
ನವದೆಹಲಿ: ಕೇಂದ್ರ ಸರ್ಕಾರವು ಅಯ್ಯಪ್ಪ ಭಕ್ತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು ಅದೇನೆಂದರೆ ಅಯ್ಯಪ್ಪ ಭಕ್ತರಲ್ಲಿ ಇರುಮುಡಿಯ ಕಟ್ಟು ಇರುವುದರಿಂದ ಇಷ್ಟು ದಿನ ಅಯ್ಯಪ್ಪ ಭಕ್ತರಿಗೆ ವಿಮಾನದಲ್ಲಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಇರುಮುಡಿಯನ್ನು ವಿಮಾನ ಕ್ಯಾಬಿನ್ನಲ್ಲಿ ತೆಗೆದುಕೊಂಡು ಹೋಗಲು ಅವಕಾಶ ನೀಡಿದೆ.
ಇಷ್ಟು ದಿನ ಅಯ್ಯಪ್ಪ ಸ್ವಾಮಿ ಭಕ್ತರು ಬರೀ ಕಾರು, ಬಸ್, ರೈಲುಗಳಲ್ಲೇ ಪ್ರಯಾಣ ಮಾಡುತ್ತಿದ್ದು ಭದ್ರತಾ ಕಾರಣಗಳಿಗಾಗಿ ಈ ಹಿಂದೆ ವಿಮಾನದಲ್ಲಿ ಇರುಮುಡಿ ತೆಗೆದುಕೊಂಡು ಹೋಗಲು ಅವರಿಗೆ ಅವಕಾಶ ಇರಲಿಲ್ಲ, ಆದರೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಈಗ ಅಯ್ಯಪ್ಪ ಭಕ್ತರಿಗೆ ಗುಡ್ನ್ಯೂಸ್ ನೀಡಿದ್ದಾರೆ. ಹೀಗಾಗಿ ಇನ್ನು ಇರುಮುಡಿ ಸಮೇತ ಅಯ್ಯಪ್ಪ ಭಕ್ತರು ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಚೆಕ್ ಇನ್ ಬ್ಯಾಗೇಜ್ ಬದಲು ಅಯ್ಯಪ್ಪ ಭಕ್ತರು ಇರುಮುಡಿ ತೆಗೆದುಕೊಂಡು ಹೋಗಬಹುದು.
ಈ ಹಿಂದೆ ಕಳೆದ ವರ್ಷ ಏಕಾಏಕಿ ಲಕ್ಷಾಂತರ ಭಕ್ತರು ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದರಿಂದ ಮತ್ತು ಅದನ್ನು ನಿರ್ವಹಿಸಲು ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಕೊಂಡಿರದ ಕಾರಣ ಭಾರೀ ಅವ್ಯವಸ್ಥೆ ಉಂಟಾಗಿದ್ದು ಹೀಗಾಗಿ ಪ್ರಸಿದ್ದ ಶಬರಿಮಲೆ ದೇಗುಲದ ವಾರ್ಷಿಕ ಮಂಡಲಂ- ಮಕರವಿಳಕ್ಕು ಯಾತ್ರೆಗೆ ಈ ವರ್ಷ ಆನ್ಲೈನ್ನಲ್ಲಿ ಬುಕ್ ಮಾಡಿದವರಿಗೆ ಮಾತ್ರ ಶಬರಿಮಲೆಗೆ ಪ್ರವೇಶ ನೀಡಲು ಕೇರಳ ಸರ್ಕಾರ ನಿರ್ಧರಿಸಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಆನ್ಲೈನ್ ಬುಕ್ಕಿಂಗ್ ವಾಪಸ್ ಪಡೆದಿದೆ.









