ನಿತ್ಯಾನುಷ್ಠಾನದಿಂದ ಸಂಸ್ಕಾರದ ಬೇರುಗಳು ಸುಭದ್ರ : ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ

ಹೆಬ್ರಿ:ಹಿಂದಿನ ಕಾಲದಲ್ಲಿ ಮಕ್ಕಳಿಗೆ ಸಂಸ್ಕಾರದ ಪಾಠ ಮನೆಯಲ್ಲಿಯೇ ಹಿರಿಯರು ಹೇಳಿಕೊಡುತ್ತಿದ್ದರು. ಆದರೆ ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಅದೆಲ್ಲವೂ ಕ್ಷೀಣಿಸುತ್ತಿದೆ. ನಮ್ಮ ಆಚಾರ ವಿಚಾರಗಳನ್ನು ತಿಳಿದುಕೊಂಡಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಆ ನಿಟ್ಟಿನಲ್ಲಿ ಪೇಜಾವರ ಮಠದ ವತಿಯಿಂದ ಹಳ್ಳಿ, ಪಟ್ಟಣವೆನ್ನದೆ ಅನೇಕ ರಾಜ್ಯಗಳಲ್ಲಿ ಧಾರ್ಮಿಕ ಶಿಬಿರಗಳು ಮಠದ ಪ್ರಾಚಾರ್ಯರಿಂದ ನಡೆಯುತ್ತಿದೆ. ಈ ಅವಕಾಶ ವನ್ನು ಎಲ್ಲ ವಿಪ್ರ ಬಾಲಕರು, ಬಾಲಕಿಯರು ಪಡೆಯಬೇಕು. ಶಿಬಿರದಲ್ಲಿ ಕಲಿತ ವಿಚಾರಗಳನ್ನು ಮನೆಯಲ್ಲಿ ಪ್ರತಿನಿತ್ಯವೂ ಅನುಷ್ಠಾನ ಮಾಡಬೇಕು. ಮನೆ ಮನೆಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ತಪ್ಪದೇ ಭಾಗವಹಿಸಿ ಅಲ್ಲಿ ತಾವು ಕಲಿತ ಸ್ತುತಿಗಳು, ಸೂಕ್ತಗಳು, ಭಜನೆ, ಸಂಕೀರ್ತನೆಗಳನ್ನು ಎಲ್ಲರೂ ಒಟ್ಟು ಸೇರಿ ನಡೆಸಬೇಕು. ಇದಕ್ಕೆ ಹೆತ್ತವರು ಪ್ರೋತ್ಸಾಹ ನೀಡಬೇಕು. ಆಗ ನಮ್ಮ ಸಂಸ್ಕೃತಿಯ ಬೇರುಗಳು ಇನ್ನಷ್ಟು ಸದೃಢ ವಾಗುತ್ತದೆ ಎಂದು ಉಡುಪಿ ಪೇಜಾವರ ಮಠದ ಸ್ವಾಮೀಜಿಯವರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಅವರು ಉಡುಪಿ ಪೇಜಾವರ ಮಠ ಮತ್ತು ಶಿಬಿರ ವ್ಯವಸ್ಥಾಪನ ಸಮಿತಿ ಹೆಬ್ರಿ ವತಿಯಿಂದ ಹೆಬ್ರಿ ಗಿಲ್ಲಾಳಿಯ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆ ಯಲ್ಲಿ ವಿಪ್ರ ಬಾಲಕ, ಬಾಲಕಿಯರಿಗೆ ನಡೆದ ಹತ್ತು ದಿನಗಳ ಧಾರ್ಮಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಆಶೀರ್ವಚನ ನೀಡಿದರು. ಹೆಬ್ರಿ ಶ್ರೀ ಅನಂತಪದ್ಮನಾಭ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಲಕ್ಷ್ಮಣ ಭಟ್ ಶಿವಪುರ, ಗೋಶಾಲೆಯ ಟ್ರಸ್ಟಿಗಳಾದ ಭಾರ್ಗವಿ ಆರ್. ಐತಾಳ್, ಶಿಬಿರದ ಗುರುಗಳಾದ ಶ್ರೀಧಾಮ ಆಚಾರ್ಯ, ಶ್ರೀವಾಸ ಆಚಾರ್ಯ, ಹಿರಿಯರಾದ ಮಡಾಮಕ್ಕಿ ಅನಂತ ತಂತ್ರಿ,ಶಿಬಿರ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಮಚಂದ್ರ ಭಟ್ ವರಂಗ,ಗೋಶಾಲೆಯ ಟ್ರಸ್ಟಿಗಳಾದ ಎಂ. ರವಿ ರಾವ್, ವಿಷ್ಣುಮೂರ್ತಿ ಆಚಾರ್ಯ, ಚೆನ್ನಕೇಶವ ವೈಲಾಯ, ಹರೀಶ್ ಭಟ್ ಉಪಸ್ಥಿತರಿದ್ದರು. ಶಿಬಿರ ವ್ಯವಸ್ಥಾಪನ ಸಮಿತಿಯ ಪ್ರಮುಖರಾದ ಗಿಲ್ಲಾಳಿ ಪದ್ಮನಾಭ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರಾರ್ಥಿಗಳ ಪರವಾಗಿ ಸೃಜನ್ ಅಡಿಗ ಮತ್ತು ಐಸಿರಿ ಎಂ. ಅನಿಸಿಕೆ ವ್ಯಕ್ತಪಡಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಗೌರವಿಸಲಾಯಿತು.ಮಾತೆಯರಾದ ವಿದ್ಯಾಲಕ್ಷ್ಮಿ ಆಚಾರ್ಯ ಗಿಲ್ಲಾಳಿ, ಚಂದ್ರಿಕಾ ಆಚಾರ್ಯ ಗಿಲ್ಲಾಳಿ, ಶ್ವೇತಾ ತಂತ್ರಿ ಮಾಡಾಮಕ್ಕಿ, ಶ್ರೀನಿಧಿ ಕಲ್ಕೂರ್ ಉಪ್ಪಳ ಹಾಗೂ ಅಮೋಘ ಭಟ್ ಭಕ್ರೆ ಮುದ್ರಾಡಿ ಮತ್ತು ಗೋಶಾಲೆಯ ಉಸ್ತುವಾರಿ ಸುಬ್ರಮಣ್ಯ ನಾಯಕ್ ಶಿಬಿರದ ಯಶಸ್ಸಿಗೆ ಸಹಕರಿಸಿದರು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಿಬಿರದಲ್ಲಿ ದೇವಪೂಜೆ, ಜಪ, ಶ್ಲೋಕಗಳು,ಧ್ಯಾನ, ಪುರಾಣ ಕಥೆಗಳು,ಸಂಕೀರ್ತನೆ, ನರಸಿಂಹ ಸ್ತುತಿ, ಲಕ್ಷ್ಮೀ ಶೋಭಾನೆ, ಮಧ್ವನಾಮ, ಸಂಗೀತ,ಶಂಖ ಊದು ವುದು, ಜಾಗಟೆ ಬಾರಿಸುವುದು, ಹರಿಕಥಾಮೃತಸಾರ ಶ್ಲೋಕ, ಹೂವು ಕಟ್ಟುವುದು, ರಂಗೋಲಿ ಬಿಡಿಸುವುದು, ಬತ್ತಿ ತಯಾರಿಕೆ ಮುಂತಾದ ವಿಚಾರಗಳನ್ನು ಮಕ್ಕಳು ತಿಳಿದುಕೊಂಡರು.




