
ಮಂಗಳೂರು: ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ ಚಿಕ್ಕ ಪ್ರಾಯದ ಮೂರುವರೆ ವರ್ಷದ ಕೋಣಗಳನ್ನು ಕಂಬಳದಲ್ಲಿ ಓಡಿಸಬಾರದೆನ್ನುವ ಕಾನೂನು ಪಾಲಿಸುವುದು, 24 ಗಂಟೆಯೊಳಗೆ ಕಂಬಳ ಮುಗಿಸಬೇಕೆಂಬ ಷರತ್ತಿನ ಕಾರಣಕ್ಕೆ ಈ ಬಾರಿಯಿಂದ ಸಬ್ ಜೂನಿಯರ್ ವಿಭಾಗವನ್ನು ಸ್ಪರ್ಧೆಯಿಂದ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಕಂಬಳ ಆಯೋಜಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಂಬಳ ಅಸೋಸಿಯೇಶನ್ಗೆ ಮನವಿ ಮಾಡಿದ್ದಾರೆ. ಇಲ್ಲಿಯ ಕಂಬಳಗಳು ಮುಗಿದ ನಂತರ, ಮುಂದಿನ ಏಪ್ರಿಲ್ ವೇಳೆಗೆ ಅಲ್ಲಿ ಕಂಬಳ ಆಯೋಜನೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಕಂಬಳ ಸಮಿತಿಯ ತಜ್ಞರು ಈಗಾಗಲೇ ಮೈಸೂರಿಗೆ ಭೇಟಿ ನೀಡಿ, 10 ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ, ಅಲ್ಲಿ ಕೆರೆ ನಿರ್ಮಾಣ ಸೇರಿದಂತೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಬಂದಿದ್ದಾರೆ. ಈಗಾಗಲೇ ಹೈಕೋರ್ಟ್ ಕೂಡ ರಾಜ್ಯದ ಯಾವ ಭಾಗದಲ್ಲಾದರೂ ಕಂಬಳ ಆಯೋಜಿಸಲು ಅಡ್ಡಿ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಕಂಬಳ ಆಯೋಜನೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.






















































