
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಿಂದ ಇರಾನ್ ಸಂಕಷ್ಟಕ್ಕೆ ಸಿಲುಕಿದ್ದು, ಇದರ ಪರಿಣಾಮವಾಗಿ ಹಲವು ತೈಲ ಘಟಕಗಳ ಮೇಲೂ ಪರಿಣಾಮ ಕಂಡುಬಂದಿದೆ. ಈ ಹಿನ್ನೆಲೆ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದು, ಅದಕ್ಕೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಟ್ವೀಟ್ನಲ್ಲಿ ಸ್ಕಾಟ್ ಬೆಸೆಂಟ್, “ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಸರಬರಾಜು ನಿರಂತರವಾಗಿರಲು ಭಾರತೀಯ ಸಂಸ್ಕರಣಾಗಾರಗಳು ರಷ್ಯಾದ ತೈಲವನ್ನು ಖರೀದಿಸಲು ಖಜಾನೆ ಇಲಾಖೆ 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡುತ್ತಿದೆ ಎಂದು ತಿಳಿಸಿದ್ದಾರೆ. ಭಾರತ ಅಮೆರಿಕದ ಪ್ರಮುಖ ಪಾಲುದಾರವಾಗಿದ್ದು, ನವದೆಹಲಿ ಅಮೆರಿಕದ ತೈಲ ಖರೀದಿಯನ್ನು ಹೆಚ್ಚಿಸುವುದಾಗಿ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ಇರಾನ್ ಜಾಗತಿಕ ಇಂಧನ ಸರಬರಾಜನ್ನು ಒತ್ತಡಕ್ಕೆ ಒಳಪಡಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ” ಎಂದು ಕೂಡ ತಿಳಿಸಿದ್ದಾರೆ.
ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಟ್ವೀಟ್ ಮೂಲಕ ಅಮೆರಿಕದ ನಿಲುವನ್ನು ಪ್ರಶ್ನಿಸಿದ್ದಾರೆ. ಭಾರತಕ್ಕೆ ರಷ್ಯಾದ ತೈಲ ಖರೀದಿಸಲು ‘ಅನುಮತಿ’ ನೀಡುವ ಹಕ್ಕು ಅಮೆರಿಕದ ಖಜಾನೆ ಕಾರ್ಯದರ್ಶಿಗೆ ಹೇಗೆ ಬಂದಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಭಾರತ ಸರ್ಕಾರ ಈ ರೀತಿಯ ಹೇಳಿಕೆಗಳನ್ನು ಏಕೆ ಸಹಿಸುತ್ತಿದೆ ಮತ್ತು ಅಮೆರಿಕದ ಪ್ರತಿಯೊಂದು ಸೂಚನೆಗೂ ಏಕೆ ಮಣಿಯುತ್ತಿದೆ. ಜೊತೆಗೆ ಪ್ರಧಾನಿ @narendramodi ಅವರ ಮೇಲೆ ಯಾವ ರೀತಿಯ ಒತ್ತಡವಿದೆ ಎಂದು ಪ್ರಶ್ನಿಸಿರುವ ಅವರು, ಬಿಜೆಪಿ ಆಡಳಿತದಲ್ಲಿ ಭಾರತದ ವಿದೇಶಾಂಗ ನೀತಿ ತಮಾಷೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮೋದಿ ಸರ್ಕಾರ ಸ್ವಲ್ಪ ಧೈರ್ಯ ಮತ್ತು ಸ್ವಾಭಿಮಾನ ತೋರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.






