನ್ನೂ ಸೇರಿದಂತೆ ಅನೇಕರಿಗೆ ಮಾದರಿ ಹಾಗೂ ಮಾರ್ಗದರ್ಶಕರಾಗಿದ್ದ ನ್ಯಾಯವಾದಿ ಎಂ. ಕೆ .ವಿಜಯ್ ಕುಮಾರ್ ರವರು ಶುಕ್ರವಾರ ತಡರಾತ್ರಿ ನಮ್ಮನ್ನು ಅಗಲಿರುವುದು ಆಘಾತವನ್ನುಂಟು ಮಾಡಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.
ಕಾರ್ಕಳ ಬಿಜೆಪಿಗೆ ಕತ್ತಲ ದಾರಿಯಲಿ ಬೆಳಕನ್ನು ತೋರಿಸಿದ ವಿಜಯ್ ಕುಮಾರ್ ಅವರು ಕಾರ್ಕಳದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಿದವರು. ಪ್ರತಿಕೂಲ ಸಂದರ್ಭದಲ್ಲೂ ಸವಾಲುಗಳನ್ನು ಎದುರಿಸಿ ಪಕ್ಷವನ್ನು ಗಟ್ಠಿಯಾಗಿ ಕಟ್ಟಿದ ಮಹನೀಯರು.
ಪಕ್ಷಕ್ಕಾಗಿ ಸದಾ ದುಡಿದರೂ ಪ್ರಚಾರ ಮತ್ತು ಪ್ರಶಂಸೆಯಿಂದ ದೂರ ಉಳಿದವರು. ತಾವು ನಂಬಿದ ಧ್ಯೇಯಕ್ಕಾಗಿ ಬದುಕನ್ನು ಗಂಧದಂತೆ ತೇಯ್ದದವರು.
ಉತ್ತಮ ವಾಗ್ಮಿಯಾಗಿ ತನ್ನದೇ ಶೈಲಿಯಲ್ಲಿ ಜನರನ್ನು ಹಿಡಿದಿಟ್ಟುಕೊಂಡು ಭಾಷಣವನ್ನು ಮಾಡುವುದರಲ್ಲಿ ಇವರದು ಎತ್ತಿದ ಕೈ. ಪ್ರಾರಂಭದಿಂದ ಇಂದಿನವರೆಗೂ ಇವರ ಭಾಷಣಕ್ಕಾಗಿ ಅದೆಷ್ಟು ಹಿರಿಯ-ಕಿರಿಯ ಅಭಿಮಾನಿ ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದರು. ಜೈನ ಸಮಾಜದ ಸಂಘ ಸಂಸ್ಥೆಗಳಲ್ಲಿ ಸಮಾಜದ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಧರ್ಮ ಜೀರ್ಣೋದ್ಧಾರಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಕಳದಲ್ಲಿ ಸತತ ಮೂರು ಬಾರಿ ಯಶಸ್ವಿಯಾಗಿ ಮಹಾಮಸ್ತಕಾಭಿಷೇಕ ನೆರವೇರಿಸುವುದರೊಂದಿಗೆ ಅನೇಕ ಸಂಘ ಸಂಸ್ಥೆಗಳ ಜವಾಬ್ದಾರಿಗಳನ್ನು ನಿರ್ವಹಿಸಿದ ಮೇರು ವ್ಯಕ್ತಿ ಶ್ರೀಯುತರದು.
ವೃತ್ತಿಯಿಂದ ನ್ಯಾಯವಾದಿಯಾಗಿ ಸಮಾಜಮುಖಿ ಕೆಲಸದಲ್ಲಿ ಸಕ್ರಿಯವಾಗಿರುವ ಜತೆಗೆ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಅನೇಕ ವಕೀಲರಿಗೆ ಹಾಗೂ ನ್ಯಾಯಾಧೀಶರಿಗೆ ಗುರುವಿನ ಸ್ಥಾನದಲ್ಲಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ನಮ್ಮೆಲ್ಲರ ಮಾರ್ಗದರ್ಶಕರೂ ಆಗಿದ್ದ ವಿಜಯಕುಮಾರ್ ಇಂದು ನಮ್ಮನ್ನು ಅಗಲಿರುವುದು ಅತ್ಯಂತ ದುಃಖದ ಸಂಗತಿ.ಶ್ರೀಯುತರ ಅಗಲುವಿಕೆ ಕಾರ್ಕಳಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ
ತುಂಬಲಾರದ ನಷ್ಟ.
ಆ ದಿವ್ಯ ಚೇತನಕ್ಕೆ ಸದ್ಗತಿ ದೊರೆಯಲಿ. ಅವರ ಕುಟುಂಬ, ಬಂಧು ವರ್ಗಕ್ಕೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಶಾಸಕ ವಿ.ಸುನಿಲ್ ಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ



















