
ಬೆಂಗಳೂರು: ಬೆಂಗಳೂರು–ಮುಂಬೈ ನಡುವೆ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಲು ಅನುಮತಿ ನೀಡಲಾಗಿದೆ.
ಹೊಸ ರೈಲು ಕೆಎಸ್ಆರ್ ಬೆಂಗಳೂರು ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವೆ ಸಂಚರಿಸಲಿದೆ. ಈ ಯೋಜನೆಗೆ ವೇಗ ಸಿಕ್ಕಿರುವುದಕ್ಕೆ ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಅವರ ನಿರಂತರ ಒತ್ತಾಯವೇ ಕಾರಣವಾಗಿದೆ. ಡಿಸೆಂಬರ್ 2ರಂದು ನೈಋತ್ಯ ರೈಲ್ವೆ ಸ್ಥಾಯಿ ಸಮಿತಿಯ ಭೇಟಿಯ ವೇಳೆ ಅವರು ವಂದೇ ಭಾರತ್ ಸ್ಲೀಪರ್ ಸೇವೆ ಪರಿಚಯಿಸುವ ಅಗತ್ಯವನ್ನು ಒತ್ತಿಹೇಳಿದ್ದರು. ಜೊತೆಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ಆರಂಭ ಅಥವಾ ಅಂತಿಮ ನಿಲ್ದಾಣವಾಗಿಸಲು ಸಲಹೆ ನೀಡಿದ್ದರು.
ಇದೀಗ ಈ ಮಾರ್ಗದಲ್ಲಿ ಅನೇಕ ರೈಲುಗಳು ಓಡುತ್ತಿದ್ದರೂ ನೇರ ಸಂಪರ್ಕ ನೀಡುತ್ತಿರುವುದು ಉದ್ಯಾನ್ ಎಕ್ಸ್ಪ್ರೆಸ್ ಮಾತ್ರ. ಸುಮಾರು 1,136 ಕಿಮೀ ದೂರವನ್ನು ಈ ರೈಲು 23–24 ಗಂಟೆಗಳಲ್ಲಿ ಕವರ್ ಮಾಡುತ್ತದೆ. ಹೊಸ ವಂದೇ ಭಾರತ್ ಸ್ಲೀಪರ್ ರೈಲು ಆರಂಭವಾದರೆ ಪ್ರಯಾಣ ಅವಧಿ ಕಡಿಮೆಯಾಗುವ ಜೊತೆಗೆ ಪ್ರಯಾಣಿಕರಿಗೆ ಹೆಚ್ಚು ವೇಗದ ಮತ್ತು ಸುಖಕರ ಪ್ರಯಾಣ ಸಿಗುವ ನಿರೀಕ್ಷೆಯಿದೆ.








