
ವಿಧಾನಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಈ ಹಿಂದೆ ರಾಹುಕಾಲ, ಯಮಗಂಡ ಕಾಲದಲ್ಲೂ ಬಜೆಟ್ ಮಂಡಿಸಿದ್ದೇನೆ. ನನಗೆ ಎಲ್ಲಾ ಕಾಲವೂ ಒಂದೇ ಆಗಿದ್ದು, ಮೂಢನಂಬಿಕೆಗಳನ್ನು ನಂಬುವುದಿಲ್ಲ. ಯುಗಾದಿ ಅಥವಾ ಶಿವರಾತ್ರಿ ದಿನಗಳಲ್ಲಿಯೂ ಮಾಂಸಾಹಾರ ಸೇವಿಸುವುದಾಗಿ ಹೇಳಿದ ಅವರು, ದೇವರು ದೇವಸ್ಥಾನದಲ್ಲಿ ಮಾತ್ರವಲ್ಲದೆ ಎಲ್ಲೆಡೆ ಇದ್ದಾನೆ ಎಂಬ ನಂಬಿಕೆ ಹೊಂದಿದ್ದಾಗಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ರಾಹುಕಾಲದ ನಂತರ ಬಜೆಟ್ ಮಂಡಿಸಿರುವುದು ಅಧಿಕಾರಿಗಳು ಮತ್ತು ಮನೆಯವರ ಸಲಹೆಯಿಂದ ಮಾತ್ರ ಎಂದು ಸ್ಪಷ್ಟಪಡಿಸಿದ ಅವರು ಯಾರೇ ಮುಖ್ಯಮಂತ್ರಿ ಆದರೂ ಸಂತೋಷವೇ ಎಂದು ಹೇಳಿ, ಹಲವು ನಾಯಕರ ಹೆಸರುಗಳನ್ನು ಉಲ್ಲೇಖಿಸಿದರು.
ಈ ವೇಳೆ ಆರ್. ಅಶೋಕ್ ಹಾಗಾದರೆ, ಡಿ.ಕೆ.ಶಿವಕುಮಾರ್ ಸಿಎಂ ಆದರೂ ಸಂತೋಷ ಎಂದು ಹೇಳಿ ಎಂದು ಕಿಚಾಯಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎಲ್ಲಾ 224 ಶಾಸಕರಿಗೂ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ಆದರೆ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ತಿಳಿಸಿ, ಹೈಕಮಾಂಡ್ ತೀರ್ಮಾನವಾಗುವವರೆಗೆ ತಾನೇ ಮುಖ್ಯಮಂತ್ರಿ ಎಂದು ಪುನರುಚ್ಚರಿಸಿದರು.






















































