
ವಿಶ್ವದ ಹಲವು ಭಾಗಗಳಲ್ಲಿ ಉಂಟಾಗುತ್ತಿರುವ ಯುದ್ಧಗಳು, ರಾಜಕೀಯ ಉದ್ವಿಗ್ನತೆಗಳು ಮತ್ತು ಅಂತರಾಷ್ಟ್ರೀಯ ತಿಕ್ಕಾಟಗಳು ಆ ದೇಶಗಳ ಗಡಿಗಳಲ್ಲೇ ನಿಲ್ಲುವುದಿಲ್ಲ. ಅವು ದೂರದ ರಾಜ್ಯಗಳ ಆರ್ಥಿಕ ವ್ಯವಸ್ಥೆಯ ಮೇಲೂ ಪ್ರಭಾವ ಬೀರುತ್ತವೆ. ಕಚ್ಚಾ ತೈಲದ ಬೆಲೆ ಏರಿಕೆ, ಸಾಗಣೆ ವೆಚ್ಚ ಹೆಚ್ಚಳ, ಸರಕು ಸರಬರಾಜಿನ ವ್ಯತ್ಯಯ, ಹಣದುಬ್ಬರ ಹಾಗೂ ಷೇರುಪೇಟೆಯ ಅಸ್ಥಿರತೆಗಳಿಂದ ಆರ್ಥಿಕ ಚಟುವಟಿಕೆಗಳು ಕುಂಠಿತವಾಗಬಹುದು. ಈ ಹಿನ್ನೆಲೆ ಯುದ್ಧದ ಪರಿಸ್ಥಿತಿ ರಾಜ್ಯಗಳ ಆರ್ಥಿಕತೆ ಮತ್ತು ಜನರ ದಿನನಿತ್ಯದ ಬದುಕಿಗೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಹೂಡಿಕೆ ತಜ್ಞ ರುದ್ರಮೂರ್ತಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತ ತನ್ನ ಕಚ್ಚಾ ತೈಲದ ಸುಮಾರು ಶೇ.20ರಷ್ಟು ಇರಾನ್ನಿಂದಲೇ ಆಮದು ಮಾಡಿಕೊಳ್ಳುತ್ತದೆ. ಇರಾನ್–ಇಸ್ರೇಲ್ ನಡುವಿನ ಸಂಘರ್ಷದಿಂದ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಕಚ್ಚಾ ತೈಲದ ಪ್ರತಿ ಬ್ಯಾರೆಲ್ ಬೆಲೆ ಒಂದು ಡಾಲರ್ ಹೆಚ್ಚಾದರೂ ಭಾರತದ ಆಮದು ವೆಚ್ಚ ಸುಮಾರು 2 ಬಿಲಿಯನ್ ಡಾಲರ್ ಹೆಚ್ಚುತ್ತದೆ. ಈಗಾಗಲೇ ತೈಲದ ಬೆಲೆ ಶೇ.10ರಷ್ಟು ಏರಿಕೆಯಾಗಿದೆ. ದೇಶದ ಬಳಿ ಸುಮಾರು 70–75 ದಿನಗಳಿಗೆ ಸಾಕಾಗುವಷ್ಟು ತೈಲ ಸಂಗ್ರಹವಿದ್ದು, ಯುದ್ಧ ಮುಂದುವರಿದರೆ ಆರ್ಥಿಕ ಒತ್ತಡ ಹೆಚ್ಚುವ ಸಾಧ್ಯತೆ ಇದೆ.
ಇರಾನ್ ಕೇವಲ ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಮಾತ್ರವಲ್ಲ, ಮಿಡ್ಲ್ ಈಸ್ಟ್ ಪ್ರದೇಶದಲ್ಲಿರುವ ಹಲವು ಅಮೆರಿಕ ಸೇನಾ ನೆಲೆಗಳ ಮೇಲೂ ದಾಳಿ ನಡೆಸುತ್ತಿದೆ. ಇದರಿಂದ ಆ ಪ್ರದೇಶದಿಂದಾಗುವ ತೈಲ ಪೂರೈಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ, ಗಲ್ಫ್ ದೇಶಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರಿಂದ ಬರುತ್ತಿರುವ ಹಣಕಾಸಿನ ಹರಿವು (ರೆಮಿಟೆನ್ಸ್) ಕೂಡ ಕಡಿಮೆಯಾಗಬಹುದು. ಇದರ ಪರಿಣಾಮವಾಗಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುವ ಸಾಧ್ಯತೆ ಇದ್ದು, ವಿಮಾನಯಾನ ಕ್ಷೇತ್ರಕ್ಕೂ ಹೊಡೆತ ಬೀಳಬಹುದು. ಸಾಮಾನ್ಯವಾಗಿ ಯುದ್ಧದ ಸಂದರ್ಭಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗುವುದು ಸಾಮಾನ್ಯ. ಜಾಗತಿಕ ಅನಿಶ್ಚಿತತೆ ಹೆಚ್ಚಾದಾಗ ಹೂಡಿಕೆದಾರರು ಈ ಲೋಹಗಳನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ.
ಈಗಾಗಲೇ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಕೆ ಕಂಡುಬಂದಿದ್ದು, ಯುದ್ಧದ ಪರಿಸ್ಥಿತಿ ಮುಂದುವರಿದರೆ ಇನ್ನಷ್ಟು ಏರಿಕೆ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು 1.8 ಲಕ್ಷದಿಂದ 2 ಲಕ್ಷ ರೂಪಾಯಿವರೆಗೆ ಹಾಗೂ ಬೆಳ್ಳಿ ಕೆ.ಜಿಗೆ ಸುಮಾರು 3.5 ಲಕ್ಷ ರೂಪಾಯಿವರೆಗೆ ಏರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.






