ವಿಐಪಿ ಪಾಸ್ ಸೇರಿ ಇನ್ನಿತರ ಪಾಸ್ಗಳಿಗೆ ಕೆಲ ನಿರ್ಬಂಧ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಅ.9ರಿಂದ 23ರವರೆಗೆ ಹಾಸನಾಂಬ ದೇವಿ ಉತ್ಸವ ನಡೆಯಲಿದ್ದು, ಈ ಹಿನ್ನೆಲೆ ಹಾಸನ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹಾಸನಾಂಬ ದರ್ಶನದಲ್ಲಿ ಗೊಂದಲ ಉಂಟಾಗುವುದನ್ನು ತಡೆಯಲು ವಿಐಪಿ ಪಾಸ್ ಸೇರಿ ಇನ್ನಿತರ ಪಾಸ್ಗಳಿಗೆ ಕೆಲ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.
ವರ್ಷದಿಂದ ವರ್ಷಕ್ಕೆ ಹಾಸನಾಂಬ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಈ ವರ್ಷ 25 ಲಕ್ಷ ಭಕ್ತರು ದರ್ಶನಕ್ಕೆ ಬರುವ ನಿರೀಕ್ಷೆಯಿದೆ. ಈ ವೇಳೆ ಯಾವುದೇ ಗೊಂದಲ ಉಂಟಾಗದಂತೆ ಮಾಡಲು ‘ಪಾಸ್ ಪಡೆದು ದರ್ಶನ’ಕ್ಕೆ ಕೆಲ ನಿರ್ಬಂಧ ಹೇರಲಾಗಿದೆ. ಆ ಮೂಲಕ ಸಾರ್ವಜನಿಕರ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯಪಾಲರು, ಮುಖ್ಯಮಂತ್ರಿಗಳು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮತ್ತು ಮಾಜಿ ಪ್ರಧಾನಿಗಳು ಮಾತ್ರ ಎಸ್ಕಾರ್ಟ್ ಮೂಲಕ ದೇವಸ್ಥಾನಕ್ಕೆ ತೆರಳಬಹುದು. ಉಳಿದಂತೆ ಸಚಿವರು, ಶಾಸಕರು, ನ್ಯಾಯಮೂರ್ತಿಗಳು ಸೇರಿ ಉಳಿದ ಗಣ್ಯರು ದೇವಸ್ಥಾನಕ್ಕೆ ನೇರ ಭೇಟಿಗೆ ಅವಕಾಶವಿಲ್ಲ. ಅವರು ಮೊದಲಿಗೆ ತಾವು ಯಾವ ದಿನದಂದು ದೇವಸ್ಥಾನಕ್ಕೆ ಬರಲಿದ್ದೇವೆ ಎಂಬುದನ್ನು ಜಿಲ್ಲಾಡಳಿತಕ್ಕೆ ಇಮೇಲ್ ಅಥವಾ ದೂರವಾಣಿ ಮೂಲಕ ತಿಳಿಸಬೇಕು. ನಂತರ ಅವರು ನಿಗದಿತ ದಿನದಂದು ಹಾಸನದ ಪರಿವೀಕ್ಷಣಾ ಮಂದಿರಕ್ಕೆ ಬರಬೇಕು. ಅಲ್ಲಿಂದ ಅವರು ಮತ್ತು ಅವರೊಂದಿಗೆ ನಾಲ್ಕು ಮಂದಿಯನ್ನು ಜಿಲ್ಲಾಡಳಿತದ ವಾಹನದಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಲಾಗುವುದು. ಇದರಿಂದಾಗಿ ಭದ್ರತೆ ಸಮಸ್ಯೆ ಮತ್ತು ಸಾರ್ವಜನಿಕರ ದರ್ಶನಕ್ಕೆ ಎದುರಾಗುವ ತೊಡಕು ನಿವಾರಣೆಯಾಗುವಂತೆ ಮಾಡಲಾಗುವುದು.
ಪ್ರತಿನಿತ್ಯ 1 ಸಾವಿರ ಗೋಲ್ಡ್ ಪಾಸ್ಗಳನ್ನು ಸಮಾಜದ ಗಣ್ಯ ವ್ಯಕ್ತಿಗಳಿಗೆ ನೀಡಲಾಗುವುದು. ಆ ಪಾಸ್ನಲ್ಲಿ ಒಬ್ಬರು ಮಾತ್ರ ದೇವಸ್ಥಾನಕ್ಕೆ ಹೋಗಲು ಅವಕಾಶ ನೀಡಲಾಗುತ್ತಿದ್ದು, ಪಾಸ್ ಪಡೆದವರು ಪಾಸ್ನಲ್ಲಿ ಮುದ್ರಿಸಲಾದ ದಿನದಂದೇ ಬರಬೇಕು. ಈ ಗೋಲ್ಡ್ ಪಾಸ್ ಹೊಂದಿರುವವರು ಬೆಳಗ್ಗೆ 7.30ರಿಂದ 10 ಗಂಟೆಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಉಳಿದಂತೆ ವಿಐಪಿಗಳಿಗೆ 10.30ರಿಂದ 12.30ರವರೆಗೆ ಅವಕಾಶವಿರಲಿದೆ. ಆ ಅವಧಿ ಮುಗಿದ ನಂತರ ಆ ಗೇಟ್ಗಳನ್ನು ಮುಚ್ಚಲಾಗುವುದು ಎಂದರು.
ಸಾರ್ವಜನಿಕರ ದರ್ಶನಕ್ಕಾಗಿ 300 ರು. ಮತ್ತು 1 ಸಾವಿರ ರು. ಬೆಲೆಯ ಪಾಸ್ಗಳನ್ನು ವಿತರಿಸಲಿದ್ದು ಪಾಸ್ ಹೊಂದಿರುವವರಿಗೆ ದೇವರ ದರ್ಶನದ ಜತೆಗೆ ಪ್ರಸಾದವನ್ನೂ ನೀಡಲಾಗುವುದು. ಅ.9 ಮತ್ತು 23ರಂದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಇರಲಿದ್ದು, ಆ ದಿನಗಳಂದು ಪೂಜಾ ಕೈಂಕರ್ಯಗಳಿರಲಿವೆ. ಉಳಿದಂತೆ ಅ.10ರಿಂದ 22ರವರೆಗೆ ನಿರಂತರವಾಗಿ ಹಾಸನಾಂಬೆ ದರ್ಶನಕ್ಕೆ ಅವಕಾಶವಿರಲಿದೆ ಎಂದು ಮಾಹಿತಿ ನೀಡಿದರು.






















































