
ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಹಿಂದೂ ಧಾರ್ಮಿಕ ಗುರು ಸ್ವಾಮಿ ಅವಿಮುಕ್ತೇಶ್ವರಾನಂದ ಅವರ ನಡುವಿನ ವಾಗ್ವಾದ ದಿನೇದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ‘ಯೋಗಿ’ ಹಾಗೂ ‘ಶಂಕರಾಚಾರ್ಯ’ ಬಿರುದುಗಳ ಬಳಕೆಯ ವಿಚಾರವಾಗಿ ಆರಂಭವಾದ ಮಾತಿನ ಚರ್ಚೆ ಇದೀಗ ರಾಜಕೀಯ ಮತ್ತು ಧಾರ್ಮಿಕ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ಈ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ್ದು, ಆದಿತ್ಯನಾಥ್ ಅವರ ಹೆಸರಿನ ಮೊದಲು ‘ಯೋಗಿ’ ಎಂಬ ಬಿರುದನ್ನು ಬಳಸಲು ಯಾರು ಅವಕಾಶ ನೀಡಿದರು ಎಂದು ಪ್ರಶ್ನಿಸಿದ್ದಾರೆ.
ಸ್ವಾಮಿ ಅವಿಮುಕ್ತೇಶ್ವರಾನಂದ ‘ಶಂಕರಾಚಾರ್ಯ’ ಬಿರುದಿನ ಬಳಕೆಯ ಕುರಿತು ಮಾತಾಡಿದ ಬಳಿಕ, ‘ಯೋಗಿ’ ಪದದ ಬಳಕೆಯನ್ನೂ ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಆದಿತ್ಯನಾಥ್, ಶಂಕರಾಚಾರ್ಯರು ಕಾನೂನಿಗಿಂತ ಮೇಲಲ್ಲ ಎಂದು ಹೇಳಿದರೆ, ಸ್ವಾಮಿಜಿ ಶಂಕರಾಚಾರ್ಯರಿಗೆ ರಾಜಕಾರಣಿಗಳ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಇನ್ನೂ, ಗಂಗಾ ತೀರದಲ್ಲಿ ನಡೆದ ಘಟನೆಗಳು ಮತ್ತು ಹಳೆಯ ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವ ಬಗ್ಗೆ ಸ್ವಾಮಿಜಿ ಆರೋಪ ಮಾಡಿದರೆ, ಅಖಿಲೇಶ್ ಯಾದವ್ “ಕೇಸರಿ ಬಟ್ಟೆ ಧರಿಸಿ ಕಿವಿ ಚುಚ್ಚಿಸಿಕೊಂಡ ಮಾತ್ರಕ್ಕೆ ಯೋಗಿಯಾಗುವುದಿಲ್ಲ” ಎಂದು ಟೀಕಿಸಿದ್ದಾರೆ.




