
ಚೆನ್ನೈ: ರಾಜ್ಯ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಅಣ್ಣಾ ವಿವಿಯಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಅಸಮರ್ಥತೆಯಿಂದ ನಿಭಾಯಿಸಿದೆ ಎಂದು ಆರೋಪಿಸಿ ತಮಗೆ ತಾವೇ ಛಡಿಯೇಟು ಬಾರಿಸಿಕೊಂಡು ತಮಿಳುನಾಡು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟಿಸಿದರೆ, ಕಾರ್ಯಕರ್ತರನ್ನು ಪೊಲೀಸರು ಕರೆದುಕೊಂಡು ಹೋಗಿ ಕಲ್ಯಾಣ ಮಂಟಪಗಳಲ್ಲಿ ಇರಿಸುತ್ತಾರೆ. ಹಾಗಾಗಿ, ತಮ್ಮ ಮನೆಯಲ್ಲೇ ಪ್ರತಿಭಟನೆ ನಡೆಸುವುದಾಗಿ ಹಿಂದಿನ ದಿನವೇ ಘೋಷಿಸಿದ್ದ ಅಣ್ಣಮಲೈ ಅವರು ತಮ್ಮ ನಿವಾಸದಲ್ಲಿ ಆರು ಬಾರಿ ತನ್ನನ್ನು ತಾನೇ ಛಡಿಯೇಟಿನಿಂದ ಹೊಡೆದುಕೊಂಡಿದ್ದಾರೆ.
ಅಣ್ಣಾಮಲೈ ಛಡಿಯೇಟು ಬಾರಿಸುವ ಸಂದರ್ಭದಲ್ಲಿ, ಬಿಜೆಪಿ ಬೆಂಬಲಿಗರು ʼನಿಮಗೆ ನಾಚಿಕೆಯಾಗುವುದಿಲ್ಲವೇ ಸ್ಟಾಲಿನ್?ʼ, “ಆರೋಪಿ ಜ್ಞಾನಶೇಖರನ್ ಅವರನ್ನು ಗಲ್ಲಿಗೇರಿಸಿ” ಮತ್ತು “#ShameOnYouStalin” ಮುಂತಾದ ಘೋಷಣೆಗಳನ್ನು ಹೊಂದಿರುವ ಫಲಕಗಳನ್ನು ಹಿಡಿದುಕೊಂಡಿದ್ದರು.
ಸ್ವಯಂ ಛಡಿ ಏಟಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಮಲೈ “ನಮ್ಮನ್ನು ನಾವೇ ಹೊಡೆಯುವುದು, ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುವುದು, ಕಠಿಣ ಆಚರಣೆಗಳಿಗೆ ಒಳಪಡಿಸಿಕೊಳ್ಳುವುದು ಇತ್ಯಾದಿ ಎಲ್ಲವೂ ಈ ಸಂಸ್ಕೃತಿಯ ಭಾಗವಾಗಿದೆ. ಇದು ಯಾವುದೇ ವ್ಯಕ್ತಿಯ ವಿರುದ್ಧ ಅಥವಾ ಯಾವುದಕ್ಕೂ ವಿರುದ್ಧವಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ನಿರಂತರ ಅನ್ಯಾಯದ ವಿರುದ್ಧವಾಗಿದೆ. ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದಿರುವುದು ಕೇವಲ ಒಂದು ತಿರುವು” ಎಂದು ಹೇಳಿದರು.
ಇದಲ್ಲದೆ ರಾಜ್ಯದಲ್ಲಿ ಡಿಎಂಕೆ ಸರ್ಕಾರ ಉರುಳುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಅಣ್ಣಾಮಲೈ ಅವರು ಗುರುವಾರ ಪ್ರತಿಜ್ಞೆ ಮಾಡಿದ್ದಾರೆ.




