
ಬೆಂಗಳೂರು: ಕೇವಲ ಅತಿವೇಗದಲ್ಲಿ ವಾಹನ ಚಲಾಯಿಸಿದ್ದಾನೆ ಎಂಬ ಕಾರಣಕ್ಕೆ ಚಾಲಕ ಅವಸರ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದನೆಂದು ತೀರ್ಮಾನಿಸಲಾಗದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಉಳ್ಳಂಬಳ್ಳಿ ಗ್ರಾಮದ ನಿವಾಸಿ ಮಗೇಶ್ ವಿರುದ್ಧದ ಶಿಕ್ಷೆಯನ್ನು ರದ್ದುಪಡಿಸಿ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠ ಈ ತೀರ್ಪು ಪ್ರಕಟಿಸಿದೆ.
2013ರಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ನಾಲ್ವರು ಸಾವಿಗೀಡಾಗಿದ್ದ ಹಿನ್ನೆಲೆಯಲ್ಲಿ ಮಗೇಶ್ಗೆ ವಿಧಿಸಿದ್ದ ಎರಡು ವರ್ಷ ಜೈಲು ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ತನಿಖಾಧಿಕಾರಿ ಸಲ್ಲಿಸಿದ ದಾಖಲೆಗಳಲ್ಲಿ ಸುಮೋ ವಾಹನದ ಹಿಂಬದಿ ಎಡ ಚಕ್ರ ಸ್ಫೋಟಗೊಂಡ ನಂತರವೇ ಅಪಘಾತ ಸಂಭವಿಸಿದೆ ಎಂಬ ಅಂಶ ಉಲ್ಲೇಖವಾಗಿದ್ದು, ಇದನ್ನು ಸಂಪೂರ್ಣವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಕರಣದ ಯಾವುದೇ ಸಾಕ್ಷಿಯೂ ಚಾಲಕ ಅವಸರ ಅಥವಾ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದಾನೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಸಾಕ್ಷಿಗಳು ಕೇವಲ “ಅತಿ ವೇಗದಲ್ಲಿ ವಾಹನ ಚಲಾಯಿಸಲಾಗುತ್ತಿತ್ತು” ಎಂದಷ್ಟೇ ಹೇಳಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದುದರಿಂದ ವೇಗವಾಗಿರಬಹುದು ಎಂದು ಪೀಠ ಗಮನಿಸಿದೆ.
ಅತಿವೇಗದ ಚಾಲನೆಯನ್ನೇ ನಿರ್ಲಕ್ಷ್ಯ ಅಥವಾ ಅವಸರದ ಚಾಲನೆ ಎಂದು ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ ಮಗೇಶ್ನ್ನು ಖುಲಾಸೆಗೊಳಿಸಿದೆ. ಇದರೊಂದಿಗೆ, ಕೆಳ ನ್ಯಾಯಾಲಯಗಳು ನೀಡಿದ್ದ ದೋಷಾರೋಪಣೆ ಹಾಗೂ ಶಿಕ್ಷೆಯ ಆದೇಶಗಳನ್ನು ರದ್ದುಪಡಿಸಿದೆ.



















