
ಬೆಂಗಳೂರು: ದಿನದಿಂದ ದಿನಕ್ಕೆ ಬೆಲೆ ಏರಿಕೆಯ ಹೊಡೆತದಿಂದ ತತ್ತರಿಸುತ್ತಿರುವ ಜನತೆಗೆ ಇದೀಗ ರಾಜ್ಯ ಸರ್ಕಾರವು ಮತ್ತೊಂದು ಶಾಕ್ ನೀಡಿದ್ದು ಅದೇನೆಂದರೆ ಮುದ್ರಾಂಕ ಶುಲ್ಕ ( ಸ್ಟ್ಯಾಂಪ್ ಡ್ಯೂಟಿ) ಹೆಚ್ಚಿಸಲು ನಿರ್ಧರಿಸಿದೆ. ಶೇಕಡಾ 1 ರಷ್ಟು ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸುವ ಮೂಲಕ ಆಸ್ತಿ ನೋಂದಣಿ, ಮಾರಾಟದ ಮೂಲಕ ಬರುತ್ತಿರುವ ಆದಾಯ ಮೂಲ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಈ ದರ ಹೆಚ್ಚಳದಿಂದ ಇನ್ನು ಮುಂದೆ ಆಸ್ತಿ ಖರೀದಿದಾರರು ಒಟ್ಟು ಶೇಕಡಾ 7.6ರಷ್ಟು ತೆರಿಗೆ, ಶುಲ್ಕ ಪಾವತಿಸಬೇಕಿದೆ.
ಇನ್ನು ಮುಂದೆ ಆಸ್ತಿ ಖರೀದಿದಾರರು ಶೇಕಡಾ 5ರಷ್ಟು ಸ್ಟ್ಯಾಂಪ್ ಡ್ಯೂಟಿ, ಶೇಕಡಾ 1 ರಷ್ಟು ನೋಂದಣಿ ಶುಲ್ಕ, ಶೇಕಡಾ 0.5 ರಷ್ಟು ಸೆಸ್, ಶೇಕಡಾ 0.1 ರಷ್ಟು ಸರ್ಚಾರ್ಜ್ ಸೇರಿ ಒಟ್ಟು ಶೇಕಡಾ 6.6 ರಷ್ಟು ಶುಲ್ಕ ಪಾವತಿಸಬೇಕು. ಆದರೆ ದರ ಏರಿಕೆಯಿಂದ ಇನ್ನು ಶೇಕಡಾ 7.6 ರಷ್ಟು ಪಾವತಿಸಬೇಕು. ಇದು ಆಸ್ತಿ ಖರೀದಿ ಮೊತ್ತದ ಶೇಕಡಾ 7.6 ರಷ್ಟು ಮೊತ್ತವನ್ನು ಸರ್ಕಾರಕ್ಕೆ ತೆರಿಗೆ ಹಾಗೂ ಇತರ ಶುಲ್ಕಗಳ ರೂಪದಲ್ಲಿ ಪಾವತಿಸಬೇಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಟ್ಯಾಂಪ್ಸ್ ಹಾಗೂ ನೋಂದಣಿ ವಿಭಾಗದ ಅಧಿಕಾರಿಗಳ ಜೊತೆ ಜೂನ್ 18 ರಂದು ಸಭೆ ನಡೆಸಿದ್ದು ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕದಲ್ಲಿ ಆದಾಯ ಕೊರತೆ ಕಾಣುತ್ತಿದೆ. ಈ ಕುರಿತ ವರದಿ ಪರಿಶೀಲಿಸಿದ ಸಿದ್ದರಾಮಯ್ಯ ತಕ್ಷಣವೇ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕ ವಿಭಾಗದಲ್ಲಿ ಆದಾಯ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದರಂತೆ ಮುದ್ರಾಂಖ ಸುಲ್ಕ ಹೆಚ್ಚಳದ ಪ್ರಸ್ತಾವನೆ ಮುನ್ನಲೆಗೆ ಬಂದಿದೆ. ಈ ಪ್ರಸ್ತಾವನೆಗೆ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಆದಾಯ ಹಾಗೂ ಎಸ್ ಆ್ಯಂಡ್ ಆರ್ ವಿಭಾಗದ ಜೊತೆ ಅಂತಿಮ ಸುತ್ತಿನ ಚರ್ಚೆ ನಡೆಸಿ ಈ ದರ ಏರಿಕೆ ಜಾರಿಯಾಗುವ ಸಾಧ್ಯತೆಯಿದೆ.
ಸ್ಟ್ಯಾಂಪ್ ಡ್ಯೂಟಿ ದರ ಏರಿಕೆ ಪ್ರಸ್ತಾವನೆಗೆ ರಿಯಲ್ ಎಸ್ಟೇಟ್ ಉದ್ಯಮದಾರರು ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದು ಆಸ್ತಿ ಖರೀದಿ, ಮಾರಾಟದ ವೇಳೆ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ. ಪೋರ್ಟಲ್ ಸಮಸ್ಯೆ, ತಾಂತ್ರಿಕ ಸಮಸ್ಯೆಗಳಿಂದ ಜನರು ಅಲೆದಾಡುವಂತಾಗಿದೆ. ಸರ್ಕಾರ ಆದಾಯ ಕೊರತೆ ಅನುಭವಿಸುತ್ತಿದೆ ನಿಜ. ಅದಕ್ಕೆ ಸ್ಟ್ಯಾಂಪ್ ಡ್ಯೂಟಿ ದರ ಏರಿಕೆ ಪರಿಹಾರವಲ್ಲ ಎಂದು ರಿಯಲ್ ಎಸ್ಟೇಟ್ ಡೆವಲಪ್ಪರ್ ಅಸೋಸಿಯೇಶನ್ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ಟಿ ಭಾಸ್ಕರ್ ನಾಗೇಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.






