
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಸಿಲಿಕಾನ್ ಸಿಟಿಯ ಜನರ ಸಮಸ್ಯೆಯನ್ನು ಆಲಿಸಲು ಪ್ರತಿ ಶನಿವಾರ ಮತ್ತು ಭಾನುವಾರ ‘ಬೆಂಗಳೂರು ನಡಿಗೆ’ ಕಾರ್ಯಕ್ರಮ ಆಯೋಜಿಸಿ, ನಗರದ ಪ್ರಮುಖ ಪಾರ್ಕ್ಗಳಿಗೆ ತೆರಳುತ್ತಿದ್ದು ಇಂದು ಮತ್ತಿಕೆರೆಯ ಜೆಪಿ ಪಾರ್ಕ್ಗೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಸಾರ್ವಜನಿಕ ಸಂವಾದ ವೇದಿಕೆಗೆ ಆರ್ಎಸ್ಎಸ್ ಗಣವೇಷದಲ್ಲಿ ಬಂದ ಶಾಸಕ ಮುನಿರತ್ನ ಹಾಗೂ ಡಿಕೆಶಿ ನಡುವೆ ಮಾತಿನ ಚಕಮಕಿ ನಡೆಯಿತು.
ನಾನು ಸ್ಥಳೀಯ ಶಾಸಕನಾದ್ರು ನನಗೆ ಆಹ್ವಾನ ನೀಡಿಲ್ಲ. ಅಲ್ಲಿಗೆ ಹೋದ ನನ್ನನ್ನು ಏಯ್ ಕರಿ ಟೋಪಿ, ಬಾರಯ್ಯ ಎಂದು ಕರೆದು ಅವಮಾನಿಸಿದ್ದಾರೆ. ಇದನ್ನು ಕಾಂಗ್ರೆಸ್ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮುನಿರತ್ನ ಅಸಮಾಧಾನ ಹೊರ ಹಾಕಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಮುನಿರತ್ನ ಆರ್ಎಸ್ಎಸ್ ಸಂಸ್ಥೆಗೆ ಅವಮಾನ ಮಾಡಿದ್ದಾರೆ. ಶಾಸಕರಾಗಿ ಬಂದು ವೇದಿಕೆ ಮೇಲೆ ಮಾತನಾಡಬಹುದಿತ್ತು. ಗಣವೇಷಧಾರಿಯಾಗಿ ಇಲ್ಲಿಗೆ ಬರುವ ಮೂಲಕ ಆರ್ಎಸ್ಎಸ್ ಸಂಸ್ಥೆಗೆ ಅವಮಾನಿಸಿದ್ದಾರೆ. ಇದ್ಯಾವ ಶಿಲಾನ್ಯಾಸ ಕಾರ್ಯಕ್ರಮ ಅಲ್ಲ. ಇದು ಸಾರ್ವಜನಿಕರ ಕಾರ್ಯಕ್ರಮವಾಗಿದ್ದು, ಯಾರು ಬೇಕಾದ್ರೂ ಇಲ್ಲಿಗೆ ಬರಬಹುದು. ನಿನ್ನೆ ಲಾಲ್ಬಾಗ್ ನಡಿಗೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್ ಬಂದಿದ್ದರು. ಪಬ್ಲಿಸಿಟಿಗಾಗಿ ಮುನಿರತ್ನ ಇಲ್ಲಿಗೆ ಬಂದಿದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ.
ಇದು ಜನರ ಸಮಸ್ಯೆ ಆಲಿಸುವ ಕಾರ್ಯಕ್ರಮವಾಗಿದ್ದು ಎಲ್ಲರಿಗೆ ಏನು ಗೌರವ ಕೊಡಬೇಕು ಅದು ಕೊಟ್ಟಿದ್ದೇವೆ. GBA ಮೀಟಿಂಗ್ ಗೆ ಬಂದಿಲ್ಲ, ಅಲ್ಲಿ ಬಂದು ಸಮಸ್ಯೆ ಹೇಳಿಲ್ಲ. ಇಲ್ಲಿ ಬಂದು ಈ ರೀತಿ ಮಾತಾಡ್ತಿದ್ದಾರೆ ಎಂದು ಮುನಿರತ್ನ ವಿರುದ್ಧ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.






















































