
ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು ಇದೀಗ ಅವರ ಆಯ್ಕೆಯನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ಹೀಗಾಗಿ ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಾಲ್ ಅವರು ಕಂಗನಾ ಗೆ ನೋಟಿಸ್ ಕಳುಹಿಸಿ ಆಗಸ್ಟ್ 21 ರೊಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ.ಕಿನ್ನೌರ್ ನಿವಾಸಿ ಸ್ವತಂತ್ರ ಅಭ್ಯರ್ಥಿ ಲಾಯಿಕ್ ರಾಮ್ ನೇಗಿ ಎಂಬವರು ಈ ಅರ್ಜಿ ಸಲ್ಲಿಸಿದ್ದು ನಿಗದಿತ ಮಾನದಂಡಗಳನ್ನು ಪೂರೈಸಿದ್ದರೂ, ತಮ್ಮ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಅವರು ಈ ಅರ್ಜಿಯ ಮೂಲಕ ವಾದಿಸಿದ್ದಾರೆ.
ಅರಣ್ಯ ಇಲಾಖೆಯ ಮಾಜಿ ಉದ್ಯೋಗಿಯಾಗಿರುವ ರಾಮ್ ನೇಗಿ ಅವರು ಅಕಾಲಿಕ ನಿವೃತ್ತಿಯನ್ನು ತೆಗೆದುಕೊಂಡಿದ್ದರು. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 100ರ ಅಡಿಯಲ್ಲಿ ಮಂಡಿಯಲ್ಲಿ ಚುನಾವಣೆಗೆ ಸವಾಲು ಹಾಕಿದರೆ ಅರ್ಜಿದಾರನು ತನ್ನ ನಾಮಪತ್ರವನ್ನು ಅಕ್ರಮವಾಗಿ ತಿರಸ್ಕರಿಸಲಾಗಿದೆ ಎಂದು ಸಾಬೀತುಪಡಿಸಲು ವಿಫಲವಾದಲ್ಲಿ ನ್ಯಾಯಾಲಯವು ಅಸಿಂಧು ಎಂದು ಘೋಷಿಸಬಹುದು.











