
ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಬಾಗಲಕೋಟೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ಅಭಿವೃದ್ಧಿಗೆ ನಮ್ಮ ಬಳಿ ಹಣ ಇಲ್ಲ, ಸಿದ್ದರಾಮಯ್ಯರ ಬಳಿಯೂ ಇಲ್ಲ. ದೊಡ್ಡ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಿಕೊಡಿ” ಎಂದು ಹೇಳಿಕೆ ನೀಡಿದಾಗ ಈ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು ಇದೀಗ ಈ ಕುರಿತು ಪ್ರತಿಕ್ರಿಯಿಸಿರುವ ಪರಮೇಶ್ವರ್ ಅವರು ಸರ್ಕಾರದ ಬಳಿ ಹಣ ಇಲ್ಲ ಅಂತಾ ನಾನು ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಹೇಳಿಕೆ ಬಿಜೆಪಿಯವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಬಿಜೆಪಿಯವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಸರ್ಕಾರದ ಬಳಿ ದುಡ್ಡಿಲ್ಲ ಅಂತಾ ನಾನು ಎಲ್ಲಿಯೂ ಹೇಳಿಲ್ಲ. ಬಾದಾಮಿ ಅಭಿವೃದ್ಧಿ ಮತ್ತು ಬಾದಾಮಿ ಗುಹೆಗಳ ರಕ್ಷಣೆಗೆ ಸಂಬಂಧಿಸಿದಂತೆ 1000 ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲು ಸೂಚಿಸಿದ್ದೆ. ಅಷ್ಟೊಂದು ದುಡ್ಡು ರಾಜ್ಯ ಸರ್ಕಾರವೇ ಕೊಡಲು ಸಾಧ್ಯವಿಲ್ಲ, ಆದ್ದರಿಂದ ಕೇಂದ್ರದಿಂದಲೂ ಸಹಾಯ ಪಡೆದರೆ ಅನುಕೂಲ ಎಂದಿದ್ದೆ. ಇಷ್ಟೇ ಹೇಳಿದ್ದು, ದುಡ್ಡೇ ಇಲ್ಲ ಎಂದು ನಾನು ಎಂದಿಗೂ ಹೇಳಿಲ್ಲ ಎಂದು ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಬಜೆಟ್ ಗಾತ್ರ ಸಹಜವಾಗಿ ಗಣನೀಯವಾಗಿ ಹೆಚ್ಚಾಗಿದೆ ಎಂದ ಪರಮೇಶ್ವರ್ ಅವರು, ನೀರಾವರಿ, ಅಭಿವೃದ್ಧಿಗೆ ಹಣ ಒದಗಿಸಿದ್ದೇವೆ, ಗ್ಯಾರಂಟಿ ಯೋಜನೆಗಳಿಗೆ ಮಾತ್ರವೇ ಹಣ ಕೊಟ್ಟಿಲ್ಲ. ಸರ್ಕಾರದ ಬಳಿ ದುಡ್ಡಿಲ್ಲ ಎಂದು ನಾನು ಹೇಳುತ್ತೇನೆಯೇ? ನನಗೆ ಅಷ್ಟು ಪ್ರಜ್ಞೆ ಇಲ್ಲವೇ? ಎಂದು ಪ್ರಶ್ನಿಸಿದ ಪರಮೇಶ್ವರ್ ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ, ನನಗೆ ವಸ್ತುಸ್ಥಿತಿ ಗೊತ್ತಿದೆ. ನನಗಿಂತ ಚೆನ್ನಾಗಿ ಯಾರಿಗೆ ಅರ್ಥವಾಗುತ್ತದೆ ಎಂದು ಹೇಳಿದರು.






















































