30.4 C
Udupi
Sunday, January 25, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 417

ಭರತೇಶ ಶೆಟ್ಟಿ , ಎಕ್ಕಾರ್

ಸಂಚಿಕೆ ೪೨೭ ಮಹಾಭಾರತ

ಕೃಷ್ಣ ತನ್ನ ಕೈಗೆ ಕರ್ಣನ ಶರಾಘಾತದಿಂದ ಆದ ಗಾಯವನ್ನು ಒರೆಸಿಕೊಳ್ಳುತ್ತಿದ್ದಾನೆ. ಕರ್ಣನತ್ತ ನೋಡಿದಾಗ, ಆತ ರಥದಿಂದ ಕೆಳಗಿಳಿದು ನಿರಾಯುಧನಾಗಿ ನಿಂತು, ರಥದ ಚಕ್ರವನ್ನೆತ್ತಲು ಒದ್ದಾಡುತ್ತಿದ್ದಾನೆ. ಅರ್ಜುನ ಎದ್ದು ನಿಂತುದನ್ನು ನೋಡಿದ ಕರ್ಣ “ಹೇ ಅರ್ಜುನಾ! ನೀನು ಶ್ರೇಷ್ಟ ಧನುರ್ಧರನಾಗಿರುವೆ. ನಿನಗೆ ನಾನು ಹೇಳಿ ತಿಳಿಯಬೇಕಾದುದೇನು ಉಳಿದಿಲ್ಲ. ಆದರೂ ನನ್ನ ಮನಸ್ಸಿನ ಸಮಾಧಾನಕ್ಕಾಗಿ ನೆನಪಿಸುತ್ತೇನೆ. ಮುಡಿಯು ಬಿಚ್ಚಿ ಹೋಗಿರುವವರನ್ನು, ಯುದ್ದದಿಂದ ಹೆದರಿ ಓಡಿ ಹೋಗುವವರನ್ನು, ಶರಣಾಗತರಾದವರನ್ನು, ಶಸ್ತ್ರ ಸಂನ್ಯಾಸ ಮಾಡಿದವರನ್ನು, ಜೀವದಾನ ಬೇಡುತ್ತಿರುವವರನ್ನು, ಕವಚ ರಹಿತನಾದವರನ್ನು, ಬಾಣಗಳಿಲ್ಲದವರನ್ನು, ಆಯುಧ ಕಳಕೊಂಡವರನ್ನು, ವ್ರತ, ಸೇವಾ ನಿರತರಾದವರನ್ನು ಶಿಷ್ಟರಾದ ವೀರರು ಶಸ್ತ್ರಗಳಿಂದ ಪ್ರಹರಿಸುವುದಿಲ್ಲ. ಅರ್ಜುನಾ! ನೀನು ಅದ್ವಿತೀಯ ಶೂರ. ಯುದ್ಧಧರ್ಮ ಏನೆಂದು ನಿನ್ನಷ್ಟು ಚೆನ್ನಾಗಿ ತಿಳಿದವರು ಬಹಳ ಕಡಿಮೆ. ಎಲ್ಲಾ ದಿವ್ಯಾಸ್ತ್ರಗಳನ್ನೂ ತಿಳಿದವನಾಗಿರುವೆ. ಶ್ರೇಷ್ಟನಾದ ನಿನ್ನಲ್ಲಿ ಈ ಸಮಯ ವಿರಥನಾದ ನಾನು ಪ್ರಾರ್ಥಿಸುತ್ತಿದ್ದೇನೆ. ನನ್ನ ರಥದ ಈ ಚಕ್ರವನ್ನು ಮೇಲೆತ್ತುವವರೆಗೆ ಅವಕಾಶ ನೀಡು. ರಥಾಂಗದಿಂದ ವಿಹೀನನಾದ ನನ್ನನ್ನು ಸಂಹರಿಸಿದರೆ ನಿನಗೆ ಶಾಶ್ವತ ಅಪಕೀರ್ತಿ ಅಂಟಿಕೊಂಡೀತು. ಹಾಗಾಗಿ ತುಸು ಕಾಲಾವಕಾಶ ನೀಡು. ನಾನು ಈ ರೀತಿ ವಿನಂತಿಸುವಲ್ಲಿ ಭಯಭೀತನಾಗಿದ್ದೇನೆಂದು ತಿಳಿಯಬೇಡ. ವಾಸುದೇವ ಕೃಷ್ಣನಿಗಾಗಲಿ ನಿನಗಾಗಲಿ ಹೆದರಿ ಈ ರೀತಿ ಕೇಳಿಕೊಳ್ಳುತ್ತಿಲ್ಲ. ನಾನೂ ಯೋಧನೇ ಆಗಿದ್ದು ಕ್ಷಾತ್ರ ಧರ್ಮ ಬಲ್ಲವನೂ, ಧೈರ್ಯವಂತನೂ ಆಗಿದ್ದೇನೆ. ನೀನೂ ಮಹಾಕ್ಷತ್ರಿಯ. ನನಗೆ ಅವಕಾಶ ನೀಡಿದೆ ಎಂದಾದರೆ ನಿನ್ನ ಕೀರ್ತಿ ಇನ್ನಷ್ಟು ವೃದ್ಧಿಸಲಿದೆ. ಯುದ್ದ ಮಾಡದೆ ಓಡಿ ಹೋಗುವವನಲ್ಲ. ಒಮ್ಮೆ ರಥ ಚಕ್ರ ಎತ್ತಿ ಸ್ಥಿತಗೊಳಿಸಿ ಆ ಬಳಿಕ ನಿನ್ನಲ್ಲಿ ಸಮಬಲದ ಹೋರಾಟ ಮಾಡಲಿದ್ದೇನೆ” ಎಂದು ವಿನಂತಿ ಮಾಡಿದನು.

ಕರ್ಣನ ಮಾತುಗಳನ್ನು ಕೇಳಿಕೊಂಡಾಗ ಅರ್ಜುನ ಒಪ್ಪಿದವನಂತೆ ಕಂಡನು. ಆದರೆ ಕೃಷ್ಣ “ಹೇ ಕರ್ಣಾ! ನಿನಗೆ ಧರ್ಮ ತಿಳಿದಿದೆ. ನೀನು ಜ್ಞಾನಿಯೇ ಆಗಿದ್ದರೂ ಅಂತಹ ಜ್ಞಾನವನ್ನು ಅಳವಡಿಸಿಕೊಳ್ಳದೆ ಪಾಪಿಯಾಗಿರುವೆ. ಈಗ ನಿನಗೆ ಧರ್ಮದ ಪರ ವಹಿಸಿ ಮಾತನಾಡುವ ಯೋಗ್ಯತೆ ಇದೆಯೊ? ನೀನು ಪಾಲಿಸದ ಧರ್ಮವನ್ನು ಅನ್ಯರಿಂದ ಅಪೇಕ್ಷಿಸುವ ನ್ಯಾಯ ಹೇಗೆ ಮಾಡುತ್ತಿರುವೆ? ದುಷ್ಟ ಚತುಷ್ಟಯರೆಂದು ಪ್ರಾಜ್ಞರಿಂದ ಕರೆಸಿಕೊಂಡ ದುರ್ಯೋಧನ, ದುಶ್ಯಾಸನ, ಶಕುನಿ ಮತ್ತು ನೀನು ಮಾಡಿರುವ ಅಧರ್ಮಗಳೇನು ಲೆಕ್ಕದೊಳಗಿದೆಯೆ? ಈಗ ಯಾವ ಅಧಿಕಾರದಿಂದ ನೀನು ತಿಳಿದೂ ಪಾಲಿಸದ ಧರ್ಮವನ್ನು ಮಾತನಾಡುತ್ತಿರುವೆ? ಆ ನೈತಿಕತೆ ನಿನಗಿದೆಯೆ?” ಎಂದು ಪ್ರಶ್ನಿಸಿದಮು. ಕರ್ಣನಿಗೆ ತನ್ನಿಂದಾದ ಅಪರಾಧಗಳನ್ನು ನೆನೆದು ದುಃಖ ಉಮ್ಮಳಿಸಿ ಬರುತ್ತಿದೆ. ರಥ ಚಕ್ರ ಎತ್ತುವಾಗ ಒಂದೆಡೆ ಮೈ ಬೆವತು ಬೆವರಿಳಿಯುತ್ತಿದ್ದರೆ, ಕಂಗಳಿಂದ ಕಂಬನಿ ಪಶ್ಚಾತ್ತಾಪದ ಪ್ರತೀಕ ಎಂಬಂತೆ ಇಳಿಯುತ್ತಿದೆ.

ಅರ್ಜುನನೂ ಮನಮರುಗಿ ರಥ ಪೀಠದಲ್ಲಿ ವಿಶ್ರಾಂತನಾಗಿ ಕುಳಿತುಕೊಳ್ಳಲು ಬಯಸಿದಾಗ ಶ್ರೀ ಕೃಷ್ಣ ಪರಮಾತ್ಮ “ಹೇ ಅರ್ಜುನಾ! ನೀನೇನು ಮಾಡುತ್ತಿರುವೆ? ಶತ್ರು, ಅಗ್ನಿ, ರೋಗ ಈ ಮೂರನ್ನು ಯಾವತ್ತೂ ಕಡೆಗಣಿಸಬಾರದು. ಬಲ್ಲವರು ಈ ಮೂರರ ಬಗ್ಗೆ ಅತಿ ಜಾಗರೂಕರಾಗಿದ್ದು, ಕರುಣೆ ತೋರದೆ ದುರ್ಬಲರಾಗಿದ್ದಾಗಲೆ ಅಥವಾ ಆರಂಭಿಕ ಅವಕಾಶದಲ್ಲಿ ನಾಶಗೊಳಿಸಬೇಕು. ಬೆಳೆಯಲು ಅವಕಾಶ ನೀಡಿದರೆ, ಅದು ನಿಷ್ಕಾರುಣ್ಯದಿಂದ ಬೆಳೆಸಿದವನನ್ನು ನಾಶ ಮಾಡುತ್ತದೆ. ಇದು ದುರ್ಬಲ ಶತ್ರುವಿನ ವಿಚಾರವಾದರೆ, ಪ್ರಬಲ ಶತ್ರು ತೀರಾ ಕಡಿಮೆ ಅವಕಾಶ ಒದಗಿಸುತ್ತಾನೆ, ಅಂತಹ ಸಮಯ ಸದುಪಯೋಗ ಪಡಿಸಿಕೊಳ್ಳುವುದು ಜಾಣತನ. ಇಂದ್ರ ನಮುಚಿ ಎಂಬ ರಾಕ್ಷಸನನ್ನು ಕೊಂದ ರೀತಿ ನೀನೀಗ ಕರ್ಣನ ವಧೆಗೈಯಬೇಕು.

ಇಂದ್ರ ವೃತ್ರಾಸುರನನ್ನು ಸಂಹರಿಸಿದ ಬಳಿಕದ ಕಥೆ ಇದು. ನಮುಚಿ ಎನ್ನುವ ಅಸುರನೊಬ್ಬ ಪ್ರಬಲನಾಗಿದ್ದ ಈತ ಸದಾಕಾಲ ಇಂದ್ರನಿಗೆ ಉಪಟಳ ಕೊಡುವುದು ಮತ್ತು ನಿರಂತರ ಯುದ್ಧಕ್ಕೆ ಬರುವುದನ್ನೇ ತನ್ನ ಕಾಯಕ ಮಾಡಿಕೊಂಡಿದ್ದ. ಇಂದ್ರನೊಡನೆ ಈತನ ಯುದ್ಧ ಕೊನೆಯಾಗುತ್ತಲೆ ಇರಲಿಲ್ಲ. ಇಂದ್ರನ ಯಾವ ವಿಧವಾದ ಆಯುಧಗಳಿಂದಲೂ ಸೋಲುತ್ತಿರಲಿಲ್ಲ. ಹೀಗಿರಲು ಯಾವುದೇ ಅಸ್ತ್ರಕ್ಕೂ ಮಣಿಯದ ಈ ರಾಕ್ಷಸನನ್ನು ತನ್ನ ಶರೀರ ಬಲದಿಂದ ವಧಿಸಬೇಕೆಂದು ಇಂದ್ರ ಮಲ್ಲ ಯುದ್ಧವನ್ನು ಆರಂಭಿಸಿದ. ಆಗಲೂ ನಮುಚಿಯ ಹಿಡಿತ ಬಲವಾಗುತ್ತಾ ಸಾಗಿತು ನಮುಚಿಯಿಂದ ಬಿಡಿಸಿ ಕೊಳ್ಳಲು ಅಸಾಧ್ಯವಾಗುತ್ತಾ ಬಂತು. ಆಗ ನಮುಚಿಯು ಇಂದ್ರನನ್ನು ಕುರಿತು ತಾನು ಹೇಳಿದಂತೆ ಕೇಳುವುದಾದರೆ ಮಾತ್ರ ಬಿಡುವೆನು ಎಂದು ಹೇಳುತ್ತಾನೆ. ಅದಕ್ಕೆ ಇಂದ್ರನು ಒಪ್ಪಿಕೊಂಡು ತನ್ನನ್ನು ಬಿಡುವಂತೆ ಕೇಳಿಕೊಳ್ಳುತ್ತಾನೆ. ಆ ಬಳಿಕ ಇಬ್ಬರಲ್ಲೂ ಒಂದು ಒಪ್ಪಂದವಾಗುತ್ತದೆ. “ಇಂದ್ರ ! ನೀನು ಪುನಃ ಏನಾದರು ಉಪಾಯ ಹೂಡಿ ನನ್ನನ್ನು ಕೊಲ್ಲಬೇಕೆಂದು ಬರಬಹುದು, ಆದರೆ ನನ್ನನ್ನು ಕೊಲ್ಲಬೇಕೆನ್ನುವ ಉದ್ದೇಶ ಈಡೇರಬೇಕಿದ್ದರೆ ನಿನ್ನ ಆಯುಧ ಹಸಿಯಾಗಿರಕೂಡದು ಒಣಗಿರಕೂಡದು. ಹಗಲಿನಲ್ಲಿಯೂ ಹಾಗೂ ರಾತ್ರಿಯಲ್ಲಿಯೂ ನನ್ನನ್ನು ಕೊಲ್ಲಕೂಡದು. ಈ ನಿಯಮಗಳಿಗೆ ನೀನು ಒಪ್ಪುವೆಯಾದರೆ ಬಿಡುತ್ತೇನೆ” ಎನ್ನುತ್ತಾನೆ. ಕೂಡಲೆ ಇಂದ್ರ ಒಪ್ಪಿಕೊಳ್ಳುತ್ತಾನೆ. ತಕ್ಷಣ ನಮುಚಿ ಇಂದ್ರನನ್ನು ಬಿಡುತ್ತಾನೆ. ಹೀಗೆ ಕೆಲವು ಸಮಯ ಕಳೆಯುತ್ತದೆ. ಇಂದ್ರನಿಗೆ ಅವನನ್ನು ಹೇಗೆ ಮುಗಿಸ ಬೇಕು ಎನ್ನುವ ಚಿಂತೆ ಕಾಡತೊಡಗುತ್ತದೆ. ಹೀಗೆ ಆಲೋಚಿಸುತ್ತಿರುವಾಗ ಇಂದ್ರನಿಗೆ ತನ್ನೆದುರಿಗೆ ಇದ್ದ ಸಮುದ್ರದ ಅಲೆಗಳು ಕಾಣಿಸುತ್ತದೆ. ಇದೇ ಸರಿಯಾದ ಮಾರ್ಗ, ಸಮುದ್ರದ ನೊರೆ ಹಸಿಯಾಗಿ ನೀರನ್ನು ಹೊಂದಿಲ್ಲ, ಅತ್ತ ಒಣಗಿಯೂ ಇಲ್ಲ ಎಂದು ತರ್ಕಿಸಿ ಅದನ್ನು ಆಯುಧವನ್ನಾಗಿ ಪರಿವರ್ತಿಸಿಕೊಂಡನು. ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಉಷಾ ಕಾಲದಲ್ಲಿ ಅಂದರೆ ಸೂರ್ಯೋದಯವೂ ಆಗಿಲ್ಲ, ಹಾಗೆಂದು ರಾತ್ರಿಯಂತೂ ಅಲ್ಲದ ಕಾಲದಲ್ಲಿ ನಮುಚಿಯನ್ನು ಕೊಲ್ಲಲು ಹೋಗುತ್ತಾನೆ. ತನ್ನ ವಿಶೇಷ ಆಯುಧದಿಂದ ಆ ಯುದ್ಧದಲ್ಲಿ ನಮುಚಿಯನ್ನು ಕತ್ತರಿಸುತ್ತಾನೆ. ಆಗ ನಮುಚಿ ಸಾಯದೆ ಇಂದ್ರನಿಗೆ ಮಿತ್ರದ್ರೋಹಿ ಎಂದು ಅಟ್ಟಿಸಿಕೊಂಡು ಬರುತ್ತಾನೆ. ಇಂದ್ರ ಭಯಗ್ರಸ್ತನಾಗಿ ಓಡಬೇಕಾಯಿತು. ಆ ಸಮಯ ಅಪಾಮಾರ್ಗವೆನ್ನುವ ಸಸ್ಯವನ್ನು ಸೃಷ್ಟಿಸಿ ಅದರ ಸಮಿತ್ತಿನಿಂದ ತನ್ನ ವೀರ್ಯವೃದ್ಧಿಗಾಗಿ ಹೋಮಮಾಡಿ ಬಲ ಹೆಚ್ಚಿಸಿಕೊಂಡು ನಮುಚಿಯನ್ನು ಸಂಹರಿಸುತ್ತಾನೆ.

ಈ ವೃತ್ತಾಂತವನ್ನು ಅವಲೋಕಿಸು. ವೈರಿ ನೀಡುವ ಅವಕಾಶ ಬಳಸಿ, ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳುವುದು ಯೋಗ್ಯ ಮಾರ್ಗ. ಅಧರ್ಮಿಗಳನ್ನು ಕೊಲ್ಲುವುದರಿಂದ ಲೋಕಕ್ಕೆ ಕ್ಷೇಮ ಹೊರತು ಅಪಕಾರವಾಗದು. ನಿನಗೆ ಇನ್ನೂ ಸಮಾಧಾನವಾಗದಿದ್ದರೆ ಇನ್ನೂ ಕೆಲವು ವಿಚಾರ ಸ್ಮರಿಸುವೆ, ನೀನು ವಿವೇಚಿಸುವವನಾಗು” ಎಂದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page