ಭಾಗ 152
ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೧೫೩ ಮಹಾಭಾರತ
ಶ್ರೀ ಕೃಷ್ಣನು ವೈಭವದ ಸ್ವಾಗತದೊಂದಿಗೆ ಇಂದ್ರಪ್ರಸ್ಥಕ್ಕೆ ಬಂದು ಕುಂತಿದೇವಿಯನ್ನು ಕಂಡು “ಅತ್ತೆ ಇನ್ನು ರಾಜಸೂಯಕ್ಕೆ ಯಾವ ತೊಂದರೆಯೂ ಇಲ್ಲ. ಮಹಾ ಕಂಟಕವಾಗಿದ್ದ ಮಗಧದ ಮೇಲೆ ದಿಗ್ವಿಜಯ ಸಾಧಿಸಿಯಾಯಿತು. ನಿಮ್ಮ ಮಕ್ಕಳು ಇನ್ನುಳಿದ ಆರ್ಯಾವರ್ತದ ರಾಜರುಗಳ ಹೆಡೆಮುರಿ ಕಟ್ಟುವಲ್ಲಿ ಸಫಲರಾಗುವರು” ಎಂದು ಹೇಳಿ ಮತ್ತೆರಡು ದಿನ ಇಂದ್ರಪ್ರಸ್ಥದಲ್ಲೇ ಉಳಿದು ಮುಂದಿನ ನಡೆಯ ಸೂಕ್ಷ್ಮ ವಿಚಾರಗಳನ್ನು ಚರ್ಚಿಸಿ, ಹೇಳಬೇಕಾದ ವಿಚಾರಗಳನ್ನು ಹೇಳಿ ದ್ವಾರಕೆಗೆ ಮಾಗಧನ ದಿವ್ಯ ರಥವೇರಿ ಹೊರಟನು.
ಶ್ರೀ ಕೃಷ್ಣನು ದ್ವಾರಕೆಗೆ ಹೋದ ಬಳಿಕ ಧರ್ಮರಾಯನು ಧೌಮ್ಯರ ಜೊತೆ ತಮ್ಮಂದಿರನ್ನು ಜೊತೆಯಾಗಿಸಿ ರಾಜಸೂಯದ ಮುಖ್ಯ ಭಾಗ ದಿಗ್ವಿಜಯದ ಕುರಿತು ಸಮಾಲೋಚನೆಯಲ್ಲಿ ತೊಡಗಿದರು. ಸಮಗ್ರ ಆರ್ಯಾವರ್ತವನ್ನು ಗೆದ್ದು ಶೀಘ್ರವಾಗಿ ಕಪ್ಪ ಕಾಣಿಕೆ ಸಂಗ್ರಹಿಸಿ ತರುವುದಕ್ಕಾಗಿ ಪಾಂಡವರು ಒಬ್ಬೊಬ್ಬರು ಸೇನಾಸಹಿತರಾಗಿ ಒಂದೊಂದು ದಿಕ್ಕಿಗೆ ಹೊರಡುವುದೆಂದು ತೀರ್ಮಾನಿಸಿ ಗೆಲ್ಲಬೇಕಾದ ರಾಜ್ಯಗಳನ್ನು ಪಟ್ಟಿಯಾಗಿಸಿ ಮಾರ್ಗಸೂಚಿಯನ್ನೂ ಸಿದ್ದಪಡಿಸಿದರು. ಅದರಂತೆ ಅರ್ಜುನನು ಉತ್ತರ ದಿಕ್ಕಿಗೂ, ಭೀಮಸೇನ ಪೂರ್ವ ದಿಕ್ಕಿಗೂ, ನಕುಲನು ಪಶ್ಚಿಮಕ್ಕೂ, ಸಹದೇವನು ದಕ್ಷಿಣಕ್ಕೂ ಹೋಗುವುದೆಂದು ತೀರ್ಮಾನವಾಯಿತು. ಧರ್ಮರಾಯನಿಗೂ ಕೂಡಿಬರುವ ಶುಭ ಮುಹೂರ್ತವನ್ನು ತಾಳೆಹಾಕಿ ನೋಡಿ ನಾಲ್ವರು ನಾಲ್ಕು ದಿಕ್ಕಿನ ಚೈತ್ರಯಾತ್ರೆಗೆ ಧರ್ಮರಾಜನ ಹಿರಿಯರ ಅಪ್ಪಣೆ ಆಶೀರ್ವಾದ ಪಡೆದು ಹೊರಟರು.
ಉತ್ತರ ದಿಕ್ಕಿಗೆ ಹೊರಟ ಅರ್ಜುನನದ್ದು ಸುದೀರ್ಘ ಹಾದಿಯ ವಿಜಯ ಯಾತ್ರೆ. ಕಳಿಂಗ, ಸಾಲ್ವ, ಕಟ, ಶಾಕಲ ದ್ವೀಪ, ಪ್ರಾಗ್ಜೋತಿಷ ಪುರಗಳನ್ನು ಗೆದ್ದು ಅಮಿತ ಕಪ್ಪ ಕಾಣಿಕೆಗಳನ್ನು ಇಂದ್ರಪ್ರಸ್ಥಕ್ಕೆ ಕಳುಹಿಸಿದನು. ಮುಂದುವರೆಸಿ ಅಂತರ್ಗಿರಿ, ಉಪಗಿರಿ, ಉಲೂಕ, ಮೋದಾಪುರ, ವಾಮದೇವ, ಸುಧಾಮ, ಸುಮಂಗಲ, ಪಂಚಗಣ, ದೇವಪ್ರಸ್ಥ, ಕಾತ್ಮೀರ, ಮೋಹಿತ, ತ್ರಿಗರ್ತ, ದಾರ್ವ, ಕೋಕನ, ಅಭಿಸಾರಿ, ಉರಗಾಪುರಿ, ಸಿಂಹಪುರ, ಸುಂಹ, ಚೋಳ, ಲೋಹರು, ಬಾಹ್ಲೀಕ, ದರದ, ಕಾಂಭೋಜ, ಅರಣ್ಯವಾಸಿಗಳಾದ ದಸ್ಯುಗಳು, ಋಷಿಕರು, ನಿಷ್ಕಟಕ ಹಿಮವಂತ, ಹಾಟಕಗಳನ್ನೆಲ್ಲಾ ಗೆಲ್ಲುತ್ತಾ ಮುಂದುವರೆದನು. ಗಂಧರ್ವ, ಕಿಂಪುರುಷ, ಹೇಮಕೂಟ, ತುಮಾಲ, ಇಳಾವರ್ತ, ಕಷರು, ಝಷರು, ಸದೌತ್ಯರು, ಪ್ರಭುಸರು, ದೀಪ್ರವೇಣಿಕರು, ಪಶುಪರು, ಕುಳಿಂದರು, ಕಂಕಣರು, ರಮ್ಯಕವರ್ಷ, ಹಿರಣ್ಯಕ ಪ್ರದೇಶಗಳ ಮೇಲೆ ದಿಗ್ವಿಜಯ ಸಾಧಿಸಿದನು.
ಮುಂದೊತ್ತಿ ಕುರುದೇಶಕ್ಕೆ ಬಂದಾಗ ದ್ವಾರಪಾಲಕರು ತಡೆದು ಅಯ್ಯಾ ನೀನ್ಯಾರೆಂದು ತಿಳಿಸಿ ಮುಂದೆ ಹೋಗಬೇಕು ಎಂದರು. ಅರ್ಜುನ ರಾಜಸೂಯ ಯಾಗದ ವಿಚಾರ ತಿಳಿಸಿ, ಸಂಪೂರ್ಣ ಪರಿಚಯ, ವಿಷಯಗಳನ್ನೂ ವಿವರಿಸಿ ಹೇಳಿದನು. ಅರ್ಜುನನು ಕೃಷ್ಣ ಸಖನೆಂಬ ಸಂಗತಿ ತಿಳಿದು ಅನೇಕ ವಿಧವಾದ ಧನ, ಕನಕ, ವಸ್ತು ವಾಹನಗಳನ್ನಿತ್ತು ಕಳುಹಿಸಿಕೊಟ್ಟರು. ಅರ್ಜುನ ಅಮಿತವಾದ ಕಪ್ಪ ಕಾಣಿಕೆ, ಧನ ಸಂಪತ್ತಿನ ಜೊತೆ ಜಯವನ್ನೂ ಸಾಧಿಸಿ ಧನಂಜಯ ನಾಮಕನಾಗಿ ಪ್ರಸಿದ್ಧನಾಗಿ ಇಂದ್ರಪ್ರಸ್ಥಕ್ಕೆ ಮರಳಿದನು.
ಪೂರ್ವ ದಿಕ್ಕಿಗೆ ಹೊರಟ ಭೀಮಸೇನನದ್ದೂ ಮಹಾ ದಂಡಯಾತ್ರೆಯೆ ಆಯಿತು.
ಮುಂದುವರಿಯುವುದು…




