
ಹೈದ್ರಾಬಾದ್: ಕಳೆದ ಕೆಲವು ದಿನಗಳಿಂದ ಬಹುಭಾಷ ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥವಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು ಇದೀಗ 2026ರ ಫೆಬ್ರವರಿಯಲ್ಲಿ ಇಬ್ಬರು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
‘ಗೀತ ಗೋವಿಂದಂ’, ‘ಡಿಯರ್ ಕಾಮ್ರೆಡ್’ ಮೂಲಕ ಬಿಗ್ ಸ್ಕ್ರೀನ್ನಲ್ಲಿ ರಶ್ಮಿಕಾ-ದೇವರಕೊಂಡ ಜೋಡಿ ಮೋಡಿ ಮಾಡಿದ್ದು ಸಿನಿಮಾಗಳ ಬಳಿಕ ಇಬ್ಬರು ಆತ್ಮೀಯವಾಗಿದ್ದರು. ಇತ್ತೀಚೆಗೆ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಆತ್ಮೀಯರ ಸಮ್ಮುಖದಲ್ಲಿ ದೇವರಕೊಂಡ ರಶ್ಮಿಕಾ ಎಂಗೇಜ್ಮೆಂಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದ್ದು 2026ರ ಫೆಬ್ರವರಿಯಲ್ಲಿ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದೀಗ ಟಾಲಿವುಡ್ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತರಾಗಿರುವ ವೇಣು ಸ್ವಾಮಿ ಅವರ ಹಳೆಯ ವಿಡಿಯೋ ಮತ್ತೆ ವೈರಲ್ ಆಗುತ್ತಿದ್ದು ಈ ವಿಡಿಯೋದಲ್ಲಿ ಅವರು ‘ಗೀತ-ಗೋವಿಂದಂ ಸಮಯದಿಂದಲೂ ರಶ್ಮಿಕಾ ದೇವರಕೊಂಡ ಲಿವಿಂಗ್ ಸಂಬಂಧದಲ್ಲಿದ್ದರು. ಅದು ಎಲ್ಲರಿಗೂ ಗೊತ್ತಿತ್ತು. ಅವರಿಬ್ಬರು ಮದುವೆಯಾಗುತ್ತಾರೆ. ಆದರೆ ಆ ಬಳಿಕ ಅವರಿಬ್ಬರಿಗೆ ವಿಚ್ಛೇದನ ಆಗುತ್ತದೆ. ಈ ವಿಷಯವನ್ನು ರಶ್ಮಿಕ ಅವರಿಗೆ ಹೇಳಿದ್ದೆ. ಅದಕ್ಕೆ ಸಿಟ್ಟು ಮಾಡಿಕೊಂಡು ರಶ್ಮಿಕ ನನ್ನ ಜೊತೆ ಮಾತನಾಡಿಸುವುದು ನಿಲ್ಲಿಸಿದರು. ರಶ್ಮಿಕ ಮಂದಣ್ಣ ವೈಯಕ್ತಿಕ ಜೀವನ ಅಷ್ಟು ಚೆನ್ನಾಗಿಲ್ಲ’ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದರು.






















































