
ಹೆಬ್ರಿ :ಮುದ್ರಾಡಿ ಸುಬ್ಬಣ್ಣಕಟ್ಟೆ ಸೇವಾ ಸಂಗಮ ಶಿಶುಮಂದಿರದ ರಜತಮಹೋತ್ಸವ ಕಾರ್ಯಕ್ರಮವು ಶಿಶುಮಂದಿರ ರಂಗ ಮಂದಿರದಲ್ಲಿ ಎ. 4 ರಂದು ನಡೆಯಿತು.
ಶಿಶುಮಂದಿರದ ಪುಟಾಣಿ ಗಳಿಂದ ನೃತ್ಯ ಅಭಿನಯ, ಬಾಲಗೋಕುಲ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದ ಬಳಿಕ ಭಾರತಮಾತೆ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸಿ ಅತಿಥಿಗಳು ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲು ಆಗಮಿಸಿದ ಸಂವೇದನ ಫೌಂಡೇಶನ್ ಉಡುಪಿ ಇದರ ಅಧ್ಯಕ್ಷರಾದ ಪ್ರಕಾಶ್ ಮಲ್ಪೆ ಮಾತನಾಡಿ ಬಾಲ್ಯದಿಂದಲೇ ಮಕ್ಕಳು ಸಂಸ್ಕಾರವನ್ನು ಮತ್ತು ಜೀವನ ಪಾಠವನ್ನು ಕಲಿಯಬೇಕೆಂಬ ದೃಷ್ಟಿಯಿಂದ ಹಾಗೂ ಭಾರತೀಯ ಶಿಕ್ಷಣ ಪದ್ಧತಿಯನ್ನು ಉಳಿಸಬೇಕೆಂಬ ಉದ್ದೇಶದಿಂದ ಶಿಶುಮಂದಿರಗಳು ಪ್ರಾರಂಭವಾಯಿತು.ಶ್ರದ್ದೆ ಯಿಂದ ಮಕ್ಕಳು ಕಲಿತಾಗ ಮಾತ್ರ ಜೇವನ ಪರಿಪೂರ್ಣವಾಗಲು ಸಾಧ್ಯ.ಇಲ್ಲಿ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ತಿಳಿಸುವ ಶಿಕ್ಷಣ ನೀಡಲಾಗುತ್ತಿದೆ.ಮುಂದಕ್ಕೆ ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರಿಗಿದೆ ಎಂದರು.
ಕರ್ನಾಟಕ ಸರಕಾರ ಶ್ರೀ ನಾರಾಯಣಗುರು ಅಭಿವೃದ್ದಿ ನಿಗಮದ ರಾಜ್ಯಾಧ್ಯಕ್ಷರಾದ ಮಂಜುನಾಥ ಪೂಜಾರಿಯವರು ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಬೆಳೆಸಿ ಕೊಂಡು ಹೋದಾಗ ನೆಮ್ಮದಿಯ ಬದುಕು ನಮ್ಮದಾಗುತ್ತದೆ. ಈ ನಿಟ್ಟಿನಲ್ಲಿ 25 ವರ್ಷಗಳಿಂದ ಶಿಶುಮಂದಿರದ ಮೂಲಕ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಯಶಸ್ವಿಯಾದ ಶಿಶುಮಂದಿರದ ಸ್ಥಾಪಕರಾದ ಶ್ರೀಧರ ನಾಯಕ್ ದಂಪತಿಗಳನ್ನು ಅಭಿನಂದಿಸುತ್ತೇನೆ ಎಂದರು.
ನಮ್ಮೀ ಈ ಶಿಶುಮಂದಿರವು ಉತ್ತರೋತ್ತರ ಅಭಿವೃದ್ಧಿಹೊಂದಲು ಪೂರಕವಾದ ವ್ಯವಸ್ಥೆಗಳನ್ನು, ಸಹಕಾರಗಳನ್ನು ನಾವೆಲ್ಲ ಕೊಡೋಣ ಮತ್ತು ಸಂಸ್ಕಾರಯುತ ಶಿಕ್ಷಣ ಕೇಂದ್ರವಾಗಿ ಇನ್ನಷ್ಟು ಭವಿಷ್ಯದಲ್ಲಿ ಮೆರೆಯಲಿ ಎಂದು ಸಭೆಯ ಅಧ್ಯಕ್ಷತೆ ವಹಿಸಿದ ಸೇವಾ ಸಂಗಮ ಶಿಶುಮಂದಿರದ ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀಧರ ಹೆಬ್ಬಾರ್ ಕಾಪೋಳಿ ಹೇಳಿದರು.
ಉದ್ಯಮಿ ಉದಯ ಹೆಗ್ಡೆ ಕೊಳಂಬೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಶ್ಲೋಕ, ಶುಭಾಷಿತ, ಸರ್ವಜ್ಞನ ವಚನಗಳು, ಕಬೀರನ ದೋಹೆ, ಮಂಕು ತಿಮ್ಮನ ಕಗ್ಗ, ಅಮೃತ ವಚನ, ಅಮೃತ ಬಿಂದು, ಭಗವದ್ಗೀತೆ ಮೊದಲಾದ ನುಡಿ ಮುತ್ತು ಗಳನ್ನು ಪುಟಾಣಿಗಳು ಪಠಿಸಿದರು.
ಮಾತಾಜಿ ಸುಮತಿ ವಾರ್ಷಿಕ ವರದಿ ವಾಚಿಸಿದರು.
ಧನ ಸಹಾಯ ನೀಡಿದ ಮಹಾಪೋಷಕರನ್ನು ಸನ್ಮಾನಿಸಲಾಯಿತು. ಮುದ್ರಾಡಿ ಚಿಗುರು ಸಂಸ್ಥೆಯಿಂದ ಶಿಶುಮಂದಿರದ ಸ್ಥಾಪಕರಾದ ಶ್ರೀಧರ ನಾಯಕ್ ದಂಪತಿಗಳನ್ನು ಸನ್ಮಾನಿಸಲಾಯಿತು. ಆಟೋಟ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪುಟಾಣಿಗಳನ್ನು,ಬಾಲ ಗೋಕುಲದ ಮಕ್ಕಳನ್ನು ಮಾತೆಯರನ್ನು ಬಹುಮಾನ ನೀಡಿ ಪುರಸ್ಕರಿಸಲಾಯಿತು.25 ವರ್ಷಗಳಲ್ಲಿ ಶಿಶು ಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಹನೀಯರನ್ನು ಹಾಗೂ ಸೇವೆ ಸಲ್ಲಿಸಿದ ಮಾತಾಜಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹೆಬ್ರಿ ಅಮೃತ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಂ. ರವಿ ರಾವ್,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕರಾದ ಗಣಪತಿ ಎಂ. ಶಿಶು ಮಂದಿರ ವ್ಯವಸ್ಥಾಪಕಿ ಶಿಲ್ಪಾ ಎಸ್. ನಾಯಕ್, ನಿವೃತ ಅಧ್ಯಾಪಕರಾದ ಗಣಪತಿ ಪೈ, ಮಾಜಿ ಅಧ್ಯಕ್ಷರಾದ ಗಿಲ್ಲಾಳಿ ಪದ್ಮನಾಭ ಆಚಾರ್ಯ ಉಪಸ್ಥಿತರಿದ್ದರು.
ಶ್ರೀಧರ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಶು ಮಂದಿರ ಅಧ್ಯಕ್ಷರಾದ ಅಶೋಕ ಕುಮಾರ್ ಶೆಟ್ಟಿಯವರು ಸ್ವಾಗತಿಸಿದರು.ದೀಪಾ ಶೆಟ್ಟಿ ಹಾಗೂ ಪೂರ್ವಿ ಪೈ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.ಬಲ್ಲಾಡಿ ಚಂದ್ರಶೇಖರ ಭಟ್, ಸುನೀತ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಡಾ. ಶ್ರೇಯಸ್ ನಾಯಕ್ ವಂದಿಸಿದರು. ಬಳಿಕ ಮಾತೆಯರಿಂದ ನೃತ್ಯ, ಭರತನಾಟ್ಯ, ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ವೇತಾ ಹೆಬ್ಬಾರ್, ಶಾಂತಾ ದಿನೇಶ್ ಪೂಜಾರಿ, ಜಯಪ್ರಭಾ ನಿರ್ವಹಿಸಿದರು.









